60 ವರ್ಷ ಪ್ರಾಯದ ಸುಬ್ಬಯ್ಯ ಕಳೆದ ಕೆಲವು ವರ್ಷಗಳಿಂದ ಈ ಪ್ರದೇಶದಲ್ಲಿನ ಇತರ ರೈತರು ತಮ್ಮ ಜಮೀನಿನಲ್ಲಿರುವ ಆಲದ ಮರಗಳನ್ನು (ಫಿಕಸ್ ಬೆಂಗಾಲೆನ್ಸಿಸ್) ಮಾರುತ್ತಿರುವುದನ್ನು ಆತಂಕದಿಂದಲೇ ನೋಡುತ್ತಿದ್ದರು. ಎರಡು ದಶಕಗಳ ಹಿಂದೆ ಸುಬ್ಬಯ್ಯ ಕೂಡ ತಮ್ಮ ಎರಡು ಎಕರೆ ಭೂಮಿಯಲ್ಲಿ ಅರಳಿ ಗಿಡವನ್ನು ನೆಟ್ಟು ಬೆಳೆಸಿದ್ದರು. ಈ ಸಸಿ ಬೆಳೆದು ದೊಡ್ಡ ಮರವಾಗಿ ವಿಶಾಲವಾಗಿ ಹರಡಿ ಬಿಸಿಲಿನ ಬೇಗೆಯಲ್ಲಿ ನೆರಳನ್ನು ನೀಡುತ್ತಿತ್ತು.
ಈಗ ಸುಬ್ಬಯ್ಯನವರು ತನ್ನ ಪತ್ನಿಯ ಚಿಕಿತ್ಸೆಯ ಖರ್ಚಿಗಾಗಿ ತಾವು ಬೆಳೆಸಿದ ಆಲದ ಮರವನ್ನು ಕೇವಲ 8,000 ರೂಪಾಯಿಗೆ ಮಾರಬೇಕಾಗಿದೆ. ಎರಡು ವರ್ಷಗಳ ಹಿಂದೆ, ಗೌರಿ-ಗಣೇಶ ಹಬ್ಬದ (ಕರ್ನಾಟಕದ ಹಬ್ಬ) ಹದಿನೈದು ದಿನಗಳ ಮೊದಲು, ಸುಬ್ಬಯ್ಯನವರ ಪತ್ನಿ 56 ವರ್ಷದ ಮಹದೇವಮ್ಮನವರು ಮೇಕೆಗಳನ್ನು ಮೇಯಿಸುವಾಗ ಕಲ್ಲು ಎಡವಿ ಬಿದ್ದು ಆವರ ಸೊಂಟ ಮುರಿದಿತ್ತು.
“ಆಡುಗಳ ಹಿಂಡಿನಿಂದ ದಾರಿ ತಪ್ಪಿದ ಮರಿಯನ್ನು ಬೆನ್ನಟ್ಟಿ ಓಡುತ್ತಿದ್ದೆ. ಆಗ ನನಗೆ ಕಲ್ಲು ಇದ್ದಿದ್ದು ಕಾಣಿಸಲಿಲ್ಲ. ಬಿದ್ದ ಮೇಲೆ ಎದ್ದು ನಿಲ್ಲಲೂ ನನಗೆ ಸಾಧ್ಯವಾಗಲಿಲ್ಲ,” ಎಂದು ಮಹದೇವಮ್ಮ ತಮ್ಮ ದುರಾದೃಷ್ಟದ ದಿನವನ್ನು ನೆನಪಿಸಿಕೊಳ್ಳುತ್ತಾ ಹೇಳುತ್ತಾರೆ. “ನನಗೆ ವಿಪರೀತ ನೋವಿತ್ತು. ಅದೃಷ್ಟವಶಾತ್, ದಾರಿಯಲ್ಲಿ ಹೋಗುತ್ತಿದ್ದವರು ನನಗೆ ಮನೆಗೆ ಹೋಗಲು ನೆರವಾದರು," ಎನ್ನುತ್ತಾರೆ.
ಈ ಘಟನೆ ಈಗಾಗಲೇ ನಲುಗಿರುವ ಈ ದಂಪತಿಗಳ ಪ್ರಪಂಚವನ್ನೇ ತಲೆಕೆಳಗಾಗಿಸಿತ್ತು.










