ಸುಮಾರು 40 ರ ಪ್ರಾಯದ ದಗ್ಡು ತನ್ನ ಕುಟುಂಬವು ಹೊಂದಿದ್ದ ಜಮೀನನ್ನು ಮತ್ತು ಅದನ್ನು ಹಲವು ವರ್ಷಗಳ ಹಿಂದೆ ತೊರೆದು ಬಂದ ದಿನಗಳನ್ನು ನೆನಪಿಸಿಕೊಳ್ಳುತ್ತಾನೆ. ಪ್ರಸ್ತುತ ಹೊಟ್ಟೆಪಾಡಿಗಾಗಿ ಇವನ ಮತ್ತು ಈತನ ಸಂಬಂಧಿಯ ಕೆಲಸವು ಇದೊಂದೇ. ಲಕ್ಷ್ಮಣ ಮತ್ತು ದಗ್ಡುವಿನ ಪತ್ನಿಯರೂ ಕೂಡ ಅಹಮದನಗರದ ಬಳಿಯಿರುವ ಅವರ ಹಳ್ಳಿಯಲ್ಲಿ ಕಲ್ಲಿನ ಕೆಲಸವನ್ನೇ ಮಾಡುತ್ತಿದ್ದಾರೆ. ಕಲ್ಲುಗಳನ್ನು ಒಡೆದು ಟಾರ್ ರಸ್ತೆಗಳ ನಿರ್ಮಾಣದಲ್ಲಿ ಬಳಕೆಯಾಗುವ ಸಣ್ಣಕಲ್ಲುಗಳನ್ನು ಇವರು ಸಿದ್ಧಪಡಿಸುತ್ತಾರಂತೆ.
ವಸಾಯಿಯ ಇತರರಂತೆ ದುಕ್ರೆ ಕುಟುಂಬದ ಸದಸ್ಯರೂ ಕೂಡ ಗುತ್ತಿಗೆದಾರರ ಆಣತಿಯಂತೆ ವಿವಿಧ ಭಾಗಗಳಿಗೆ ಸಾಗುತ್ತಾರೆ. ''ಅವರು ಎಲ್ಲೆಲ್ಲಾ ಕೆಲಸವು ಇದೆಯೆಂದು ಹೇಳುತ್ತಾರೋ ಅಲ್ಲಿಗೆ ನಾವು (ನಮ್ಮ ಸ್ವಂತ ಖರ್ಚಿನಲ್ಲಿ) ಹೋಗುತ್ತೇವೆ'', ಎನ್ನುತ್ತಿದ್ದಾನೆ ಲಕ್ಷ್ಮಣ. ''ಬೆಣ್ಣೆ-ಪಾವ್ ನ ಮೇಲೆ ಅವಲಂಬಿತರಾಗಿ ಕೆಲಸಕ್ಕಾಗಿ ಕಾಯುತ್ತಾ ಅಲ್ಲಿ ಕೆಲವು ದಿನಗಳ ಮಟ್ಟಿಗೆ ಇರುತ್ತೇವೆ. ಕೆಲಸವು ಸಿಕ್ಕಿತು ಅಂದರೆ ಸರಿ. ಇಲ್ಲವಾದರೆ ಒಂದು ರೀತಿಯಲ್ಲಿ ಇದು ನಮ್ಮ ಕಪಾಳಕ್ಕೊಂದು ಬಿಗಿದಂತೆಯೇ. ನಂತರ ಯಥಾಪ್ರಕಾರ (ವಾಡರ್ ವಾಡಿಗೆ) ಮರಳುತ್ತೇವೆ'', ಎಂದು ಆತ ಮುಂದುವರಿಸುತ್ತಾನೆ.
ತಾನು ವಾಡರ್ ಆಗಿರುವ ಬಗ್ಗೆ ಲಕ್ಷ್ಮಣನಿಗೆ ಮಿಶ್ರಭಾವಗಳಿವೆ. ಅದ್ಭುತ ವಿನ್ಯಾಸಗಳನ್ನೊಳಗೊಂಡ ಶಿಲ್ಪಗಳನ್ನು, ಸ್ಮಾರಕಗಳನ್ನು ಒಂದು ಕಾಲದಲ್ಲಿ ರಚಿಸಿದ ತನ್ನ ಪೂರ್ವಜರ ಬಗ್ಗೆ ಅಚ್ಚರಿ, ಗೌರವ ಎರಡೂ ಆತನಿಗಿದೆ. ಅವರು 'ದೇವರ ಮನುಷ್ಯ'ರಾಗಿದ್ದರು ಎಂದು ಅವನು ಹೇಳಿಕೊಳ್ಳುವುದೂ ಇದೆ. ಆದರೆ ತನ್ನ ಸಮುದಾಯಕ್ಕಂಟಿಕೊಂಡ ಬಡತನದ ಬಗ್ಗೆ ಆತನಿಗೆ ತೀವ್ರವಾದ ಹತಾಶೆಯೂ ಇದೆ. ''ವಡಾರ್ ಜೀವನವನ್ನು ನನ್ನ ತಂದೆಗೆ ನೀಡಿದವರು ಯಾರು? ಈ ವೃತ್ತಿಗಾಗಿಯೇ ಹುಟ್ಟಿಕೊಂಡವರಂತೆ ವೃತ್ತಿಯನ್ನು ಕಲಿಸಿದ್ದು ಯಾರು? ಆತ ಒಂದಿಷ್ಟು ಓದಿ ನೌಕರಿಯನ್ನೇನಾದರೂ ಪಡೆದುಕೊಂಡಿದ್ದರೆ ಬಹಳಷ್ಟು ಸಂಗತಿಗಳು ಬದಲಾಗುತ್ತಿದ್ದವು...'', ಎನ್ನುತ್ತಿದ್ದಾನೆ ಆತ.
ಈಗ 66 ರ ಹೊಸ್ತಿಲಲ್ಲಿರುವ ಲಕ್ಷ್ಮಣ ತನ್ನ ಪೂರ್ವಜರೂ ಕೂಡ ಈ ವೃತ್ತಿಯಲ್ಲಿ ತೊಡಗಿದ್ದರಿಂದಾಗಿ ತನ್ನ ತಂದೆ ಮತ್ತು ತಾತನಿಂದ ಬರೋಬ್ಬರಿ 50 ವರ್ಷಗಳ ಹಿಂದೆ ವೃತ್ತಿಯನ್ನು ಕಲಿತವನು. ''ಮನೆಯ ಬಾಲಕನೊಬ್ಬನು 10-11 ರ ಪ್ರಾಯಕ್ಕೆ ಬಂದೊಡನೆಯೇ ಆತನ ಕೈಗೆ ಸುತ್ತಿಗೆಯೊಂದನ್ನು ಕೊಟ್ಟು ಅದನ್ನು ಬಳಸುವ ವಿಧಾನವನ್ನು ಕಲಿಸಲಾಗುತ್ತದೆ. ಈ ಮಧ್ಯೆ ಅವನು ತನ್ನ ಬೆರಳುಗಳನ್ನು ಮುರಿದುಕೊಂಡರೂ ಅಚ್ಚರಿಯಿಲ್ಲ. ಇದಾದ ಕೆಲವೇ ತಿಂಗಳುಗಳಲ್ಲಿ ಆತ ವೃತ್ತಿಯನ್ನು ಕಲಿತು ವಯಸ್ಕರಂತೆ ದುಡಿದು ಸಂಪಾದಿಸಲು ಹೊರಡುತ್ತಾನೆ'', ಎಂದು ವಿವರಿಸುತ್ತಿದ್ದಾನೆ ಲಕ್ಷ್ಮಣ.