ಉತ್ತರ ಪ್ರದೇಶದ ಲಕ್ನೋದಲ್ಲಿದ್ದ ತನ್ನ ಬಾಡಿಗೆ ಮನೆಯ ಹಿತ್ತಲಿನಲ್ಲಿ ತನ್ನ ಮೂರು ವರ್ಷದ ಅತ್ತೆಯ ಮಗಳೊಂದಿಗೆ ಆಡುತ್ತಿದ್ದ 7 ವರ್ಷದ ಕಜ್ರಿಯನ್ನು ಯಾರೋ ಇಬ್ಬರು ಅಪಹರಿಸಿದ್ದರು.

ಇದು ನಡೆದ ಹತ್ತು ವರ್ಷಗಳ ನಂತರ, 2020ರ ಡಿಸೆಂಬರ್‌ ತಿಂಗಳಿನಲ್ಲಿ ಆಕೆಯ ಇನ್ನೊಬ್ಬ ಸೋದರಸಂಬಂಧಿ – ಬ್ಯಾಂಕ್‌ ಏಜೆಂಟ್‌ - ಕೆಲಸದ ಮೇಲೆ ನಗರದಲ್ಲಿರುವ ಮನೆಯೊಂದಕ್ಕೆ ಭೇಟಿ ನೀಡಿದ್ದರು. ಅಲ್ಲಿ ಅವರಿಗೆ ಕಜ್ರಿಯಂತೆ ಕಾಣುವ ಹುಡುಗಿಯೊಬ್ಬಳು ನೆಲ ಒರೆಸುತ್ತಿರುವುದು ಕಾಣಿಸಿತು. ಅವರು ಆಗ ಆ ಹುಡುಗಿಯನ್ನು ಮಾತನಾಡಿಸಿ ಅವಳ ಅಪ್ಪನ ಹೆಸರನ್ನು ಕೇಳಲು ಪ್ರಯತ್ನಿಸಿದರು. ಆದರೆ ಓರ್ವ ಮಹಿಳೆ ಆ ಹುಡುಗಿಯ ಜೊತೆ ಮಾತನಾಡದಂತೆ ತಡೆದಳು. ಆಗ ಅಲ್ಲಿಂದ ಮನೆಗೆ ಮರಳಿದ ಕಜ್ರಿಯ ಸಂಬಂಧಿ ಹಿಂಸಾಚಾರದಿಂದ ಪೀಡಿತ ಮಹಿಳೆಯರು ಮತ್ತು ಬಾಲಕಿಯರ ಸಹಾಯಕ್ಕಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಸ್ಥಾಪಿಸಿದ ಲಕ್ನೋದ ಒನ್-ಸ್ಟಾಪ್ ಕೇಂದ್ರಕ್ಕೆ ಕರೆ ಮಾಡಿದರು. ಕೆಲವೇ ಗಂಟೆಗಳಲ್ಲಿ ಮೋಹನ್‌ ಲಾಲ್‌ ಗಂಜ್‌ ಪೊಲೀಸ್‌ ಠಾಣೆ ಮತ್ತು ಒನ್‌ ಸ್ಟಾಪ್‌ಗೆ ಸೇರಿದ ಪೊಲೀಸ್‌ ತಂಡವು ಆ ಮನೆಯ ಮೇಲೆ ದಾಳಿ ಮಾಡಿ ಕಜ್ರಿಯನ್ನು ರಕ್ಷಿಸಿ, ಅವಳನ್ನು ತನ್ನ ಕುಟುಂಬದೊಡನೆ ಸೇರಿಸಿದರು.

ಪ್ರಸ್ತುತ 21 ವರ್ಷದ ಕಜ್ರಿ ಮಾನಸಿಕ ಅಸಮರ್ಥತೆಯಿಂದ ಬಳಲುತ್ತಿದ್ದಾರೆ. ಅವರ ಬಾಯಿಯ ಮುಂಭಾಗದ ಕೆಳಗಿನ ಸಾಲಿನ ಹಲ್ಲುಗಳು ಕಾಣುತ್ತಿಲ್ಲ. ಕಳ್ಳಸಾಗಣೆ, ಲೈಂಗಿಕ ದೌರ್ಜನ್ಯ ಮತ್ತು ಬಾಲಕಾರ್ಮಿಕ ಕಿರುಕುಳಕ್ಕೆ ಬಲಿಯಾದ ಅವರಿಗೆ ಆ 10 ವರ್ಷಗಳ ಬಗ್ಗೆ ನೆನಪುಗಳು ಮಸುಕು ಮಸುಕಾಗಿ ಉಳಿದಿವೆ.

PHOTO • Jigyasa Mishra

ಕೇವಲ ಏಳು ವರ್ಷದ ಕಜ್ರಿಯನ್ನು ಆಕೆಯ ಮನೆಯಿಂದ ಅಪಹರಿಸಿ ಕಳ್ಳಸಾಗಣೆ ಮಾಡಿ , ಲೈಂಗಿಕ ದೌರ್ಜನ್ಯ ಎಸಗಿ ಮುಂದಿನ 10 ವರ್ಷಗಳ ಕಾಲ ಮನೆಕೆಲಸಕ್ಕೆ ಹಾಕಲಾಯಿತು

*****

“ಮೊದಲು ನಾನು ನೋವಿನಲ್ಲಿರುತ್ತಿದ್ದೆ, ಆದರೆ ಈಗ ಪೂರ್ತಿಯಾಗಿ ನಿರಾಶೆ ಮತ್ತು ಹತಾಶೆಗೆ ಒಳಗಾಗಿದ್ದೇನೆ” ಎಂದು ಕಜ್ರಿಯ 56 ವರ್ಷದ ತಂದೆ ಧೀರೇಂದ್ರ ಸಿಂಗ್ ಹೇಳುತ್ತಾರೆ. ಲಕ್ನೋದ ಖಾಸಗಿ ಕಾಲೇಜೊಂದರಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿರುವ ಅವರು ಬಾಡಿಗೆ ಮನೆಯಲ್ಲಿ ವಾಸವಿದ್ದಾರೆ. ಅವರ ಪತ್ನಿ ಮತ್ತು ಕಜ್ರಿ ಸೇರಿದಂತೆ ಇಬ್ಬರು ಹೆಣ್ಣುಮಕ್ಕಳೊಂದಿಗೆ ಉತ್ತರ ಪ್ರದೇಶದ ಹರ್ದೋಯ್ ಜಿಲ್ಲೆಯಲ್ಲಿರುವ ಸ್ವಂತ ಮನೆಯಲ್ಲಿ ವಾಸಿಸುತ್ತಿದ್ದಾರೆ.

"ನಾನು ಸುಮಾರು 15 ವರ್ಷಗಳಿಂದ ಲಕ್ನೋದ ವಿವಿಧ ಕಂಪನಿಗಳು ಅಥವಾ ಕಾಲೇಜುಗಳಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡಿದ್ದೇನೆ. ಆದರೆ 2021ರಿಂದ, ನನಗೆ ಒಂದೇ ಸ್ಥಳದಲ್ಲಿ ಮುಂದುವರಿಸಲು ಸಾಧ್ಯವಾಗುತ್ತಿಲ್ಲ. ಏಕೆಂದರೆ ಪೊಲೀಸರ ಮುಂದೆ ಹೇಳಿಕೆ ದಾಖಲಿಸಲು, ಪರೀಕ್ಷೆಗಳಿಗೆ ಎಂದು ಕಜ್ರಿಯನ್ನು ಕರೆದುಕೊಂಡು ತಿರುಗಾಡಲು ನನಗೆ ಹಲವು ದಿನಗಳ ಕಾಲ ರಜೆ ಬೇಕಾಗುತ್ತದೆ. ಪದೇ ಪದೇ ರಜೆ ಕೇಳಿದರೆ ಕೆಲಸದಿಂದ ತೆಗೆದುಹಾಕುತ್ತಾರೆ. ಆಗ ನಾನು ಮತ್ತೆ ಹೊಸ ಕೆಲಸವನ್ನು ಹುಡುಕಿಕೊಳ್ಳಬೇಕಾಗುತ್ತದೆ” ಎಂದು ಧೀರೇಂದ್ರ ಹೇಳುತ್ತಾರೆ.

ಧೀರೇಂದ್ರ ತಿಂಗಳಿಗೆ 9,000 ರೂ.ಗಳನ್ನು ಸಂಪಾದಿಸುತ್ತಾರೆ, ಇದು ಕುಟುಂಬದ ಖರ್ಚುಗಳಿಗೆ ಸಾಕಾಗುವುದಿಲ್ಲ. "ಕಜ್ರಿಯ ಸುರಕ್ಷತೆಯನ್ನು ಪಣಕ್ಕಿಡುವುದರ ಜೊತೆಗೆ ನಾನು ಸಂಪಾದಿಸುವ ಅಲ್ಪಸ್ವಲ್ಪವನ್ನು ಸಹ ಖರ್ಚು ಮಾಡಿ ಅವಳನ್ನು ಮತ್ತೆ ಮತ್ತೆ ಲಕ್ನೋಗೆ ಕರೆತರಲು ನನ್ನಿಂದ ಸಾಧ್ಯವಾಗುತ್ತಿಲ್ಲ. ಇದರಿಂದ ಯಾವ ಪ್ರಯೋಜನವೂ ಆಗುತ್ತಿಲ್ಲ.”

ಕಜ್ರಿ ಪತ್ತೆಯಾದಾಗಿನಿಂದ ಮೂರೂವರೆ ವರ್ಷಗಳಲ್ಲಿ ನ್ಯಾಯಕ್ಕಾಗಿ ಅವರು ಬಹಳ ಅಲೆದಾಡಿದ್ದಾರೆ. ಆದರೆ ಅದರಿಂದ ಪ್ರಯೋಜನವಾಗಿದ್ದು ಕಡಿಮೆ. ಅವರು ಕಾನೂನು ನೆರವು ಕಚೇರಿ, ಮೋಹನ್‌ ಲಾಲ್‌ ಗಂಜ್‌ ಪೊಲೀಸ್‌ ಠಾಣೆ ಮತ್ತು ಕೈಸರ್‌ ಭಾಗ್‌ ಜಿಲ್ಲಾ ನ್ಯಾಯಾಲಯಕ್ಕೆ ಹಲವಾರು ಬಾರಿ ಭೇಟಿ ನೀಡಿದ್ದಾರೆ. ಆದರೆ ಇದುವರೆಗೂ ಕಜ್ರಿಯ ಹೇಳಿಕೆಯನ್ನು ಮ್ಯಾಜಿಸ್ಟ್ರೇಟ್‌ ಮುಂದೆ ದಾಖಲಿಸಲು ಸಾಧ್ಯವಾಗಿಲ್ಲ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 164ರ ಪ್ರಕಾರ ಕಜ್ರಿಯ ಹೇಳಿಕೆಯನ್ನು ದಾಖಲಿಸಿಕೊಳ್ಳುವುದು ಕಡ್ಡಾಯ. ಆದರೆ ಹಾಗೆ ಹೇಳಿಕೆ ದಾಖಲಿಸಿಕೊಳ್ಳಲು “ನಾಯ್ಯಾಲಯವು 2020ರ ಪೊಲೀಸ್ ಎಫ್ಐಆರ್ ಕೇಳುತ್ತದೆ" ಎಂದು ಧೀರೇಂದ್ರ ವಿವರಿಸುತ್ತಾರೆ.

ಕಜ್ರಿ ಕಾಣೆಯಾದ ಎರಡು ದಿನಗಳ ನಂತರ, ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 363 ಮತ್ತು 364 ರ ಅಡಿಯಲ್ಲಿ ಅಪಹರಣದ ಆರೋಪಗಳೊಂದಿಗೆ ಧೀರೇಂದ್ರ 2010ರ ಡಿಸೆಂಬರ್‌ ತಿಂಗಳಿನಲ್ಲಿ ಎಫ್ಐಆರ್ ದಾಖಲಿಸಿದ್ದಾರೆ. ಇದೊಂದು ದುರ್ಬಲವಾಗಿರುವ ಅಳಿಸಿ ಹೋಗಲು ಆರಂಭವಾಗಿರುವ ಕೈಬರಹದ ದಾಖಲೆ. ಈಗ 14 ವರ್ಷಗಳ ನಂತರ ಅದು ಪೂರಕ ದಾಖಲೆಯಾಗಲಬಲ್ಲ ಪರಿಸ್ಥಿತಿಯಲ್ಲಿ ಇಲ್ಲ. ಈಗ ಪೊಲೀಸರ ಬಳಿಯಲ್ಲಿಯೂ 2010ರ ಎಫ್‌ಐಆರ್‌ ಪ್ರತಿಯ ಡಿಜಿಟಲ್‌ ಅಥವಾ ನಕಲು ಪ್ರತಿ ಲಭ್ಯವಿಲ್ಲ. 2020ರಲ್ಲಿ ಕಜ್ರಿ ಪತ್ತೆಯಾದ ನಂತರ ಹೊರಬಂದ ಸತ್ಯಗಳನ್ನು ದಾಖಲಿಸಿ ಫಾಲೋ-ಅಪ್‌ ಎಫ್‌ಐಆರ್‌ ದಾಖಲಿಸಲು 2010ರ ಎಫ್‌ಐಆರ್‌ ಪ್ರತಿ ಬೇಕು ಎಂದು ಪೊಲೀಸರು ಹೇಳುತ್ತಿದ್ದಾರೆ.

ಇದನ್ನೇ ಇನ್ನೊಂದು ರೀತಿ ಹೇಳುವುದಾದರೆ ನ್ಯಾಯಾಲಯಕ್ಕೆ ಅಗತ್ಯವಿರುವ '2020 ಎಫ್ಐಆರ್' ಅಸ್ತಿತ್ವದಲ್ಲಿಲ್ಲ ಮತ್ತು ಇದೇ ಕಾರಣಕ್ಕಾಗಿ ಕಜ್ರಿಯವರ ಪ್ರಕರಣವು ನ್ಯಾಯಾಂಗ ವ್ಯವಸ್ಥೆಯ ದಾಖಲೆಗಳಲ್ಲಿಯೂ ಇಲ್ಲ.

PHOTO • Jigyasa Mishra
PHOTO • Jigyasa Mishra

ಕಜ್ರಿ ಪತ್ತೆಯಾದಾಗಿನಿಂದ ಮೂರೂವರೆ ವರ್ಷಗಳಲ್ಲಿ ನ್ಯಾಯಕ್ಕಾಗಿ ಅವರು ಬಹಳ ಅಲೆದಾಡಿದ್ದಾರೆ. ಆದರೆ ಅದರಿಂದ ಪ್ರಯೋಜನವಾಗಿದ್ದು ಕಡಿಮೆ. ಅವರು ಕಾನೂನು ನೆರವು ಕಚೇರಿ , ಮೋಹನ್‌ ಲಾಲ್‌ ಗಂಜ್‌ ಪೊಲೀಸ್‌ ಠಾಣೆ ಮತ್ತು ಕೈಸರ್‌ ಭಾಗ್‌ ಜಿಲ್ಲಾ ನ್ಯಾಯಾಲಯಕ್ಕೆ ಹಲವಾರು ಬಾರಿ ಭೇಟಿ ನೀಡಿದ್ದಾರೆ

PHOTO • Jigyasa Mishra
PHOTO • Jigyasa Mishra

ಎಡ : ಕಜ್ರಿ ತನ್ನ ಹೆತ್ತವರೊಂದಿಗೆ . ಬಲ : ಉತ್ತರ ಪ್ರದೇಶದ ಹರ್ದೋಯ್ ಜಿಲ್ಲೆಯಲ್ಲಿರುವ ಅವರ ಮನೆ

“ಕಜ್ರಿಯನ್ನು ರಕ್ಷಿಸಿದ ತಕ್ಷಣವೇ ಆಕೆ ಪತ್ತೆಯಾಗಿದ್ದ ಮನೆಯ ಮಹಿಳೆಯ ವಿರುದ್ಧ ಎಫ್ಐಆರ್ ದಾಖಲಿಸಬೇಕಾಗಿತ್ತು. 2010ರಲ್ಲಿ ಕಜ್ರಿ ಕಾಣೆಯಾದಾಗ ದಾಖಲಿಸಲಾದ ಪ್ರಥಮ ಮಾಹಿತಿ ವರದಿಯಲ್ಲಿ ಅಪಹರಣದ ಆರೋಪಗಳಷ್ಟೇ ಇದ್ದವು. ಆದರೆ ಆಕೆಯನ್ನು ರಕ್ಷಿಸಿದ ಸಂದರ್ಭದಲ್ಲಿ ಕಳ್ಳಸಾಗಣೆ ಮತ್ತು ಲೈಂಗಿಕ ದೌರ್ಜನ್ಯದ ಅಪರಾಧಗಳಿಗೆ ಸಂಬಂಧಿಸಿದ ಗಂಭೀರ ಐಪಿಸಿ ಸೆಕ್ಷನ್ನುಗಳನ್ನು ಬಳಸಿ ಎಫ್ಐಆರ್ ದಾಖಲಿಸುವುದು ಮುಖ್ಯವಾಗಿತ್ತು" ಎಂದು ಪ್ರಕರಣದ ಮಾಹಿತಿ ಹೊಂದಿರುವ ಲಕ್ನೋ ಮೂಲದ ಸ್ವತಂತ್ರ ವಕೀಲ ಅಪೂರ್ವ ಶ್ರೀವಾಸ್ತವ್ ಹೇಳುತ್ತಾರೆ. “ಕಜ್ರಿಯ ಹೇಳಿಕೆಯನ್ನು ಪೊಲೀಸ್‌ ಮತ್ತು ಮ್ಯಾಜಿಸ್ಟ್ರೇಟ್‌ ಎದುರಿಗೆ ದಾಖಲಿಸಬೇಕಿತ್ತು, ಆದರೆ ಅದರಲ್ಲಿ ಎರಡನೆಯದು ಬಾಕಿಯುಳಿದಿದೆ” ಎಂದು ಅವರು ಹೇಳಿದರು.

ಕಜ್ರಿಯನ್ನು ರಕ್ಷಿಸಿದ 48 ಗಂಟೆಗಳಲ್ಲಿ, ಸಿಆರ್‌ಪಿಸಿಯ ಸೆಕ್ಷನ್ 161ರ ಅಡಿಯಲ್ಲಿ ಮೋಹನ್‌ ಲಾಲ್‌ ಗಂಜ್ ಪೊಲೀಸ್ ಠಾಣೆಯಲ್ಲಿ ಆಕೆಯ ಹೇಳಿಕೆಯನ್ನು ತೆಗೆದುಕೊಳ್ಳಲಾಗಿದೆ. ಲಕ್ನೋದ ಎರಡು ಆಸ್ಪತ್ರೆಗಳಲ್ಲಿ ಆಕೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಮೊದಲ ಆಸ್ಪತ್ರೆಯಲ್ಲಿ ಕಜ್ರಿಯ ಹೊಟ್ಟೆಯ ಮೇಲೆ ಗಾಯದ ಗುರುತು, ಕೆಳಗಿನ ದವಡೆಯ ಹಲ್ಲುಗಳು ಕಾಣೆಯಾಗಿರುವುದು ಮತ್ತು ಬಲ ಸ್ತನದ ಮೇಲೆ ಕಪ್ಪು ಗುರುತನ್ನು ಗುರುತಿಸಲಾಗಿದೆ. ಎರಡನೇ ಆಸ್ಪತ್ರೆ ಅವರನ್ನು ಮನೋವೈದ್ಯಕೀಯ ವಿಭಾಗಕ್ಕೆ ಶಿಫಾರಸು ಮಾಡಿತು.

ಆಸ್ಪತ್ರೆಯ 2021ರ ವರದಿಯು ಕಜ್ರಿ 50-55 ಐಕ್ಯೂ ಹೊಂದಿದ್ದು, "ಸೌಮ್ಯ ಮಾನಸಿಕ ಅಸ್ವಸ್ಥತೆ" ಹೊಂದಿದ್ದಾರೆ ಎಂದು ತೀರ್ಮಾನಿಸುತ್ತದೆ, ಇದು "ಶೇಕಡಾ 50ರಷ್ಟು ಅಂಗವೈಕಲ್ಯವನ್ನು" ಸೂಚಿಸುತ್ತದೆ. ರೋಗನಿರ್ಣಯದ ನಂತರ ಕಜ್ರಿಯನ್ನು ಏಳು ದಿನಗಳ ಕಾಲ ಆಸ್ಪತ್ರೆಗೆ ದಾಖಲಿಸಲಾಯಿತು ಮತ್ತು ಅವರ ಮಾನಸಿಕ ಕಾಯಿಲೆಗೆ ಸಮಾಲೋಚನೆ ಮತ್ತು ಚಿಕಿತ್ಸೆಯನ್ನು ನೀಡಲಾಯಿತು. "ದೀರ್ಘಕಾಲದ ಲೈಂಗಿಕ ದೌರ್ಜನ್ಯ ಮತ್ತು ಕಳ್ಳಸಾಗಣೆಯನ್ನು ಒಳಗೊಂಡ ಪ್ರಕರಣದ ವಿಷಯದಲ್ಲಿ ಇದು ಅಸಮರ್ಪಕ ಪುನರ್ವಸತಿ. ಆಘಾತ, ಅಪರಾಧಿ ಭಾವ ಮತ್ತು ಆಘಾತದ ನಂತರದ ಒತ್ತಡದದಿಂದ ಉಂಟಾಗುವ ಅಸ್ವಸ್ಥತೆಯ ರೋಗಲಕ್ಷಣಗಳಿಂದ ಸಂತ್ರಸ್ತರನ್ನು ಹೊರತರಲು ನಿರಂತರ ಮನೋವೈದ್ಯಕೀಯ ಚಿಕಿತ್ಸೆ ಮತ್ತು ಮಾನಸಿಕ ಸಮಾಲೋಚನೆ ಅತ್ಯಗತ್ಯ. ಬಹಿಷ್ಕಾರ ಮತ್ತು ಕಳಂಕವನ್ನು ಎದುರಿಸಲು ಸಾಮಾಜಿಕ ಸಮನ್ವಯತೆಯನ್ನು ಖಚಿತಪಡಿಸಿಕೊಳ್ಳುವುದು ಸಹ ಮುಖ್ಯ" ಎಂದು ಶ್ರೀವಾಸ್ತವ್ ಹೇಳುತ್ತಾರೆ.

ಸಾಕಷ್ಟು ಮಾನಸಿಕ-ಸಾಮಾಜಿಕ ಬೆಂಬಲ ಮತ್ತು ಸಮಯೋಚಿತ ಎಫ್ಐಆರ್ ಅನುಪಸ್ಥಿತಿಯ ನಡುವೆ, 2010 ಮತ್ತು 2020ರ ನಡುವಿನ ಕಜ್ರಿಯವರ ಬದುಕಿನ ವಿವರಗಳು ಬಹಳ ಮಸುಕಾಗಿವೆ ಮತ್ತು ದಿನ ಕಳೆದಂತೆ ಅವು ಇನ್ನಷ್ಟು ಅಸ್ಪಷ್ಟವಾಗುತ್ತಿವೆ.

PHOTO • Jigyasa Mishra
PHOTO • Jigyasa Mishra

ಕಜ್ರಿ ಮೇಲೆ ಹಲ್ಲೆ ನಡೆದ ಸಂದರ್ಭದಲ್ಲಿ ಉಂಟಾದ ದೈಹಿಕ ದೌರ್ಜನ್ಯದ ಗುರುತುಗಳು

“ಇಬ್ಬರು ನನ್ನನ್ನು ಎತ್ತಿಕೊಂಡು ಬಾಯಿ ಕಟ್ಟಿದರು. ನಂತರ ಅವರು ನನ್ನನ್ನು ಬಸ್ಸಿನಲ್ಲಿ ಚಿನಹಟ್‌ ಎನ್ನುವ ಸ್ಥಳಕ್ಕೆ ಕರೆದೊಯ್ದರು” ಎಂದು ಕಜ್ರಿ ಭೋಜ್ಪುರಿ ಮತ್ತು ಹಿಂದಿ ಭಾಷೆಗಳರಡನ್ನೂ ಬೆರೆಸಿ ಮಾತನಾಡುತ್ತಾ ಹೇಳುತ್ತಾರೆ. ಚಿನ್ಹಟ್‌ ಲಕ್ನೋದ ಒಂದು ಬ್ಲಾಕ್‌ ಆಗಿದ್ದು, ಅಲ್ಲಿ ಕಜ್ರಿಯನ್ನು ಅಲ್ಲಿಂದಲೇ ರಕ್ಷಿಸಲಾಗಿತ್ತು. ಆಕೆಯನ್ನು ರಕ್ಷಿಸಲಾದ ಮನೆಯಲ್ಲಿಯೂ ಭೋಜ್ಪುರಿ ಭಾಷೆ ಮಾತನಾಡಲಾಗುತ್ತಿತ್ತು. ಅವರು ಆಗಾಗ ʼನಂಗೆ ಗೋಡ್‌ ರಖ್ತೇ ಥೇʼ ಎನ್ನುವ ಮಾತನ್ನು ಪುನಾರವರ್ತಿಸುತ್ತಾರೆ, ಇದರ ಅರ್ಥ ʼಅವರು ನನ್ನನ್ನು ಬರಿಗಾಲಿನಲ್ಲಿ ಇರಿಸುತ್ತಿದ್ದರು.ʼ

ಕಟ್ಟಡದ ಮೊದಲ ಮಹಡಿಯ ಮನೆಯ ನಿವಾಸಿಗಳ ಬಗ್ಗೆ ಹೇಳುವುದಾದರೆ, ರೇಖಾ ಎಂಬ ಮಹಿಳೆ ಸೇರಿದಂತೆ ಮೂವರನ್ನು ಕಜ್ರಿ ನೆನಪಿಸಿಕೊಳ್ಳುತ್ತಾರೆ. ನೆಲಮಹಡಿಯಲ್ಲಿ ಬಾಡಿಗೆ ಕೊಠಡಿಗಳಲ್ಲಿ ವಾಸಿಸುತ್ತಿದ್ದ ಹಲವಾರು ಬಾಡಿಗೆದಾರರನ್ನು ಅವರು ನೆನಪಿಸಿಕೊಳ್ಳುತ್ತಾರೆ.

“ದಿನಕ್ಕೆ ಎರಡು ಬಾರಿ ಎರಡು ರೊಟ್ಟಿಗಳನ್ನು ಕೊಡುತ್ತಿದ್ದರು. ಅದಕ್ಕಿಂತ ಹೆಚ್ಚು ಕೇಳುವಂತಿರಲಿಲ್ಲ. ನಾನು ಯಾವಾಗಲೂ ಬರಿಗಾಲಿನಲ್ಲಿರುತ್ತಿದ್ದೆ. ಚಳಿಗಾಲದಲ್ಲೂ ಅವರು ನನಗೆ ಕಂಬಳಿ ಅಥವಾ ವಲ್ಲಿಯನ್ನು ಕೊಡುತ್ತಿರಲಿಲ್ಲ. ಅವರು ನನಗೆ ಕೊಟ್ಟಿದ್ದು ಹಳೆಯ ಬಟ್ಟೆಗಳನ್ನು ಮಾತ್ರ… ನನಗೆ ಮಹೀನಾ [ಮುಟ್ಟು] ಆದ ಸಂದರ್ಭಗಳಲ್ಲಿ ರೇಖಾ ನನಗೆ ಗಲೀಜು ಬಟ್ಟೆಗಳನ್ನು ನೀಡುತ್ತಿದ್ದರು. ಕೆಲವೊಮ್ಮೆ ಅವರು ಪೋಚಾ [ನೆಲ ಒರೆಸುವ ಬಟ್ಟೆ] ಬಳಸುವಂತೆ ಹೇಳುತ್ತಿದ್ದರು” ಎಂದು ಕಜ್ರಿ ಹೇಳುತ್ತಾರೆ.

ಸದಾ ಹಿಂಸೆ ಮತ್ತು ಭಯದ ನೆರಳಿಡಿ ಗುಡಿಸುವುದು, ಒಗೆಯುವುದು, ಅಡುಗೆ ಮಾಡುವುದು, ಶೌಚಾಲಯಗಳನ್ನು ಸ್ವಚ್ಛಗೊಳಿಸುವುದು ಮತ್ತು ಬಟ್ಟೆ ಒಗೆಯುವುದು ಮುಂತಾದ ಮನೆಕೆಲಸಗಳನ್ನು ಮಾಡುತ್ತಿದ್ದ ದಿನಗಳನ್ನು ಅವರು ನೆನಪಿಸಿಕೊಳ್ಳುತ್ತಾರೆ. ಒಮ್ಮೆ ಊಟ ರುಚಿಯಾಗಿಲ್ಲ ಎನ್ನುವ ಕಾರಣಕ್ಕಾಗಿ ರೇಖಾ ಕಜ್ರಿಯ ಮುಖಕ್ಕೆ ಗುದ್ದಿದ್ದಾಗಿ ಆರೋಪಿಸಲಾಗಿದೆ. ಅದರಿಂದಾಗಿ ಅವರ ಬಾಯಿಯ ಎದುರು ಭಾಗದ ಹಲ್ಲುಗಳು ಮುರಿದವು.

“ನಾನು ಮುಟ್ಟಾಗಿರದ ದಿನಗಳಲ್ಲಿ ಆಕೆ ನನ್ನನ್ನು ಕೋಣೆಯೊಳಗೆ ಕರೆದೊಯ್ಯುತ್ತಿದ್ದಳು” ಎಂದು ಕಜ್ರಿ ನೆಲವನ್ನು ದಿಟ್ಟಿಸುತ್ತಾ ಹೇಳುತ್ತಾರೆ. ಆ ಮನೆಯಲ್ಲಿ ವಾಸಿಸುತ್ತಿದ್ದ ಒಬ್ಬ ವ್ಯಕ್ತಿಯು “ಒಳಗಿನಿಂದ ಕೋಣೆಯ ಬಾಗಿಲು ಹಾಕಿಕೊಳ್ಳುತ್ತಿದ್ದ. ನನ್ನನ್ನು ವಿವಸ್ತ್ರಗೊಳಿಸಿ, ನನ್ನ ಮೇಲೆ ಮಲಗಿ ತನಗೆ ಬೇಕಾದ್ದನ್ನು ಮಾಡುತ್ತಿದ್ದ. ನಾನು ಅವನನ್ನು ತಡೆಯಲು ಪ್ರಯತ್ನಿಸುತ್ತಿದ್ದೆ ಆದರೆ ಆತ ಬಲವಂತವಾಗಿ ನನ್ನ ಮೇಲೆ ಎರಗುತ್ತಿದ್ದ. ಜೊತೆಗೆ ಮನೆಯಲ್ಲಿ ಬಾಡಿಗೆಗೆ ಇರುವವರನ್ನೂ ಕರೆದು ಅವರಿಗೂ ನನ್ನನ್ನು ಒಪ್ಪಿಸುತ್ತಿದ್ದ. ಅವರು ನನ್ನನ್ನು ಅವರ ಕೆಳಗೆ ಮಲಗಿಸಿಕೊಳ್ಳುತ್ತಿದ್ದರು.”

PHOTO • Jigyasa Mishra
PHOTO • Jigyasa Mishra

ಎಡ: ಕಜ್ರಿಯ ಪಾದಗಳು ಮತ್ತು ಹೊಟ್ಟೆಯ ಮೇಲಿನ ಗಾಯಗಳ ಫೋಟೋಗಳು. ಬಲ: ಆಕೆಯ ತಂದೆ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳು ಮತ್ತು ಮಾಹಿತಿಯನ್ನು ಸಂಗ್ರಹಿಸಿ ಕಬ್ಬಿಣದ ಕಪಾಟಿನಲ್ಲಿ ಸುರಕ್ಷಿತವಾಗಿ ಇರಿಸಿದ್ದಾರೆ

“ರೇಖಾ ತನ್ನಿಂದ ಬಾಡಿಗೆ ಮನೆಯವರ ಮನೆಗೆಲಸಗಳನ್ನು ಮಾಡಿಸುವುದರ ಜೊತೆಗೆ ಅವರಿಂದ ಪದೇ ಪದೇ ಅತ್ಯಾಚಾರ ಮಾಡಿಸುತ್ತಿದ್ದಳು ಮತ್ತು ಇದಕ್ಕಾಗಿ ಆಕೆ ಬಾಡಿಗೆ ಮನೆಯವರಿಂದ ಹಣ ವಸೂಲಿ ಮಾಡುತ್ತಿದ್ದಳು” ಎಂದು ಕಜ್ರಿ ತನ್ನ ರಕ್ಷಿಸಿದ ಸಂದರ್ಭದಲ್ಲಿ ಆರೋಪಿಸಿದ್ದಳು ಎಂದು ಧೀರೇಂದ್ರ ಹೇಳುತ್ತಾರೆ.

ತಂದೆ ಈಗ ದಣಿದಿದ್ದಾರೆ. “ನಾವು 2021ರ ಜನವರಿಯಿಂದ ಓಡಾಡುತ್ತಿದ್ದೇವೆ” ಎಂದು ಅವರು ಹೇಳುತ್ತಾರೆ. ಇಲ್ಲಿ ʼನಾವುʼ ಎನ್ನುವ ಪದದಲ್ಲಿ ಕಾನೂನು ಸಹಾಯ ಸೇರಿಲ್ಲ. ಲಕ್ನೋ ಮೂಲದ ಸರ್ಕಾರೇತರ ಕಾನೂನು ನೆರವು ಸಂಸ್ಥೆಯಾದ ಅಸೋಸಿಯೇಷನ್ ಫಾರ್ ಅಡ್ವೊಕೆಸಿ ಅಂಡ್ ಲೀಗಲ್ ಇನಿಶಿಯೇಟಿವ್ಸ್ ಟ್ರಸ್ಟ್ (ಎಎಎಲ್ಐ) 2020ರಲ್ಲಿ ಒನ್-ಸ್ಟಾಪ್ ಸೆಂಟರ್ ಮೂಲಕ ಅವರನ್ನು ಸಂಪರ್ಕಿಸಿತ್ತು. ಅಂದಿನಿಂದ, ಕಜ್ರಿಯವರ ಪ್ರಕರಣದಲ್ಲಿ ಕನಿಷ್ಠ ನಾಲ್ಕು ವಕೀಲರನ್ನು ಬದಲಾಯಿಸಲಾಗಿದೆ.

ಎಎಎಲ್ಐನ ಪ್ರಸ್ತುತ ವಕೀಲರು ಧೀರೇಂದ್ರ ಅವರಿಗೆ ಹೊಸ ದೂರಿನ ಕರಡನ್ನು ಕಳುಹಿಸಿದ್ದಾರೆ, ಅದರ ಆಧಾರದ ಮೇಲೆ ಎಫ್ಐಆರ್ ದಾಖಲಿಸಬಹುದು. ಕಜ್ರಿಯ ತಂದೆ ಕೆಲವು ವಾಸ್ತವಿಕ ತಪ್ಪುಗಳನ್ನು ಎತ್ತಿ ತೋರಿಸಿದಾಗ, ವಕೀಲರು ಅವರನ್ನು ಖಂಡಿಸಿದರು, ಇದು ಬಿಕ್ಕಟ್ಟಿಗೆ ಕಾರಣವಾಯಿತು. ಧೀರೇಂದ್ರ ಕರಡಿಗೆ ಸಹಿ ಹಾಕಿಲ್ಲ, ಮತ್ತು ವಕೀಲರು ಪರಿಷ್ಕೃತ ಪ್ರತಿಯನ್ನು ಕಳುಹಿಸಿಲ್ಲ.

“ಒಂದು ಫೋನ್‌ ಕಳೆದುಹೋದರೆ ಅವರು ಜಗತ್ತನ್ನು ತಲೆಕೆಳಗೆ ಮಾಡುತ್ತಾರೆ, ಆದರೆ ಇಲ್ಲಿ ನನ್ನ ಮಗಳನ್ನು ಅಪಹರಿಸಿ 10 ವರ್ಷಗಳ ಕಾಲ ಗುಲಾಮಳನ್ನಾಗಿ ಮಾಡಿಕೊಳ್ಳಲಾಯಿತು. ಆದರೂ ಏನೂ ಮಾಡುತ್ತಿಲ್ಲ” ಎಂದು ಧೀರೇಂದ್ರ ಹೇಳುತ್ತಾರೆ. 2010ರಿಂದೀಚೆಗೆ ಕಜ್ರಿ ಪ್ರಕರಣಕ್ಕಾಗಿ ಅವರು ಸಂಗ್ರಹಿಸಿದ ಪ್ರತಿಯೊಂದು ಮಾಹಿತಿಯೂ ಅವರ ಕಬ್ಬಿಣದ ಕಬೋರ್ಡಿನ ಲಾಕರಿನಲ್ಲಿದೆ. ಇದು ಅವರ ನ್ಯಾಯ ಪಡೆಯುವ ಹೋರಾಟದೆಡೆಗಿನ ದಢ ಸಂಕಲ್ಪಕ್ಕೆ ಸಾಕ್ಷಿಯಾಗಿದೆ.

ಈ ಕಥಾನಕವು ಭಾರತದಲ್ಲಿ ಲೈಂಗಿಕ ಮತ್ತು ಲಿಂಗಾಧಾರಿತ ಹಿಂಸಾಚಾರ (ಎಸ್‌ಜಿಬಿವಿ) ಸಂತೃಸ್ತರ ಆರೈಕೆಗೆ ಎದುರಾಗುವ ಸಾಮಾಜಿಕ, ಸಾಂಸ್ಥಿಕ ಮತ್ತು ರಚನಾತ್ಮಕ ಅಡೆತಡೆಗಳನ್ನು ಕೇಂದ್ರವಾಗಿಟ್ಟುಕೊಂಡು ರಾಷ್ಟ್ರವ್ಯಾಪಿ ವರದಿ ಮಾಡುವ ಯೋಜನೆಯ ಭಾಗ. ಇದು ಡಾಕ್ಟರ್ಸ್ ವಿದೌಟ್ ಬಾರ್ಡರ್ಸ್ ಇಂಡಿಯಾ ಬೆಂಬಲಿತ ಉಪಕ್ರಮದ ಭಾಗ.

ಸಂತ್ರಸ್ತರು ಮತ್ತು ಅವರ ಕುಟುಂಬ ಸದಸ್ಯರ ಹೆಸರುಗಳನ್ನು ಅವರ ಗುರುತನ್ನು ರಕ್ಷಿಸುವ ಸಲುವಾಗಿ ಬದಲಾಯಿಸಲಾಗಿದೆ.

ಅನುವಾದ: ಶಂಕರ. ಎನ್. ಕೆಂಚನೂರು

Reporting and Cover Illustration : Jigyasa Mishra

ਜਗਿਆਸਾ ਮਿਸ਼ਰਾ ਉੱਤਰ ਪ੍ਰਦੇਸ਼ ਦੇ ਚਿਤਰਾਕੂਟ ਅਧਾਰਤ ਸੁਤੰਤਰ ਪੱਤਰਕਾਰ ਹਨ।

Other stories by Jigyasa Mishra
Editor : Pallavi Prasad

ਪੱਲਵੀ ਪ੍ਰਸਾਦ ਮੁੰਬਈ ਅਧਾਰਤ ਸੁਤੰਤਰ ਪੱਤਰਕਾਰ, ਯੰਗ ਇੰਡੀਆ ਫੈਲੋ ਅਤੇ ਲੇਡੀ ਸ਼੍ਰੀ ਰਾਮ ਕਾਲਜ ਤੋਂ ਅੰਗਰੇਜ਼ੀ ਸਾਹਿਤ ਵਿੱਚ ਗ੍ਰੈਜੂਏਟ ਹਨ। ਉਹ ਲਿੰਗ, ਸੱਭਿਆਚਾਰ ਅਤੇ ਸਿਹਤ ਬਾਰੇ ਲਿਖਦੀ ਹਨ।

Other stories by Pallavi Prasad
Series Editor : Anubha Bhonsle

ਅਨੁਭਾ ਭੋਂਸਲੇ 2015 ਦੀ ਪਾਰੀ ਫੈਲੋ, ਇੱਕ ਸੁਤੰਤਰ ਪੱਤਰਕਾਰ, ਇੱਕ ਆਈਸੀਐਫਜੇ ਨਾਈਟ ਫੈਲੋ, ਅਤੇ ਮਨੀਪੁਰ ਦੇ ਮੁਸ਼ਕਲ ਇਤਿਹਾਸ ਅਤੇ ਆਰਮਡ ਫੋਰਸਿਜ਼ ਸਪੈਸ਼ਲ ਪਾਵਰਜ਼ ਐਕਟ ਦੇ ਪ੍ਰਭਾਵ ਬਾਰੇ ਇੱਕ ਕਿਤਾਬ 'ਮਾਂ, ਕਿੱਥੇ ਮੇਰਾ ਦੇਸ਼?' ਦੀ ਲੇਖਿਕਾ ਹਨ।

Other stories by Anubha Bhonsle
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru