ನಾರಾಯಣ್ ಕುಂಡಲಿಕ್ ಹಜಾರೆಯವರಿಗೆ ಬಜೆಟ್ ಎಂಬ ಪದ ಅರ್ಥವಾಗುತ್ತದೆ ಏಕೆಂದರೆ ಅವರ ಬಳಿ ಹೆಚ್ಚಿನ ಬಜೆಟ್ ಇಲ್ಲ.
"ಆಪ್ಲಾ ತೇವ್ಧಾ ಬಜೆಟ್ಚ್ ನಹೀ [ನನ್ನ ಬಳಿ ಅಷ್ಟು ಬಜೆಟ್ ಇಲ್ಲ]!" ಕೇವಲ ನಾಲ್ಕು ಪದಗಳಲ್ಲಿ, ನಾರಾಯಣ್ ಕಾಕಾ 12 ಲಕ್ಷ ರೂ.ವರೆಗಿನ ತೆರಿಗೆ ಮುಕ್ತ ಆದಾಯದ ಕುರಿತಾದ ಪ್ರಚಾರಕ್ಕೆ ತೆರೆ ಎಳೆಯುತ್ತಾರೆ.
ಕೇಂದ್ರದ ಬಜೆಟ್ ಕುರಿತಾದ ಪ್ರಶ್ನೆಯು ಈ 65 ವರ್ಷದ ರೈತ ಮತ್ತು ಹಣ್ಣು ಮಾರಾಟಗಾರನನ್ನು ತೀವ್ರವಾಗಿ ಯೋಚಿಸುವಂತೆ ಮಾಡಿತು. ನಂತರ ಅವರು, “ನನಗೆ ಈ ವಿಷಯದ ಬಗ್ಗೆ ಏನೂ ಗೊತ್ತಿಲ್ಲ, ಈ ಕುರಿತಾಗಿ ಎಂದೂ ಕೇಳಿಲ್ಲ” ಎಂದು ದೃಢವಾಗಿ ಹೇಳಿದರು.
ನಾರಾಯಣ ಹಜಾರೆಯವರಿಗೆ ಈ ಕುರಿತು ತಿಳಿಯುವ ಮಾರ್ಗಗಳೂ ಲಭ್ಯವಿಲ್ಲ. “ನನ್ನ ಬಳಿ ಫೋನ್ ಇಲ್ಲ. ಮನೆಯಲ್ಲಿ ಟಿವಿಯೂ ಇಲ್ಲ.” ಕೆಲವು ದಿನಗಳ ಹಿಂದೆ ಸ್ನೇಹಿತರೊಬ್ಬರು ಅವರಿಗೆ ರೇಡಿಯೋ ಒಂದನ್ನು ಉಡುಗೊರೆಯಾಗಿ ನೀಡಿದ್ದಾರೆ. ಆದರೆ ಸಾರ್ವಜನಿಕ ಪ್ರಸಾರ ಸೇವೆಯು ಈ ವಾರ್ಷಿಕ ಕಾರ್ಯಕ್ರಮದ ಬಗ್ಗೆ ಅವರಿಗೆ ಇನ್ನೂ ಮಾಹಿತಿ ನೀಡಿಲ್ಲ. "ಅಮ್ಚಾ ಅದಾನಿ ಮಾನಸಚಾ ಕೇ ಸಂಬಂಧ್, ತುಮ್ಹಿಚ್ ಸಾಂಗಾ [ಇದಕ್ಕೂ ನಮ್ಮಂತಹ ಅನಕ್ಷರಸ್ಥ ಜನರಿಗೆ ಏನಾದರೂ ಸಂಬಂಧವಿದೆಯೇ?" ಎಂದು ಅವರು ಕೇಳುತ್ತಾರೆ. 'ಕಿಸಾನ್ ಕ್ರೆಡಿಟ್ ಕಾರ್ಡ್' ಅಥವಾ ಈ ಕಾರ್ಡುಗಳಿಗೆ 'ಹೆಚ್ಚಿಸಿದ ಸಾಲದ ಮಿತಿ' ಎಂಬ ಪದಗಳು ನಾರಾಯಣ್ ಹಜಾರೆ ಅವರಿಗೆ ಅಪರಿಚಿತ.
![](/media/images/2-1738822924148-MK-I_just_dont_have_that_k.max-1400x1120.jpg)
ಮಹಾರಾಷ್ಟ್ರದ ತುಳಜಾಪುರದ ರೈತ ಮತ್ತು ಹಣ್ಣು ಮಾರಾಟಗಾರ ನಾರಾಯಣ್ ಹಜಾರೆ ಬಜೆಟ್ ಬಗ್ಗೆ ಏನನ್ನೂ ಕೇಳಿಲ್ಲ . ' ಇಷ್ಟು ವರ್ಷಗಳಲ್ಲಿ ಎಂದೂ ಕೇಳಿ ಲ್ಲ ' ಎಂದು 65 ವರ್ಷದ ಅವರು ಹೇಳುತ್ತಾರೆ
ನಾರಾಯಣ್ ಕಾಕಾ ತನ್ನ ಮರದ ತಳ್ಳುಗಾಡಿಯಲ್ಲಿ ಆಯಾ ಕಾಲಕ್ಕೆ ಸಿಗುವ ಎಲ್ಲಾ ರೀತಿಯ ಹಣ್ಣುಗಳನ್ನು ಮಾರಾಟ ಮಾಡುತ್ತಾರೆ. "ಇದು ಪೇರಳೆ ಹಣ್ಣಿನ ಕೊನೆಯ ಬ್ಯಾಚ್. ಮುಂದಿನ ವಾರದಿಂದ, ದ್ರಾಕ್ಷಿ ಮತ್ತು ನಂತರ ಮಾವಿನಹಣ್ಣುಗಳನ್ನು ನೋಡಬಹುದು. ಧಾರಾಶಿವ್ (ಹಿಂದೆ ಒಸ್ಮಾನಾಬಾದ್) ಜಿಲ್ಲೆಯ ತುಳಜಾಪುರ ಪಟ್ಟಣದ ಧಾಕಾಟಾ ತುಳಜಾಪುರದ (ಅಕ್ಷರಶಃ 'ಕಿರಿಯ ಸಹೋದರ' ಎಂದರ್ಥ) ನಿವಾಸಿಯಾದ ಕಾಕಾ ಮೂರು ದಶಕಗಳಿಂದ ಹಣ್ಣಿನ ವ್ಯಾಪಾರ ಮಾಡುತ್ತಿದ್ದಾರೆ. 25-30 ಕಿಲೋ ತೂಕದ ಅಷ್ಟೂ ಹಣ್ಣುಗಳನ್ನು ಮಾರಾಟ ಮಾಡಲು 8-10 ಗಂಟೆಗಳ ಕಾಲವನ್ನು ರಸ್ತೆಯಲ್ಲಿ ಕಳೆಯಬೇಕು. ಈ ಶ್ರಮಕ್ಕೆ ಅವರಿಗೆ ಪ್ರತಿಯಾಗಿ ಸಿಗುವುದು 300-400 ರೂಪಾಯಿಗಳು.
ಆದರೆ ನಾರಾಯಣ್ ಹಜಾರೆಯವರು ಬಜೆಟ್ ಮೀರಿ ಒಂದು ಅಥವಾ ಎರಡು ವಿಷಯಗಳನ್ನು ಅರ್ಥಮಾಡಿಕೊಂಡಿದ್ದಾರೆ. "ಎಂದಿಗೂ ಹಣದ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ನಿಮಗೆ ಬೇಕಾದುದನ್ನು ತೆಗೆದುಕೊಳ್ಳಿ. ಅದರ ಹಣವನ್ನು ನೀವು ಯಾವಾಗ ಬೇಕಿದ್ದರೂ ಕೊಡಬಹುದು" ಎಂದು ಅವರು ನನಗೆ ಭರವಸೆ ನೀಡಿ ಆ ದಿನದ ವ್ಯಾಪಾರ ಮುಗಿಸಿ ಹೊರಟರು.
ಅನುವಾದ: ಶಂಕರ. ಎನ್. ಕೆಂಚನೂರು