ಅನೋಪರಾಮ್ ಸುತಾರ್ ಎಂದೂ ಸಂಗೀತ ವಾದ್ಯಗಳನ್ನು ನುಡಿಸಿದವರಲ್ಲ, ಆದರೆ ಅವರಿಗೆ ಯಾವ ಮರ ಉತ್ತಮ ಸ್ವರ ಹೊರಡಿಸುತ್ತದೆ ಎನ್ನುವುದನ್ನು ತನ್ನ ಅನುಭವದಿಂದಲೇ ಕಂಡುಕೊಳ್ಳಬಲ್ಲರು. “ಒಂದು ಮರದ ತುಂಡನ್ನು ನೋಡಿಯೇ ಅದರಿಂದ ಒಂದು ಒಳ್ಳೆಯ ಸಂಗೀತ ವಾದ್ಯವನ್ನು ತಯಾರಿಸಲು ಸಾಧ್ಯವೋ ಇಲ್ಲವೋ ಎನ್ನುವುದನ್ನು ಹೇಳಬಲ್ಲೆ” ಈ ಎಂಟನೇ ತಲೆಮಾರಿನ ಅನುಭವಿ ಖರ್ತಾಲ್ ತಯಾರಕ ಹೇಳುತ್ತಾರೆ.
ರಾಜಸ್ಥಾನದ ಜಾನಪದ ಮತ್ತು ಭಕ್ತಿ ಸಂಗೀತದಲ್ಲಿ ಬಳಸಲಾಗುವ ಸಂಗೀತ ಉಪಕರಣವಾದ ಖರ್ತಾಲನ್ನು ನಾಲ್ಕು ಮರದ ತುಂಡುಗಳನ್ನು ಬಳಸಿ ತಯಾರಿಸಲಾಗುತ್ತದೆ. ಅವುಗಳಲ್ಲಿ ಒಂದು ತುಂಡನ್ನು ಹೆಬ್ಬೆರಳಿಗೆ ಸಿಕ್ಕಿಸಿಕೊಂಡರೆ, ಇನ್ನೊಂದನ್ನು ಉಳಿದ ಬೆರಳುಗಳಿಗೆ ಸಿಕ್ಕಿಸಿಕೊಳ್ಳಲಾಗುತ್ತದೆ. ಅವುಗಳನ್ನು ಪರಸ್ಪರ ತಾಕಿಸಿದಾಗ ಟಕ್ ಟಕ್ ಎನ್ನುವ ಸದ್ದು ಹೊರಡುತ್ತದೆ. ಈ ವಾದ್ಯದಲ್ಲಿ ಕೇವಲ ತ ಮತ್ತು ಕ ಎನ್ನುವ ಸ್ವರಗಳನ್ನಷ್ಟೇ ಬಳಸಲಾಗುತ್ತದೆ. “ಕಲಾಕಾರ್ ಬನವಾತೇ ಹೈ [ಸಂಗೀತಗಾರರು ಖರ್ತಾಲ್ ಮಾಡಿಸುತ್ತಾರೆ]" ಎಂದು 57 ವರ್ಷದ ಅವರು ಹೇಳುತ್ತಾರೆ.
ರಾಜಸ್ಥಾನಿ ಖರ್ತಾಲ್ಗಳಲ್ಲಿ ಮಂಜೀರಾ ಅಥವಾ ಕರತಾಳಗಳಲ್ಲಿ ಇರುವಂತೆ ಗೆಜ್ಜೆಗಳು ಇರುವುದಿಲ್ಲ.
ನುರಿತ ಕುಶಲಕರ್ಮಿ ಕೇವ ಎರಡು ಗಂಟೆಗಳಲ್ಲಿ ನಾಲ್ಕು ಜೋಡಿ ಖರ್ತಾಲ್ ತಯಾರಿಸಬಲ್ಲರು. “ಮೊದಲಿಗೆ ಒಂದಿಡೀ ದಿನ ಬೇಕಾಗುತ್ತಿತ್ತು” ಎಂದು ಅವರು ತಮ್ಮ ವೃತ್ತಿ ಜೀವನದ ಆರಂಭಿಕ ದಿನಗಳನ್ನು ನೆನಪಿಸಿಕೊಂಡು ಹೇಳುತ್ತಾರೆ. ಅನೋಪರಾಮ್ ಅವರ ಕುಟುಂಬವು ಸುಮಾರು ಎರಡು ಶತಮಾನಗಳಿಂದ ಖರ್ತಾಲ್ ತಯಾರಿಸುವ ವೃತ್ತಿಯಲ್ಲಿ ತೊಡಗಿಸಿಕೊಂಡಿದೆ. “ಬಚಪನ್ ಸೇ ಯಹೀ ಕಾಮ್ ಹೇ ಹಮಾರಾ [ಬಾಲ್ಯದಿಂದಲೂ ಇದೇ ಕೆಲಸ ಮಾಡುತ್ತಿರುವುದು].”
ತನ್ನ ತಂದೆ ಉಸ್ಲಾರಾಮ್ ಅವರು ಬಹಳ ಸಹನಶೀಲ ಗುರುಗಳಾಗಿದ್ದರು, ಬಹಳ ತಾಳ್ಮೆಯಿಂದ ಕೆಲಸ ಕಲಿಸುತ್ತಿದ್ದರು ಎಂದು ಅವರು ಹೇಳುತ್ತಾರೆ. “ನಾನು ಬಹಳಷ್ಟು ತಪ್ಪು ಮಾಡುತ್ತಿದ್ದೆ. ಆದರೆ ಎಂದೂ ಅವರು ನನ್ನ ಮೇಲೆ ಕೂಗಾಡಿದವರಲ್ಲ. ಯಾವಾಗಲೂ ಪ್ರೀತಿಯಿಂದ ಕೆಲಸ ಕಲಿಸುತ್ತಿದ್ದರು.” ಖರ್ತಾಲ್ ತಯಾರಿಕೆಯೆನ್ನುವುದು ಸುತಾರ್ ಸಮುದಾಯದವರು ಮಾತ್ರವೇ ಅಭ್ಯಾಸ ಮಾಡುವ ಕರಕುಶಲ ಕಲೆ.














