ರಾಯಪುರದ ಹೊರವಲಯದ ಇಟ್ಟಿಗೆ ಭಟ್ಟಿಯಲ್ಲಿ ಅದು ಊಟದ ಸಮಯ. ಅಲ್ಲಿದ್ದ ಕೆಲಸದವರಲ್ಲಿ ಕೆಲವರು ಗಡಿಬಿಡಿಯಲ್ಲಿ ಊಟ ಮಾಡುತ್ತಿದ್ದರೆ ಇನ್ನೂಕೆಲವರು ಅಲ್ಲಿದ್ದ ತಾತ್ಕಾಲಿಕ ಗುಡಿಸಲುಗಳಲ್ಲಿ ವಿರಾಮ ಪಡೆಯುತ್ತಿದ್ದರು.
"ನಾವು ಸತ್ನಾದಿಂದ ಬಂದವರು" ಎಂದು ಮಹಿಳೆಯೊಬ್ಬರು ತಮ್ಮ ಮಣ್ಣಿನ ಗುಡಿಸಲಿನಿಂದ ಹೊರಬರುತ್ತಾ ಹೇಳಿದರು. ಇಲ್ಲಿನ ಹೆಚ್ಚಿನ ಕಾರ್ಮಿಕರು ಮಧ್ಯಪ್ರದೇಶದಿಂದ ವಲಸೆ ಬಂದವರು. ಪ್ರತಿ ವರ್ಷ ನವೆಂಬರ್-ಡಿಸೆಂಬರ್ ತಿಂಗಳ ಕೊಯ್ಲಿನ ಹಂಗಾಮು ಮುಗಿದ ನಂತರ ಅವರು ಛತ್ತೀಸಗಢದ ರಾಜಧಾನಿಗೆ ಬರುತ್ತಾರೆ ಮತ್ತು ಮೇ ಅಥವಾ ಜೂನ್ ತನಕ ಆರು ತಿಂಗಳ ಕಾಲ ಇಲ್ಲಿ ಇರುತ್ತಾರೆ. ಭಾರತದ ವಿಶಾಲವಾದ ಇಟ್ಟಿಗೆ ಉದ್ಯಮವು ಅಂದಾಜು 10-23 ಮಿಲಿಯನ್ ಕಾರ್ಮಿಕರನ್ನು ನೇಮಿಸಿಕೊಂಡಿದೆ (ಭಾರತದ ಇಟ್ಟಿಗೆ ಗೂಡುಗಳಲ್ಲಿ ಗುಲಾಮಗಿರಿ, 2017).
ಈ ವರ್ಷ, ಅವರು ಮನೆಗೆ ಹಿಂದಿರುಗುವ ಹೊತ್ತಿಗೆ, ಕೇಂದ್ರದಲ್ಲಿ ಹೊಸ ಸರ್ಕಾರ ಬಂದಿರುತ್ತದೆ. ಆದರೆ ನಾಯಕರನ್ನು ಆಯ್ಕೆ ಮಾಡುವಲ್ಲಿ ಇಲ್ಲಿನ ವಲಸೆ ಕಾರ್ಮಿಕರ ಪಾತ್ರವಿರಲಿದೆಯೇ ಎಂಬುದು ಅನಿಶ್ಚಿತವಾಗಿದೆ.
"ಮತದಾನದ ಸಮಯ ಬಂದಾಗ ನಮಗೆ ತಿಳಿಸಲಾಗುತ್ತದೆ" ಎಂದು ಹೆಸರು ಹೇಳಲು ಬಯಸದ ಮಹಿಳೆ ಪರಿಗೆ ತಿಳಿಸಿದರು.
ಬಹುಶಃ ಈ ಮಾಹಿತಿಯನ್ನು ಅವರ ಗುತ್ತಿಗೆದಾರ ಸಂಜಯ್ ಪ್ರಜಾಪತಿ ಒದಗಿಸುತ್ತಾರೆ. ಗುಡಿಸಲುಗಳಿಂದ ಸ್ವಲ್ಪ ದೂರದಲ್ಲಿ ನಿಂತು ಮಾತನಾಡುತ್ತಿದ್ದ ಅವರು, "ಸತ್ನಾದಲ್ಲಿ ಮತದಾನ ಯಾವಾಗ ಎನ್ನುವುದರ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ. ನಮಗೆ ಮಾಹಿತಿ ದೊರೆತಾಗ ನಾವು ಅವರಿಗೆ ತಿಳಿಸುತ್ತೇವೆ” ಎಂದು ಹೇಳಿದರು. ಸಂಜಯ್ ಮತ್ತು ಇಲ್ಲಿನ ಅನೇಕ ಕಾರ್ಮಿಕರು ಪ್ರಜಾಪತಿ ಸಮುದಾಯಕ್ಕೆ ಸೇರಿದವರು (ಮಧ್ಯಪ್ರದೇಶದಲ್ಲಿ ಇತರ ಹಿಂದುಳಿದ ವರ್ಗಗಳಡಿ ಎಂದು ಪಟ್ಟಿ ಮಾಡಲಾಗಿದೆ).









