"ಮನೆಯಲ್ಲಿ ಇರಿಸಲಾದ ಹತ್ತಿ ಬಣ್ಣ ಮತ್ತು ತೂಕವನ್ನು ಕಳೆದುಕೊಳ್ಳುತ್ತಿದೆ. ಹತ್ತಿಯ ಬಣ್ಣ ಹಗುರವಾದಷ್ಟೂ ವ್ಯಾಪಾರಿಗಳು ನಮಗೆ ಕಡಿಮೆ ಬೆಲೆಯನ್ನು ನೀಡುತ್ತಾರೆ" ಎಂದು ರೈತ ಸಂದೀಪ್ ಯಾದವ್ ಆತಂಕದ ಧ್ವನಿಯಲ್ಲಿ ಹೇಳುತ್ತಾರೆ. ಮಧ್ಯಪ್ರದೇಶದ ಖಾರ್ಗೋನ್ ಜಿಲ್ಲೆಯ ಗೋಗವಾನ್ ತಹಸಿಲ್ನ ಸಂದೀಪ್, 2022ರ ಅಕ್ಟೋಬರಿನಲ್ಲಿ ಕಟಾವು ಮಾಡಿದಾಗಿನಿಂದ ಹತ್ತಿಯ ಬೆಲೆ ಹೆಚ್ಚಾಗಬಹುದೆಂದು ಎಂದು ಕಾಯುತ್ತಿದ್ದರು.
ಖಾರ್ಗೋನ್ ಜಿಲ್ಲೆಯು 2,15,000 ಹೆಕ್ಟೇರ್ ಭೂಮಿಯಲ್ಲಿ ಹತ್ತಿ ಕೃಷಿಯನ್ನು ಹೊಂದಿದ್ದು ಇದು ಮಧ್ಯಪ್ರದೇಶದ ಅತಿದೊಡ್ಡ ಹತ್ತಿ ಉತ್ಪಾದಿಸುವ ಜಿಲ್ಲೆಗಳಲ್ಲಿ ಒಂದಾಗಿದೆ. ಹತ್ತಿ ಬಿತ್ತನೆ ಪ್ರತಿ ವರ್ಷ ಮೇ ತಿಂಗಳಲ್ಲಿ ಪ್ರಾರಂಭವಾಗಿ ಜುಲೈ ಮೊದಲ ವಾರದವರೆಗೆ ಇರುತ್ತದೆ. ಇದರ ನಂತರ, ಅಕ್ಟೋಬರ್ ತಿಂಗಳಿನಿಂದ ಡಿಸೆಂಬರ್ ಎರಡನೇ ವಾರದವರೆಗೆ ಕೊಯ್ಲು ಮಾಡಲಾಗುತ್ತದೆ. ಖಾರ್ಗೋನ್ ಹತ್ತಿ ಮಾರುಕಟ್ಟೆಯು ದಿನಕ್ಕೆ ಸುಮಾರು 6 ಕೋಟಿ ರೂ.ಗಳ ಮೌಲ್ಯದ ಹತ್ತಿಯನ್ನು ಖರೀದಿಸುತ್ತದೆ, ಮತ್ತು ಖರೀದಿ ಸಾಮಾನ್ಯವಾಗಿ ಅಕ್ಟೋಬರ್ ತಿಂಗಳಿನಲ್ಲಿ ಪ್ರಾರಂಭವಾಗಿ ಮುಂದಿನ ವರ್ಷದ ಮೇ ತನಕ ಮುಂದುವರಿಯುತ್ತದೆ. ಸಂದೀಪ್ ಕೂಡ ಮಧ್ಯಪ್ರದೇಶದ ಬಹರಾಂಪುರ ಗ್ರಾಮದ ತನ್ನ 18 ಎಕರೆ ಜಮೀನಿನಲ್ಲಿ 10 ಎಕರೆಯಲ್ಲಿ ಹತ್ತಿ ಬೆಳೆಯುತ್ತಾರೆ.
2022ರ ಅಕ್ಟೋಬರ್ ತಿಂಗಳಿನ ಮೊದಲ ಕೊಯ್ಲಿನಲ್ಲಿ ಸುಮಾರು 30 ಕ್ವಿಂಟಾಲ್ ಹತ್ತಿ ದೊರಕಿದ್ದರಿಂದ ಸಂದೀಪ್ ಖುಷಿಯಾಗಿದ್ದರು. ಇದು ಬಹರಾಂಪುರದ ಅವರ ಜಮೀನಿನಲ್ಲಿ ಮೊದಲ ಸುತ್ತಿನ ಕೊಯ್ಲಿನಲ್ಲಿ ದೊರೆತ ಹತ್ತಿಯಾಗಿತ್ತು. ಅವರು ಎರಡನೇ ಸುತ್ತಿನ ಕೊಯ್ಲಿನಲ್ಲೂ ಅಷ್ಟೇ ಇಳುವರಿ ಸಿಗುವ ನಿರೀಕ್ಷೆಯಲ್ಲಿದ್ದರು. ಆದರೆ ಸಿಕ್ಕಿದ್ದು 26 ಕ್ವಿಂಟಾಲ್ ಮಾತ್ರ.
ಈ ನಡುವೆ, ಮಾರುಕಟ್ಟೆ ತೆರಿಗೆಯನ್ನು ಕಡಿತಗೊಳಿಸುವಂತೆ ಒತ್ತಾಯಿಸಿ ವ್ಯಾಪಾರಿಗಳ ಮುಷ್ಕರದಿಂದಾಗಿ ಮಧ್ಯಪ್ರದೇಶದ ಎಲ್ಲಾ ಹತ್ತಿ ಮಂಡಿಗಳು 2022ರ ಅಕ್ಟೋಬರ್ 11ರಿಂದ ಮುಚ್ಚಲ್ಪಟ್ಟಿದ್ದರಿಂದ ಅವರು ತಮ್ಮ 30 ಕ್ವಿಂಟಾಲ್ ಉತ್ಪನ್ನವನ್ನು ಖಾರ್ಗೋನ್ ಹತ್ತಿ ಮಾರುಕಟ್ಟೆಗೆ ಕೊಂಡೊಯ್ಯಲು ಸಾಧ್ಯವಾಗಲಿಲ್ಲ. ವ್ಯಾಪಾರಿಗಳಿಗೆ ಪ್ರತಿ 100 ರೂ. ಖರೀದಿಗೆ 1.7 ರೂ.ಗಳ ತೆರಿಗೆ ವಿಧಿಸಲಾಗುತ್ತಿದೆ. ಇದು ದೇಶದ ಹೆಚ್ಚಿನ ರಾಜ್ಯಗಳಿಗಿಂತ ಹೆಚ್ಚಾಗಿದೆ. ಇದನ್ನು ಕಡಿಮೆಗೊಳಿಸುವಂತೆ ಆಗ್ರಹಿಸಿ ಪ್ರಾರಂಭಿಸಿದ ಹತ್ತಿ ವ್ಯಾಪಾರಿಗಳ ಮುಷ್ಕರವು ಎಂಟು ದಿನಗಳವರೆಗೆ ಮುಂದುವರಿಯಿತು.
ಅಕ್ಟೋಬರ್ 10ರಂದು, ಮುಷ್ಕರ ಪ್ರಾರಂಭವಾಗುವ ಒಂದು ದಿನ ಮೊದಲು, ಖಾರ್ಗೋನ್ ಹತ್ತಿ ಮಾರುಕಟ್ಟೆಯಲ್ಲಿ ಹತ್ತಿಯನ್ನು ಕ್ವಿಂಟಾಲ್ ಒಂದಕ್ಕೆ 8,740 ರೂ.ಗೆ ಖರೀದಿಸಲಾಗುತ್ತಿತ್ತು. ಮುಷ್ಕರ ಕೊನೆಗೊಂಡ ನಂತರ ಹತ್ತಿಯ ಬೆಲೆ ಕ್ವಿಂಟಾಲಿಗೆ 890 ರೂ. ಕಡಿಮೆಯಾಗುವುದರೊಂದಿಗೆ 7,850 ರೂ.ಗೆ ಇಳಿಯಿತು. ಅಕ್ಟೋಬರ್ 19ರಂದು ಮಂಡಿಗಳು ಮತ್ತೆ ತೆರೆದಾಗ, ಸಂದೀಪ್ ಯಾದವ್ ಬೆಲೆ ಕುಸಿತದಿಂದಾಗಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲಿಲ್ಲ. ಅಕ್ಟೋಬರ್ 2022ರಲ್ಲಿ ಪರಿಯೊಂದಿಗೆ ಮಾತನಾಡಿದ ಈ 34 ವರ್ಷದ ರೈತ, "ಈಗ ಸರಕುಗಳನ್ನು ಮಾರಿದರೆ ನನಗೆ ಏನೂ ಸಿಗುವುದಿಲ್ಲ" ಎಂದು ಹೇಳಿದರು.








