ಇತ್ತ ಸೂರ್ಯ ತನ್ನ ದಿನದ ಕೆಲಸ ಮುಗಿಸಿ ಮರಳುತ್ತಿದ್ದರೆ ಅತ್ತ ಕತ್ತಲಿನ ನಡುವಿನಿಂದ ಓಂ ಶಕ್ತಿ ಅಮ್ಮ ಆಕೃತಿಯಿರುವ ಸೀರಿಯಲ್ ಸೆಟ್ಗಳ ಬೆಳಕು ಜೀವ ಪಡೆಯತೊಡಗುತ್ತದೆ. ಅಂದು ಬಂಗಳಮೇಡುವಿನ ಇರುಳರು ತಮ್ಮ ವಾರ್ಷಿಕ ಹಬ್ಬವಾದ ಓಂ ಸಕ್ತಿ ತೀಮಿದಿ ತಿರುವುಳಾ ಎನ್ನುವ ಕೆಂಡ ಹಾಯುವ ವಾರ್ಷಿಕ ಹಬ್ಬದ ಆಚರಣೆಯಲ್ಲಿದ್ದರು.
ಒಂದು ಮಧ್ಯಾಹ್ನದಿಂದ ಉರಿಯುತ್ತಿದ್ದ ಸೌದೆಯ ಕೊಳ್ಳಿಗಳು ಉರಿದು ಕೆಂಡಗಳಾಗಲು ಪ್ರಾರಂಭಿಸಿದ್ದವು. ಅಲ್ಲಿದ್ದ ಸ್ವಯಂಸೇವಕರು ಆ ಕೆಂಡದ ರಾಶಿಯನ್ನು ಹೊಳೆಯುವ ಹೂವಿನ ರಾಶಿಯನ್ನು ನೆಪಿಸುವಂತೆ ತೆಳ್ಳಗೆ ಹರಡಿದರು. ಇದು ಇರುಳ ಜನರಿಗೆ ತೀಮಿದಿಯನ್ನು ʼಪೂ-ಮಿದಿಯಾಗಿʼ ಅಥವಾ ಹೂವಿನ ಮೇಲಿನ ನಡಿಗೆಯನ್ನಾಗಿ ತೋರಿಸುವ ಪ್ರಯತ್ನದಂತೆ ಕಾಣುತ್ತಿತ್ತು.
ವಾತಾವರಣದಲ್ಲಿ ಕುತೂಹಲ ಹೆಪ್ಪುಗಟ್ಟಿತ್ತು. ನೂರಾರು ಜನರು ಅಂದು ನಡೆಯಲಿರುವ ಇರುಳರ ಕೆಂಡ ಹಾಯುವ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲೆಂದು ಬಂದಿದ್ದರು. ಅವರಲ್ಲಿ ಅಕ್ಕಪಕ್ಕದ ಊರುಗಳ ಜನರೂ ಇದ್ದರು. ಇದು ಓಂ ಶಕ್ತಿ ಎನ್ನುವ ತಮಿಳುನಾಡಿನಾದ್ಯಂತ ಪಸರಿಸಿರುವ ಶಕ್ತಿ ಮತ್ತು ಅಧಿಕಾರದ ಪ್ರತೀಕವಾಗಿರುವ ದೇವಿಯ ಆರಾಧನೆಯಾಗಿದೆ.
ತಮಿಳುನಾಡಿನಲ್ಲಿ ಇರುಳರ್ (ಇರುಳ ಎಂದೂ ಕರೆಯಲಾಗುತ್ತದೆ) ಸಮುದಾಯವನ್ನು ಪರಿಶಿಷ್ಟ ಪಂಗಡದಡಿ ಪಟ್ಟಿ ಮಾಡಲಾಗಿದೆ. ಅವರು ಸಾಂಪ್ರದಾಯಿಕವಾಗಿ ಕನ್ನೈಯಮ್ಮ ಎನ್ನುವ ದೇವಿಯನ್ನು ಪೂಜಿಸುತ್ತಿದ್ದರು. ಅವರು ಆಕೆಯನ್ನು ಸಪ್ತ ಕನ್ನಿಕೆಯರಲ್ಲಿ ಒಬ್ಬಳೆಂದು ಪರಿಗಣಿಸುತ್ತಾರೆ. ಪ್ರತಿಯೊಂದು ಇರುಳರ ಮನೆಯಲ್ಲೂ ಈ ದೇವಿಯನ್ನು ಪ್ರತಿನಿಧಿಸುವ ಒಂದು ಮಣ್ಣಿನ ಕಳಶವಿರುತ್ತದೆ. ಅದರೊಳಗೆ ಬೇವಿನ ಎಲೆಗಳನ್ನು ಇರಿಸಲಾಗಿರುತ್ತದೆ.
























