ಅಬ್ದುಲ್ ಕುಮಾರ್ ಮಾಗ್ರೆ ಕೊನೆಯ ಬಾರಿಗೆ ಪಟ್ಟು ನೇಯ್ಗೆ ಮಾಡಿ 30 ವರ್ಷಗಳಾಗಿವೆ. ಚಳಿಗಾಲದಲ್ಲಿ ಕಾಶ್ಮೀರದ ತಾಪಮಾನವು 20 ಡಿಗ್ರಿ ಸೆಲ್ಸಿಯಸ್ಗಿಂತ ಕಡಿಮೆಯಾದಾಗ ಅದನ್ನು ತಡೆದುಕೊಳ್ಳಲು ಬೇಕಾದ ಈ ಉಣ್ಣೆಯ ಬಟ್ಟೆಯನ್ನು ನೇಯುವ ಕೊನೆಯ ನೇಕಾರರಲ್ಲಿ ಇವರೂ ಒಬ್ಬರು.
"ನಾನು ಒಂದೇ ದಿನದಲ್ಲಿ 11 ಮೀಟರ್ ನೇಯ್ಗೆ ಮಾಡುತ್ತಿದ್ದೆ" ಎಂದು ತನ್ನ ದೃಷ್ಟಿಯನ್ನು ಕಳೆದುಕೊಂಡಿರುವ 82 ವರ್ಷ ವಯಸ್ಸಿನ ಅಬ್ದುಲ್ ಕುಮಾರ್ ನೆನಪಿಸಿಕೊಳ್ಳುತ್ತಾರೆ. ಗೋಡೆಗೆ ಕೈ ಕೊಟ್ಟು ಕೋಣೆಯ ಉದ್ದಕ್ಕೂ ಜಾಗೃತೆಯಿಂದ ದಾರಿ ಮಾಡಿಕೊಂಡು ನಡೆಯುತ್ತಾ "ನಾನು ಸುಮಾರು 50 ವರ್ಷದವನಿದ್ದಾಗ ಹೆಚ್ಚು ನೇಯ್ಗೆ ಮಾಡಿದ ಕಾರಣ ನನ್ನ ದೃಷ್ಟಿ ದುರ್ಬಲವಾಯ್ತು," ಎಂದು ಹೇಳಿದರು.
2011 ರ ಜನಗಣತಿಯ ಪ್ರಕಾರ 4,253 ಜನಸಂಖ್ಯೆಯನ್ನು ಹೊಂದಿರುವ ಬಂದಿಪೋರ್ ಜಿಲ್ಲೆಯ ಹಳ್ಳಿಯಾದ ದಾವರ್ನಲ್ಲಿರುವ ಹಬ್ಬಾ ಖಾತೂನ್ ಶಿಖರ ಕಾಣುವಲ್ಲಿ ಅಬ್ದುಲ್ ವಾಸಿಸುತ್ತಾರೆ. ಈಗ ಕ್ರಿಯಾಶೀಲನಾದ ಒಬ್ಬನೇ ಒಬ್ಬ ಪಟ್ಟು ಕುಶಲಕರ್ಮಿ ಇಲ್ಲ ಎಂದು ಅವರು ನಮಗೆ ಹೇಳುತ್ತಾರೆ. ಆದರೆ, "ಸುಮಾರು ಒಂದು ದಶಕದ ಹಿಂದೆ, ಚಳಿಗಾಲದ ಸಮಯದಲ್ಲಿ, ಹಳ್ಳಿಯ ಪ್ರತಿ ಮನೆಯವರು ವಸಂತಕಾಲದಲ್ಲಿ ಮತ್ತು ಬೇಸಿಗೆಯಲ್ಲಿ ಮಾರಾಟ ಮಾರಲು ಉಡುಪುಗಳನ್ನು ನೇಯ್ಗೆ ಮಾಡುತ್ತಿದ್ದರು," ಎಂದು ನೆನಪಿಸಿಕೊಂಡರು.
ಅಬ್ದುಲ್ ಮತ್ತು ಅವರ ಕುಟುಂಬವು ಶ್ರೀನಗರ ಮತ್ತು ಬೇರೆ ರಾಜ್ಯಗಳಲ್ಲಿ ಮಾರಾಟ ಮಾಡಲು ಫೆರಾನ್ (ಸಾಂಪ್ರದಾಯಿಕ ಗೌನ್ ಮಾದರಿಯ ಮೇಲುಡುಪು), ದುಪತಿ (ಕಂಬಳಿ), ಸಾಕ್ಸ್ ಮತ್ತು ಕೈಗವಸುಗಳು ಸೇರಿಂದಂತೆ ಕೆಲವು ಉಡುಪುಗಳನ್ನು ತಯಾರು ಮಾಡುತ್ತಾರೆ.
ಆದರೆ ಅಬ್ದುಲ್ ಅವರಿಗೆ ತನ್ನ ಕೌಶಲ್ಯದ ಮೇಲೆ ಎಷ್ಟೇ ಪ್ರೀತಿ ಇದ್ದರೂ ಕಚ್ಚಾ ವಸ್ತು - ಉಣ್ಣೆ ಸುಲಭವಾಗಿ ಸಿಗದ ಕಾರಣ ತನ್ನ ಕರಕುಶಲತೆಯನ್ನು ಉಳಿಸಿಕೊಳ್ಳುವುದು ಅವರಿಗೆ ಅಷ್ಟು ಸುಲಭವಲ್ಲ. ಹಿಂದೆ ಅಬ್ದುಲ್ ರಂತಹ ನೇಕಾರರು ಕುರಿಗಳನ್ನು ಸಾಕಿ ಅವುಗಳಿಂದ ಪಟ್ಟು ನೇಯಲು ಬೇಕಾದ ಉಣ್ಣೆಯನ್ನು ಸಂಗ್ರಹಿಸುತ್ತಿದ್ದರು. ಸುಮಾರು 20 ವರ್ಷಗಳ ಹಿಂದೆ ಅವರ ಕುಟುಂಬ ಸುಮಾರು 40 - 45 ಕುರಿಗಳನ್ನು ಹೊಂದಿತ್ತು. ಆಗ ಉಣ್ಣೆ ಸುಲಭವಾಗಿ ಸಿಗುತ್ತಿತ್ತು ಮತ್ತು ಅಗ್ಗವಾಗಿತ್ತು ಎಂದು ಅವರು ಹೇಳುತ್ತಾರೆ. "ನಾವು ಒಳ್ಳೆಯ ಲಾಭವನ್ನು ಪಡೆಯುತ್ತಿದ್ದೆವು," ಎಂದು ಅವರು ನೆನಪಿಸಿಕೊಳ್ಳುತ್ತಾರೆ. ಈಗ ಈ ಕುಟುಂಬವು ಕೇವಲ ಆರು ಕುರಿಗಳನ್ನು ಸಾಕುತ್ತಿದೆ.


















