ಆಕೆ ತನ್ನ ಕೊಠಡಿಯ ಕಿಟಕಿಯಿಂದ ನೋಡುತ್ತಿದ್ದರು. ಕಣ್ಣು ಹಾಯಿಸಿದಲ್ಲೆಲ್ಲ ನೀರೇ ನೀರು. ಪ್ರವಾಹದ ನೀರು ಇಳಿದೇ ಇಲ್ಲ. ರೂಪಾಲಿ ಬಾಗು ಅವರ ಮನೆ ಸುಬನ್ಶ್ರೀ ನದಿಗೆ ಒಂದು ಕೇವಲ ಒಂದು ಕಿಲೋಮೀಟರ್ ದೂರದಲ್ಲಿದೆ. ಈ ನದಿ ಬ್ರಹ್ಮಪುತ್ರ ನದಿಯ ಮುಖ್ಯ ಉಪನದಿಗಳಲ್ಲಿ ಒಂದು. ಈ ನದಿ ಪಾತ್ರದಲ್ಲೂ ವಾರ್ಷಿಕ ಪ್ರವಾಹದ ಪರಿಣಾಮಗಳು ಇರುತ್ತವೆ.
ಎಲ್ಲಿ ನೋಡಿದರೂ ನೀರೇ ಕಾಣುತ್ತದೆ, ವಿಪರ್ಯಾಸವೆಂದರೆ ಕುಡಿಯಲು ಬೇಕೆಂದರೆ ಒಳ್ಳೆಯ ನೀರು ಒಂದು ಹನಿ ಕೂಡಾ ಸಿಗುವುದಿಲ್ಲ. ಅವರ ಮನೆಯಿರುವುದು ಅಸ್ಸಾಮ್ ರಾಜ್ಯದ ಲಕೀಂಪುರ ಜಿಲ್ಲೆಯ ಬೋರ್ದುಬಿ ಮಲುವಾಲ್ ಗ್ರಾಮದಲ್ಲಿ. ಇಲ್ಲಿ ಕುಡಿಯುವ ನೀರು ಪೂರ್ತಿಯಾಗಿ ಕಲುಷಿತಗೊಂಡಿದೆ. “ನಮ್ಮ ಊರಿನ ಮತ್ತು ಹತ್ತಿರದ ಊರುಗಳ ಹ್ಯಾಂಡ್ ಪಂಪುಗಳೆಲ್ಲವೂ ನೀರಿನಲ್ಲಿ ಮುಳುಗಿ ಹೋಗಿವೆ” ಎಂದು ರೂಪಾಲಿ ವಿವರಿಸುತ್ತಾರೆ.
ರಸ್ತೆಯ ಬಳಿಯಿರುವ ಹ್ಯಾಂಡ್ ಪಂಪಿನಿಂದ ನೀರನ್ನು ತರಲು ಅವರು ಸಣ್ಣ ದೋಣಿಯೊಂದನ್ನು ಆಶ್ರಯಿಸುತ್ತಾರೆ. ಇದರಲ್ಲಿ ಅವರು ಮೂರು ನೀರಿನ ಪಾತ್ರೆಯನ್ನು ಜೋಡಿಸಿಕೊಂಡು ರಸ್ತೆಯ ಮೇಲೆ ಹುಟ್ಟು ಹಾಕುತ್ತಾರೆ. ಆದರೆ ಅದು ಕೂಡಾ ಅರ್ಧ ಭಾಗ ನೀರಿನಲ್ಲಿ ಮುಳುಗಿತ್ತು. ದೋಣಿ ನಡೆಸಲು ಅವರು ಉದ್ದದ ಬಿದಿರಿನ ಕೋಲೊಂದನ್ನು ಬಳಸುತ್ತಾರೆ. “ಮೋನಿ, ನನ್ನ ಜೊತೆ ಬಾ!” ಎಂದು ಅವರು ತನ್ನ ನೆರೆ ಮನೆಯವರನ್ನು ಕರೆದರು. ಸಾಮಾನ್ಯವಾಗಿ ಇವರಿಬ್ಬರೂ ಜೊತೆಯಲ್ಲೇ ನೀರಿಗೆ ಹೋಗಿ ನೀರಿನ ಪಾತ್ರೆಗಳನ್ನು ತುಂಬಲು ಪರಸ್ಪರ ಸಹಾಯ ಮಾಡುತ್ತಾರೆ.








