ಗಡ್ಡಮಿಡಿ ರಾಜೇಶ್ವರಿ 2018ರಲ್ಲಿ ಭೂಮಿಯ ಹಕ್ಕು ಪಡೆದೆ ಎಂದುಕೊಂಡರು. “ಆ ದಿನ ನಾನು ಬಹಳ ಸಂಭ್ರಮದಲ್ಲಿದ್ದೆ! ನಾನು ಭೂಮಿಯ ಹಕ್ಕು ಹೊಂದಿರುವ ಮಹಿಳೆಯೆನ್ನುವ ಹೆಮ್ಮೆಯಲ್ಲಿದ್ದೆ.”
ಅವರು ಹಾಗೆ ಭಾವಿಸಲು ಕಾರಣವಾಗಿದ್ದು ಅವರ ಕೈಯಲ್ಲಿದ್ದ ಅಧಿಕೃತ ಹಕ್ಕುಪತ್ರ.
ಇದಾಗಿ ಐದು ವರ್ಷಗಳ ನಂತರವೂ ಅವರು ಎಂಕೆಪಲ್ಲಿಯಲ್ಲಿರುವ ತಮ್ಮ ಮನೆಯಿಂದ 30 ಕಿಲೋಮೀಟರ್ ದೂರದಲ್ಲಿರುವ ಬಾರವಾಡದ ತಮ್ಮ 1.28 ಎಕರೆ ಭೂಮಿಯ ಮಾಲಿಕತ್ವವನ್ನು ಸರ್ಕಾರ ಗುರುತಿಸಬಹುದು ಎನ್ನುವ ನಿರೀಕ್ಷೆಯಲ್ಲಿ ಕಾಯುತ್ತಿದ್ದಾರೆ. ಇದಕ್ಕಾಗಿ ಅವರು ರೂ. 30,000 ಕೂಡಾ ಪಾವತಿಸಿದ್ದಾರೆ.
ಜಮೀನು ಖರೀದಿಸಿದ ಕೆಲವೇ ತಿಂಗಳಿನಲ್ಲಿ ರಾಜೇಶ್ವರಿಯವರ ಬಳಿ ಹಕ್ಕುಪತ್ರ, ಎನ್ಕಂಬರೆನ್ಸ್ ಸ್ಟೇಟ್ಮೆಂಟ್ ಮತ್ತು ಪಟ್ಟಾದಾರ್ ಪಾಸ್ ಬುಕ್ ಪಡೆಯಲು ಅಗತ್ಯವಿದ್ದ ಎಲ್ಲಾ ದಾಖಲೆಗಳೂ ಇದ್ದವು. ಆದರೆ ಅವುಗಳು ಅಸ್ಪಷ್ಟವಾಗಿವೆ ಎನ್ನಲಾಯಿತು. “ಈಗ ಐದು ವರ್ಷಗಳು ಕಳೆದಿವೆ ನನಗೆ ಇನ್ನೂ ನನ್ನ ಪಟ್ಟಾದಾರ್ [ಭೂಮಿ ಹಕ್ಕು] ಪಾಸ್ ಬುಕ್ ದೊರೆತಿಲ್ಲ. ಈ ಪಟ್ಟೆದಾರ್ ಪಾಸ್ ಬುಕ್ ಇಲ್ಲದಿರುವಾಗ ಇದು [ಭೂಮಿ] ನಿಜಕ್ಕೂ ನನ್ನದಾಗುತ್ತದೆಯೇ?”
ಭೂಮಿಯ ಮಾಲೀಕತ್ವವು ಹೇಗೆ ವರ್ಗಾವಣೆಯಾಗಿದೆಯೆನ್ನುವುದನ್ನು ಹಕ್ಕುಪತ್ರವು ವಿವರಿಸಿದರೆ, ಪಟ್ಟಾದಾರ್ ಪಾಸ್ ಬುಕ್ ಮಾಲಿಕತ್ವದ ಕುರಿತ ಇನ್ನಿತರ ವಿವರಗಳನ್ನು ನೀಡುತ್ತದೆ. ಇದರಲ್ಲಿ ಪಟ್ಟಾದಾರರ ಹೆಸರು, ಸರ್ವೇ ಸಂಖ್ಯೆ, ಜಮೀನಿನ ಪ್ರಕಾರ ಇತ್ಯಾದಿ ವಿವರಗಳಿರುತ್ತವೆ. ಇದು ಭೂಮಿಯ ಮಾಲಿಕರ ಪಾಸ್ಪೋರ್ಟ್ ಸೈಜ್ ಫೋಟೊ ಮತ್ತು ತಹಶೀಲ್ದಾರ್ (ಕಂದಾಯ ಸಂಗ್ರಾಹಕರ) ಸಹಿಯನ್ನು ಸಹ ಹೊಂದಿರುತ್ತದೆ.











