“ಮಿರ್ಚಿ ಮೇ ಆಗ್ ಲಗ್ ಗಯೀ [ಮೆಣಸು ಸುಟ್ಟಿದ್ದಾರೆ].”
1984ರ ಡಿಸೆಂಬರ್ 2 ರ ರಾತ್ರಿ, ಭೋಪಾಲ್ನ ನುಸ್ರತ್ ಜಹಾನ್ ಅವರಿಗೆ ಉಸಿರಾಡಲಾಗದೆ ನಿದ್ರೆಯಿಂದ ಎಚ್ಚರಗೊಂಡರು, ನೋವಿನಿಂದ ಉರಿಯುತ್ತಿದ್ದ ಅವರ ಕಣ್ಣುಗಳಲ್ಲಿ ನೀರು ತುಂಬಿತ್ತು. ಸ್ವಲ್ಪ ಹೊತ್ತಿನಲ್ಲಿಯೇ ಅವರ ಆರು ವರ್ಷದ ಮಗ ಅಳುತ್ತಿರುವುದು ಕೇಳಿಸಿತು. ಈ ಸದ್ದಿನಿಂದ ಅವರ ಪತಿ ಮುಹಮ್ಮದ್ ಶಫೀಕ್ರಿಗೆ ಎಚ್ಚರವಾಯಿತು.
“ಖಯಾಮತ್ ಕಾ ಮಂಜರ್ ಥಾ” [ಅದೊಂದು ಪ್ರಳಯದ ದೃಶ್ಯವಾಗಿತ್ತು],” ಎಂದು ನವಾಬ್ ಕಾಲೋನಿಯಲ್ಲಿರುವ ತಮ್ಮ ಮನೆಯಲ್ಲಿ ಕುಳಿತುಕೊಂಡು ಹೇಳುವ 70 ವರ್ಷ ಪ್ರಾಯದ ಶಫೀಕ್, ಇಂದಿಗೆ ಸರಿಯಾಗಿ ನಲ್ವತ್ತು ವರ್ಷಗಳ ಹಿಂದೆ ಮಧ್ಯ ಪ್ರದೇಶದ ರಾಜಧಾನಿ ನಗರದಲ್ಲಿ ನಡೆದ ಭೋಪಾಲ್ ಗ್ಯಾಸ್ ದುರಂತ (ಬಿಜಿಡಿ) ಎಂದು ಕರೆಯಲ್ಪಡುವ ಆ ಭಯಾನಕ ಘಟನೆಯ ನೆನಪು ಮಾಡಿಕೊಳ್ಳುತ್ತಾರೆ.
ಪೇಪರ್ ಮಿಲ್ನಲ್ಲಿ ದಿನಗೂಲಿ ನೌಕರನಾಗಿ ಕೆಲಸ ಮಾಡುವ ಶಫೀಕ್, ಈ ವಿಷಾನಿಲದಿಂದ ಬಾಧಿಸಲ್ಪಟ್ಟ ತಮ್ಮ ಮನೆಮಂದಿಗೆ ಚಿಕಿತ್ಸೆ ನೀಡುವುದರಲ್ಲೇ ಕೆಲವು ವರ್ಷಗಳನ್ನು ಹತಾಶವಾಗಿ ಕಳೆದಿದ್ದರು. ಅವರ ಮನೆಯ ನೀರಿನ ಏಕೈಕ ಮೂಲವಾಗಿದ್ದ ಬಾವಿಯೂ 18 ವರ್ಷಗಳ ಕಾಲ ಕಲುಷಿತವಾಗಿಯೇ ಇದ್ದರಿಂದ, ಆ ನೀರನ್ನು ಬಳಸಿ ಅವರೆಲ್ಲರ ಆರೋಗ್ಯ ಇನ್ನಷ್ಟು ಹದಗೆಟ್ಟಿತು. ಆ ನೀರಿನಿಂದಾಗಿ ಅವರಿಗೆ ಕಣ್ಣುಗಳಲ್ಲಿ ಉರಿಯೂತವಾಗಿತ್ತು, ಆದರೆ ಅವರ ಬಳಿ ಬೇರೆ ಯಾವುದೇ ನೀರಿನ ಮೂಲವಿರಲಿಲ್ಲ ಎಂದು ಅವರು ಹೇಳುತ್ತಾರೆ. 2012ರಲ್ಲಿಯೇ ಸಂಭವ ಟ್ರಸ್ಟ್ ಕ್ಲಿನಿಕ್ ಎಂಬ ಸಂಸ್ಥೆ ಈ ನೀರನ್ನು ಪರೀಕ್ಷಿಸಿ, ಅದರಲ್ಲಿ ಸೇರಿದ್ದ ವಿಷಕಾರಿ ಅಂಶಗಳನ್ನು ಪತ್ತೆ ಮಾಡಿತ್ತು. ನಂತರ ಈ ಪ್ರದೇಶದಲ್ಲಿದ್ದ ಬೋರ್ವೆಲ್ಗಳನ್ನು ರಾಜ್ಯ ಸರ್ಕಾರ ಮುಚ್ಚಿತು.
1984 ರ ರಾತ್ರಿ, ಶಫೀಕ್ ಅವರ ಮನೆಯಲ್ಲಿ ನೋವಿನ ಕೋಡಿಯನ್ನು ಹರಿಸಿದ ಆ ವಿಷಕಾರಿ ಅನಿಲ ಯೂನಿಯನ್ ಕಾರ್ಬೈಡ್ ಕಾರ್ಪೊರೇಷನ್ (ಯುಸಿಸಿ) ಎಂಬ ಬಹುರಾಷ್ಟ್ರೀಯ ಕಂಪನಿಯ ಒಡೆತನದ ಯೂನಿಯನ್ ಕಾರ್ಬೈಡ್ ಇಂಡಿಯಾ ಲಿಮಿಟೆಡ್ (ಯುಸಿಐಎಲ್) ಎಂಬ ಕಾರ್ಖಾನೆಯಿಂದ ಬಂದಿತ್ತು. ಡಿಸೆಂಬರ್ 2 ರ ರಾತ್ರಿ ಯುಸಿಐಎಲ್ ಕಾರ್ಖಾನೆಯಿಂದ ವಿಷಕಾರಿ ಮೀಥೈಲ್ ಐಸೊಸೈನೇಟ್ ಸೋರಿಕೆಯಾಗಿದ್ದು, ಇಡೀ ವಿಶ್ವದಲ್ಲಿಯೇ ನಡೆದ ಅತ್ಯಂತ ಭೀಕರ ಕೈಗಾರಿಕಾ ದುರಂತ.











