ಅಂಜನ್ ಗ್ರಾಮದ ಬಳಿ ಇರುವ ಪವಿತ್ರ ಗುಡ್ಡವು ಕೇಸರಿ ಮತ್ತು ಬಿಳಿ ಧ್ವಜಗಳಿಂದ ಆವೃತವಾಗಿದೆ. ಇದರಲ್ಲಿ ಬಿಳಿ ಧ್ವಜಗಳು ಸರ್ನಾ - ಪ್ರಕೃತಿಯನ್ನು ಆರಾಧಿಸುವ ಬುಡಕಟ್ಟು ಸಮುದಾಯಗಳಿಗೆ ಸೇರಿವೆ. ಇವು ಜಾರ್ಖಂಡ್ನ ಗುಮ್ಲಾ ಜಿಲ್ಲೆಯ ಉರಾಂವ್ ಆದಿವಾಸಿಗಳ ಧ್ವಜಗಳಾಗಿವೆ. ಕೇಸರಿ ಧ್ವಜಗಳು 1985ರಲ್ಲಿ ಬೆಟ್ಟದ ತುದಿಯಲ್ಲಿ ಹನುಮಾನ್ ದೇವಾಲಯವನ್ನು ನಿರ್ಮಿಸಿದ ಹಿಂದೂಗಳಿಗೆ ಸೇರಿದ್ದು. ಇದನ್ನು ಅವರು ಹನುಮಂತ ದೇವರ ಜನ್ಮಸ್ಥಳವೆಂದು ಹೇಳುತ್ತಾರೆ.
ಇಲ್ಲಿನ ಬಿದಿರಿನಿಂದ ಮಾಡಿದ ಸ್ವಾಗತ ಗೋಪುರದ ಮೇಲಿನ ಎರಡು ಬ್ಯಾನರ್ಗಳು ಭಕ್ತಾದಿಗಳನ್ನು ಸ್ವಾಗತಿಸುತ್ತವೆ. ಅದರಲ್ಲಿ ಒಂದು ಅರಣ್ಯ ಇಲಾಖೆ ಮತ್ತು ಅಂಜನ್ ಗ್ರಾಮದ ಜನರು ಜಂಟಿಯಾಗಿ ನಡೆಸುತ್ತಿರುವ ಗುಮ್ಲಾ ವನ ಪ್ರಬಂಧನ್ ಮಂಡಲ್ (ಸಂಯುಕ್ತ ಗ್ರಾಮ ವನ ಪ್ರಬಂಧನ್ ಸಮಿತಿ ಎಂದು ಏಕೀಕೃತವಾಗಿದೆ) ಎನ್ನುವ ಸಂಸ್ಥೆಯದ್ದು. ಇದು 2016ರಿಂದ ಯಾತ್ರಾ ಸ್ಥಳದ ನಿರ್ವಹಣೆಯನ್ನು ನಿರ್ವಹಿಸುತ್ತಿದೆ. ಇನ್ನೊಂದು 2019ರಲ್ಲಿ ಸ್ಥಾಪನೆಯಾದ ಹಿಂದೂಗಳ ಅಂಜನ್ ಧಾಮ್ ಮಂದಿರ ವಿಕಾಸ್ ಸಮಿತಿಯದ್ದು. ಅದು ಇಲ್ಲಿನ ದೇವಾಲಯವನ್ನು ನೋಡಿಕೊಳ್ಳುತ್ತದೆ.
ಸ್ವಾಗತ ದ್ವಾರದ ಒಳಗೆ ಹೋದರೆ ಅಲ್ಲಿ ಎರಡು ಮೆಟ್ಟಿಲುಗಳು ಸ್ವಾಗತಿಸುತ್ತವೆ. ಎರಡೂ ಒಂದೊಂದು ಪೂಜಾಸ್ಥಳದತ್ತ ನಮ್ಮನ್ನು ಕರೆದೊಯ್ಯುತ್ತವೆ. ಒಂದು ನೇರ ಬೆಟ್ಟದ ತುದಿಯಲ್ಲಿರುವ ಹನುಮಾನ್ ದೇವಸ್ಥಾನ್ಕಕೆ ಕರೆದೊಯ್ದರೆ, ಇನ್ನೊಂದು ಮೆಟ್ಟಿಲು ಎರಡು ಗುಹೆಗಳ ಬಳಿ ಕರೆದೊಯ್ಯುತ್ತದೆ. ಈ ಗುಹೆಗಳ ಬಳಿ ಹಿಂದೂ ದೇವಸ್ಥಾನ ಅಸ್ತಿತ್ವಕ್ಕೆ ಬರುವ ಮೊದಲೇ ಶತಮಾನಗಳ ಕಾಲದಿಂದ ಆದಿವಾಸಿಗಳು ಪಾಹಣ್ ಎನ್ನುವ ಪೂಜೆಗಳನ್ನು ನಡೆಸಿಕೊಂಡು ಬಂದಿದ್ದರು.
ಬೆಟ್ಟದ ಮೇಲೆ ಒಟ್ಟು ನಾಲ್ಕು ಕಾಣಿಕೆ ಡಬ್ಬಿಗಳಿವೆ. ಒಂದು ಗುಹೆಯ ಬಳಿಯಿದ್ದರೆ, ಇನ್ನೊಂದು ದೇವಾಲಯದ ಒಳಗಿದೆ. ಮೂರನೆಯದು ಬಜರಂಗ ದಳಕ್ಕೆ ಸೇರಿದ್ದು ಇದು ಅಂಗಳದಲ್ಲಿದೆ. ಈ ಪೆಟ್ಟಿಗೆಯಲ್ಲಿ ಸಂಗ್ರಹವಾದ ಹಣವನ್ನು ಸಂತರ ಆಚರಣೆಯಾದ ಮಂಗಳವಾರದ ಭಂಡಾರಕ್ಕೆ ಬಳಸಲಾಗುತ್ತದೆ. ಇದರೊಂದಿಗೆ ನಾಲ್ಕನೆಯದಾಗಿ ಹಳ್ಳಿಗೆ ಸಮೀಪದಲ್ಲಿ ಬೆಟ್ಟದ ತಪ್ಪಲಿನಲ್ಲಿ ಇನ್ನೊಂದು ಡಬ್ಬಿಯಿದೆ. ಈ ಡಬ್ಬಿಯಲ್ಲಿನ ಹಣವನ್ನು ಆದಿವಾಸಿಗಳು ಪೂಜೆಗೆ ಬೇಕಾಗುವ ಪೂಜಾ ಸಾಹಿತ್ಯಗಳನ್ನು ಖರೀದಿಸಲು ಬಳಸುತ್ತಾರೆ.
“ಇದು ಪೂರ್ತಿಯಾಗಿ ಆದಿವಾಸಿ ಕ್ಷೇತ್ರ. ಈ ಮೊದಲು ಅಂಜನ್ನಲ್ಲಿ ಯಾವುದೇ ಪಂಡಿತರು (ಬ್ರಾಹ್ಮಣ) ಇದ್ದಿರಲಿಲ್ಲ” ಎಂದು 42 ವರ್ಷದ ರಂಜಯ್ ಉರಾಂವ್ ಹೇಳುತ್ತಾರೆ. ಇವರು ರೈತರಾಗಿದ್ದು, ಗ್ರಾಮದ ಮುಖ್ಯಸ್ಥರೂ ಹೌದು. ಅವರು ಈ ಧಾರ್ಮಿಕ ಸ್ಥಳದಲ್ಲಿನ ವಿಚಿತ್ರ ವ್ಯವಸ್ಥೆಗಳ ಕುರಿತಾದ ನನ್ನ ಕುತೂಹಲಗಳಿಗೆ ಅವರು ಉತ್ತರಿಸುತ್ತಿದ್ದರು. “ಇತ್ತೀಚೆಗೆ ಬನಾರಸ್ನಿಂದ ಪಂಡಿತರು ಇಲ್ಲಿಗೆ ಬಂದಿದ್ದಾರೆ. ಇದಕ್ಕೂ ಮೊದಲು ಇಲ್ಲಿನ ಉರಾಂವ್ ಆದಿವಾಸಿಗಳು ಪ್ರಕೃತಿ ದೇವತೆಯಾದ ಅಂಜನಿಯನ್ನು ಪೂಜಿಸುತ್ತಿದ್ದರು. ಆದರೆ ಈ ಅಂಜನಿ ಹನುಮಂತನಿಗೆ ಸಂಬಂಧಿ ಎನ್ನುವುದು ನಮಗೆ ತಿಳಿದಿರಲಿಲ್ಲ” ಎಂದು ಅವರು ಹೇಳುತ್ತಾರೆ.
ರಂಜಯ್ ಅವರ ಪ್ರಕಾರ, "ಪಂಡಿತರು ಬಂದು ಅಂಜನಿಯು ಹನುಮಂತನ ತಾಯಿಯೆನ್ನುವ ಕಥೆಯನ್ನು ಹರಡಿದರು. ಅಂಜನ್ ಬೆಟ್ಟವನ್ನು ಹನುಮಂತನ ಪವಿತ್ರ ಜನ್ಮಸ್ಥಳವೆಂದು ಘೋಷಿಸಲಾಯಿತು ಮತ್ತು ಇದೆಲ್ಲ ಏನೆಂದು ಅರ್ಥವಾಗುವ ಮೊದಲೇ ಬೆಟ್ಟದ ಮೇಲೆ ಹನುಮಾನ್ ದೇವಸ್ಥಾನವನ್ನು ನಿರ್ಮಿಸಲಾಯಿತು. ಮತ್ತು ಆ ಸ್ಥಳವನ್ನು ಅಂಜನ್ ಧಾಮ್ ಎಂದು ಘೋಷಿಸಲಾಯಿತು.”










