ಆ ರಾಜನ ಆಸ್ಥಾನದಲ್ಲಿ ಶ್ರೀಮಂತರಾಗಿರಲಿ ಬಡವರಾಗಿರಲಿ, ಯುವಕರಾಗಿರಲಿ, ವೃದ್ಧರಾಗಿರಲಿ, ಎಲ್ಲರೂ ತಮ್ಮ ಚಪ್ಪಲಿಗಳನ್ನು ತೆಗೆದು ಮಹಾರಾಜರ ಪಾದಗಳನ್ನು ಮುಟ್ಟಿ ನಮಸ್ಕರಿಸಬೇಕಿತ್ತು. ಆದರೆ ಬಡಕಲು ಯುವಕನೊಬ್ಬ ಹಾಗೆ ಮಾಡಲು ನಿರಾಕರಿಸಿ ನೇರವಾಗಿ ನಿಂತು ರಾಜನ ಕಣ್ಣಲ್ಲಿ ಕಣ್ಣಿಟ್ಟು ನೋಡತೊಡಗಿದನು. ಆದರೆ ಯಾವುದೇ ಭಿನ್ನಾಭಿಪ್ರಾಯವನ್ನು ನಿರ್ದಯವಾಗಿ ಹತ್ತಿಕ್ಕುವ ವಿಷಯದಲ್ಲಿ ಖ್ಯಾತನಾಗಿದ್ದ ರಾಜನ ಆಸ್ಥಾನದಲ್ಲಿ ನಡೆದ ಈ ಘಟನೆಯಿಂದ ಪಂಜಾಬಿನ ಜೋಗ ಗ್ರಾಮದ ಹಿರಿಯರು ಹೆದರಿಹೋದರು. ಮತ್ತು ಇದರಿಂದ ರಾಜಮನೆತನ ಕೆರಳಿ ನಿಂತಿತು.
ಆ ಯುವಕನ ಹೆಸರು ಜಾಗೀರ್ ಸಿಂಗ್ ಜೋಗಾ. ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ (ಸಿಐಎಸ್ಎಫ್) ಕಾನ್ಸ್ಟೇಬಲ್ ಕುಲ್ವಿಂದರ್ ಕೌರ್ ಬಾಲಿವುಡ್ ಸೆಲೆಬ್ರಿಟಿ ಮತ್ತು ಪ್ರಸ್ತುತ ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದ ಸಂಸದೆ ಕಂಗನಾ ರಣಾವತ್ ಅವರಿಗೆ ಕಪಾಳಮೋಕ್ಷ ಮಾಡುವ ಒಂಬತ್ತು ದಶಕಗಳ ಮೊದಲು ಈ ಯುವಕನ ಧೈರ್ಯಶಾಲಿ, ವೈಯಕ್ತಿಕ ಪ್ರತಿಭಟನೆ ನಡೆದಿತ್ತು. ಜೋಗಾ ತಾನು ಪಟಿಯಾಲಾದ ಮಹಾರಾಜ ಭೂಪಿಂದರ್ ಸಿಂಗ್ ಅವರ ವಿರುದ್ಧ ಪ್ರತಿಭಟಿಸಿ ನಿಂತಿದ್ದರು, ಇದರಿಂದ ಕೆರಳಿದ ಅವರ ಊಳಿಗಮಾನ್ಯ ಗೂಂಡಾಗಳು ಊರಿನ ಬಡ ರೈತರ ಭೂಮಿಯನ್ನು ಕಸಿದುಕೊಳ್ಳಲು ಪ್ರಯತ್ನಿಸಿದರು. ಇದು ನಡೆದಿದ್ದು 1930ರ ದಶಕದಲ್ಲಿ. ಮುಂದೇನಾಯಿತು ಎನ್ನುವ ವಿವರ ಜಾನಪದ ಮತ್ತು ಪರಿಶೀಲಿಸಬಹುದಾದ ಇತಿಹಾಸದ ನಡುವೆ ಕಳೆದುಹೋಗಿದೆ. ನಂತರ ಜೋಗಾ ಇನ್ನೊಂದು ಹೋರಾಟವನ್ನೂ ಮಾಡಿದ್ದರು.
ಇದಾಗಿ ಒಂದು ದಶಕದ ನಂತರ ಜೋಗಾ ಮತ್ತು ಆಗಿನ ಲಾಲ್ ಪಕ್ಷದ ಸಹಚರರು ಸೇರಿ ಕಿಶನ್ಗಡ (ಪ್ರಸ್ತುತ ಸಂಗ್ರೂರ್ ಜಿಲ್ಲೆಗೆ ಸೇರಿದೆ) ಎನ್ನುವ ಪ್ರದೇಶದಲ್ಲಿ ಭೂ ಹೋರಾಟವನ್ನು ಸಂಘಟಿಸಿದರು. ಈ ಹೋರಾಟದ ಮೂಲಕ ಅವರು ಭೂಪಿಂದರ್ ಸಿಂಗ್ ಅವರ ಮಗನ ವಶದಲ್ಲಿದ್ದ 784 ಹಳ್ಳಿಗಳ ಸಾವಿರಾರು ಎಕರೆ ಭೂಮಿಯನ್ನು ಕಸಿದು ಅಲ್ಲಿನ ಭೂ ರಹಿತ ರೈತರಿಗೆ ಕೊಡಿಸಿದರು. ಈ ಭೂಪಿಂದರ್ ಸಿಂಗ್ ಪಟಿಯಾಲದ ಹಿಂದಿನ ರಾಜ ಮತ್ತು ಪಂಜಾಬಿನ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರ ಅಜ್ಜ.
ಆ ಭೂಮಿ ಹೋರಾಟವೂ ಸೇರಿದಂತೆ ಹಲವು ಹೋರಾಟಗಳ ಕಾರಣಕ್ಕಾಗಿ 1954ರಲ್ಲಿ ಜೋಗಾ ಜೈಲು ಸೇರಿದ್ದರು. ಅವರು ಜೈಲಿನಲ್ಲಿರುವಾಗ ಚುನಾವಣೆಯಲ್ಲಿ ಸ್ಪರ್ಧಿಸಿ ಜನರಿಂದ ಆಯ್ಕೆಯಾಗಿದ್ದರು. ಜನರು ಅವರನ್ನು ರಾಜ್ಯ ವಿಧಾನಸಭೆಗೆ ಮತ ಚಲಾಯಿಸಿದರು. 1962, 1967 ಮತ್ತು 1972ರಲ್ಲಿ ಶಾಸಕರನ್ನಾಗಿ ಆಯ್ಕೆ ಮಾಡಿದ್ದರು.












