"ನರ್ಕ್ ಹೈ ಎಹ್ [ಇದೊಂದು ನರಕ]."
ಕಾಶ್ಮೀರಾ ಬಾಯಿಯವರು ಕೈಗಾರಿಕೆಗಳ ತ್ಯಾಜ್ಯದಿಂದ ಕಲುಷಿತವಾಗಿರುವ ಬುಡ್ಡ ನಾಲೆಯ ಬಗ್ಗೆ ಮಾತನಾಡುತ್ತಿದ್ದಾರೆ. ಇವರ ಹಳ್ಳಿಯ ಉದ್ದಕ್ಕೂ ಹರಿಯುವ ಈ ಹೊಳೆ, ಇವರ ಮನೆಯಿಂದ ನೂರು ಮೀಟರ್ ದೂರದಲ್ಲಿ ಸಟ್ಲೇಜ್ ನದಿಯನ್ನು ಸೇರುತ್ತದೆ.
ನಲವತ್ತರ ಹರೆಯದ ಕಾಶ್ಮೀರಾ ಬಾಯಿ ಒಂದೊಮ್ಮೆ ಜನರು ಕುಡಿಯಲು ಬಳಸುವಷ್ಟು ಶುದ್ಧವಾಗಿದ್ದ ಆ ಹೊಳೆಯನ್ನು ನೆನಪಿಸಿಕೊಳ್ಳುತ್ತಾರೆ. ಲುಧಿಯಾನದ ಕೂಮ್ಕಲಾನ್ ಗ್ರಾಮದಲ್ಲಿ ಹುಟ್ಟುವ ಬುಡ್ಡ ನಾಲೆಯು ಲುಧಿಯಾನದ ಮೂಲಕ 14 ಕಿಲೋಮೀಟರ್ಗಳವರೆಗೆ ಹರಿದು ಕಾಶ್ಮೀರಾ ಅವರ ಊರಾದ ವಾಲಿಪುರ್ ಕುಲಾನ್ನ ಬಳಿ ಸಟ್ಲೆಜ್ ನದಿಯನ್ನು ಸೇರುತ್ತದೆ.
“ಆಸಿನ್ ತಾನ್ ನರ್ಕ್ ವಿಚ್ ಬೈಟೆ ಹಾನ್ [ನಾವು ನರಕದಲ್ಲಿ ಕೂತಿದ್ದೇವೆ]. ಪ್ರವಾಹ ಉಕ್ಕಿ ಬಂದಾಗ ಗಲೀಜು ಕಪ್ಪು ನೀರು ನಮ್ಮ ಮನೆಗಳಿಗೂ ಬರುತ್ತದೆ. ಪಾತ್ರೆಯಲ್ಲಿ ಆ ನೀರನ್ನು ಇಟ್ಟರೆ ರಾತ್ರಿಯಾದಂತೆ ಅದು ಹಳದಿ ಬಣ್ಣಕ್ಕೆ ತಿರುಗುತ್ತದೆ, ” ಎನ್ನುತ್ತಾರೆ ಅವರು.


















