“ಒಂದು ಸಣ್ಣ ತಪ್ಪೇನಾದ್ರೂ ಆದ್ರೆ ಕೊಯ್ಟಾ ಹೋಗಿ ಸಟ್ಟೂರು ಸಿಗುತ್ತದೆ!” ಎಂದು ರಾಜೇಶ್ ಚಾಫೇಕರ್ ಕಸಾಯಿಖಾನೆಯಲ್ಲಿ ಬಳಸುವ ಚಾಕು ಮತ್ತು ಕುಡುಗೋಲಿನ ನಡುವೆ ಇರುವ ವ್ಯತ್ಯಾಸವನ್ನು ತಿಳಿಸುತ್ತಾರೆ. ಒಬ್ಬ ಅನುಭವಿ ಲೋಹರ್ (ಕಮ್ಮಾರ) ಆಗಿರುವ ಇವರು ಮಹಾರಾಷ್ಟ್ರದ ಆಕ್ಟಾನ್ ಗ್ರಾಮದಲ್ಲಿರುವ ತಮ್ಮ ವರ್ಕ್ಶಾಪ್ನಲ್ಲಿ 10,000 ಕ್ಕೂ ಹೆಚ್ಚು ಕಬ್ಬಿಣದ ಉಪಕರಣಗಳನ್ನು ತಯಾರಿಸಿದ್ದಾರೆ.
52 ವರ್ಷ ವಯಸ್ಸಿನ ಇವರು ತಮ್ಮ ತಂದೆ ದತ್ತಾತ್ರೇ ಚಾಫೇಕರ್ ಅವರಿಂದ ಈ ವೃತ್ತಿಯನ್ನು ಕಲಿತರು. ಇವರು ಮಹಾರಾಷ್ಟ್ರದ ರೈತ ಗ್ರಾಹಕರ ಗೌರವಕ್ಕೆ ಪಾತ್ರವಾಗಿರುವ ಪಾಂಚಾಲ್ ಲೋಹರ್ಗಳ ದೀರ್ಘ ಪರಂಪರೆಗೆ ಸೇರಿದವರು. "ಜನರು 'ಆಕ್ಟಾನ್ ಸೆ ಹಿ ಹತ್ಯಾರ್ ಲೇಕೆ ಆವೋ' [ಹತ್ಯಾರುಗಳನ್ನು ಆಕ್ಟಾನ್ನಿಂದ ಮಾತ್ರ ಖರೀದಿಸಿ] ಎಂದು ಹೇಳುತ್ತಾರೆ," ಎಂದು ವಸೈ ತಾಲೂಕಿನಲ್ಲಿ ವಾಸಿಸುತ್ತಿರುವ ಏಳನೇ ತಲೆಮಾರಿನ ಕಮ್ಮಾರ ರಾಜೇಶ್ ಹೇಳುತ್ತಾರೆ. ಇವರಿಗೆ 25ಕ್ಕೂ ಹೆಚ್ಚು ಬಗೆಯ ಕೃಷಿ ಉಪಕರಣಗಳನ್ನು ತಯಾರಿಸಲು ಬರುತ್ತದೆ.
ದೋಣಿ ತಯಾರಿಕೆಯಲ್ಲಿ ಮಹತ್ವದ ಸಾಧನವಾದ ತಸ್ನಿಯ ದೊಡ್ಡ ಆರ್ಡರ್ಗಳನ್ನು ಕೊಡಲು ಗ್ರಾಹಕರು ಸುಮಾರು 90 ಕಿಲೋಮೀಟರ್ ದೂರದ ನವಿ ಮುಂಬೈನ ಉರಾನ್ನಿಂದ ಬರುತ್ತಿದ್ದರು. "ಗಿರ್ಹೈಕ್ಗಳು [ಗ್ರಾಹಕರು] ನಾಲ್ಕು ದಿನ ನಮ್ಮ ಮನೆಯಲ್ಲಿಯೇ ಇದ್ದು, ನಾವು ಉಪಕರಣವನ್ನು ತಯಾರಿಸುವುದನ್ನು ಆರಂಭದಿಂದಲೇ ಗಮನಿಸುತ್ತಿದ್ದರು," ಎಂದು ಅವರು ನೆನಪಿಸಿಕೊಳ್ಳುತ್ತಾರೆ.
ಆಕ್ಟಾನ್ ಹಳ್ಳಿಯಲ್ಲಿ ಕಿರಿದಾದ ಬೀದಿಗಳನ್ನು ಸಾಂಪ್ರದಾಯಿಕವಾಗಿಯೇ ಜಾತಿ ಆಧಾರಿತ ಉದ್ಯೋಗಗಳ ಮೇಲೆ ಕರೆಯಲಾಗುತ್ತದೆ: ಸೋನಾರ್ (ಚಿನಿವಾರ), ಲೋಹರ್ (ಕಮ್ಮಾರ), ಸುತಾರ್ (ಬಡಗಿ), ಚಂಬಾರ್ (ಚಮ್ಮಾರ) ಮತ್ತು ಕುಂಬಾರ್ (ಕುಂಬಾರ) ಎಂದೆಲ್ಲಾ ಗುರುತಿಸಲಾಗುತ್ತದೆ. ಈ ಹಳ್ಳಿಯ ಜನರು ಇವರನ್ನು ದೇವತೆಗಳ ಶಿಲ್ಪಿ ವಿಶ್ವಕರ್ಮನ ಶಿಷ್ಯರು ಎಂದು ಕರೆಯುತ್ತಾರೆ. 2008 ರಿಂದ ಪಾಂಚಾಲ್ ಲೋಹರ್ಗಳನ್ನು ಅಲೆಮಾರಿ ಬುಡಕಟ್ಟುಗಳ ಪಟ್ಟಿಯಲ್ಲಿ ಸೇರಿಸಲಾಗಿದೆ. ಮೊದಲು ಅವರನ್ನು ಒಬಿಸಿ (ಇತರ ಹಿಂದುಳಿದ ವರ್ಗಗಳು) ಎಂದು ವರ್ಗೀಕರಿಸಲಾಗಿತ್ತು.
19 ವರ್ಷದವರಿದ್ದಾಗ ತಮಗೆ ತಮ್ಮ ಕುಟುಂಬದ ಉದ್ಯೋಗವಾದ ಕಮ್ಮಾರಿಕೆಯನ್ನು ಮುಂದುವರಿಸುವ ಯೋಚನೆಯಿರಲಿಲ್ಲ ಎಂದು ರಾಜೇಶ್ ಹೇಳುತ್ತಾರೆ. ಅವರು ತಿಂಗಳಿಗೆ 1,200 ರುಪಾಯಿ ಸಂಬಳಕ್ಕೆ ಎಲೆಕ್ಟ್ರಾನಿಕ್ಸ್ ಅಂಗಡಿಯೊಂದರಲ್ಲಿ ಸ್ಟೋರ್ ಕೀಪರ್ ಆಗಿ ಕೆಲಸ ಮಾಡುತ್ತಿದ್ದರು. ಕೆಲವು ವರ್ಷಗಳ ನಂತರ, ಇವರ ದೊಡ್ಡ ಅವಿಭಕ್ತ ಕುಟುಂಬ ಸಂಕಷ್ಟಕ್ಕೆ ಸಿಲುಕಿ ಇವರ ತಂದೆ ಕೆಲಸ ಕಳೆದುಕೊಂಡರು. ಆಗ ಮನೆಯ ಹಿರಿಮಗನಾದ ರಾಜೇಶ್ ಈ ಉದ್ಯಮ ಶುರುಮಾಡಬೇಕಾಯ್ತು.
























