“ನನ್ನ ಭಯವನ್ನು ನಾನು ಹೇಗೆ ಹೇಳಲಿ? ನನ್ನ ಹೃದಯ ಭಯದಿಂದ ಬಡಿದುಕೊಳ್ಳುತ್ತಿದೆ. ನಾನು ಯಾವಾಗ ಓಡಿ ಯಾವುದಾದರೂ ತೆರೆದ ಸ್ಥಳಕ್ಕೆ ಹೋಗುತ್ತೇನೋ ಎಂದೇ ಯೋಚಿಸುತ್ತಿದ್ದೆ," ಎಂದು ಸುಂದರಬನ್ಸ್ ನ ದಟ್ಟ ಮ್ಯಾಂಗ್ರೋವ್ ಕಾಡುಗಳಲ್ಲಿ ಏಡಿ ಹಿಡಿಯಲು ಹೋಗುವಾಗ ತಾವು ಅನುಭವಿಸುವ ತಣ್ಣಗಿನ ಭಯದ ಬಗ್ಗೆ 41 ವರ್ಷ ಪ್ರಾಯದ ಏಡಿ ಮತ್ತು ಮೀನು ಹಿಡಿಯುವ ಮಹಿಳೆ ಪಾರುಲ್ ಹಲ್ದಾರ್ ಹೇಳುತ್ತಾರೆ. ಏಡಿ-ಬೇಟೆಯ ಸೀಸನ್ನಲ್ಲಿ ಅವರು ಮ್ಯಾಂಗ್ರೋವ್ ಕಾಡಿನ ಮೂಲಕ ನದಿಗಳು ಮತ್ತು ತೊರೆಗಳ ಮೇಲೆ ಕೆಳಕ್ಕೆ ದೋಣಿಯನ್ನು ಓಡಿಸುವಾಗ ಕದ್ದು ಕುಳಿತಿರುವ ಹುಲಿಗಳ ಬಗ್ಗೆ ಎಚ್ಚರದಿಂದ ಇರುತ್ತಾರೆ.
ಈಗ ತನ್ನ ಮರದ ದೋಣಿಯನ್ನು ಗರಲ್ ನದಿಯ ಕೆಳಗೆ ಹುಟ್ಟು ಹಾಕುತ್ತಾ ಲಕ್ಸ್ಬಗನ್ ಗ್ರಾಮದ ನಿವಾಸಿ ಪಾರುಲ್ ಮರೀಚ್ಜಾಪಿ ಕಾಡನ್ನು ದಾಟಿ ಕ್ರಿಸ್-ಕ್ರಾಸ್ ನೆಟ್ ಬೇಲಿಯ ಕಡೆಗೆ ಕಣ್ಣು ಹಾಯಿಸುತ್ತಾರೆ. ದಕ್ಷಿಣ 24 ಪರಗಣ ಜಿಲ್ಲೆಯ ಗೋಸಾಬಾ ಬ್ಲಾಕ್ನಲ್ಲಿರುವ ಅವರ ಹಳ್ಳಿಯ ಸಮೀಪವಿರುವ ಈ ಕಾಡಿನಲ್ಲಿಯೇ ಪಾರುಲ್ ಅವರ ಪತಿ ಇಶಾರ್ ರೊಣೋಜಿತ್ ಹಲ್ದಾರ್ ಅವರನ್ನು ಏಳು ವರ್ಷಗಳ ಹಿಂದೆ ಹುಲಿಯೊಂದು ಸಾಯಿಸಿತ್ತು.
ಅವರು ತನ್ನ 56 ವರ್ಷ ಪ್ರಾಯದ ಅವರ ತಾಯಿ ಲೋಖಿ ಮೊಂಡಲ್ ಜೊತೆಗೆ ಸುಡು ಬೇಸಿಗೆಯ ದಿನದಂದು ದೋಣಿಯ ಅಂಚಿನಲ್ಲಿ ಹುಟ್ಟುಗಳನ್ನು ಹಾಕುತ್ತಾ ಸಾಗುತ್ತಾಳೆ. ಮಗಳಂತೆಯೇ ಲೋಖಿ ಕೂಡ ಓರ್ವ ಮೀನುಗಾರರು.
ಇಶಾರವರನ್ನು ಮದುವೆಯಾದಾಗ ಪಾರುಲ್ ಗೆ ಕೇವಲ 13 ವರ್ಷ ಪ್ರಾಯ. ಅವರದ್ದು ಬಡ ಕುಟುಂಬ, ಆದರೆ ಅವರು ಎಂದಿಗೂ ಮೀನು ಅಥವಾ ಏಡಿಗಳನ್ನು ಹಿಡಿಯಲು ಕಾಡಿಗೆ ಹೋಗಿರಲಿಲ್ಲ. "ನಾನು ಅವತ್ತು ಅವರನ್ನು ಒಪ್ಪಿಸಿ ಕಾಡಿಗೆ ಕರೆತಂದಿದ್ದೆ. ಹದಿನೇಳು ವರ್ಷಗಳ ನಂತರ ಅವರು ಅದೇ ಕಾಡಿನಲ್ಲಿ ಸತ್ತುಹೋದರು," ಎಂದು ಅವರು ನೆನಪಿಸಿಕೊಳ್ಳುತ್ತಾರೆ.
ಪಾರುಲ್ ಎಲ್ಲವನ್ನೂ ನೆನೆದುಕೊಂಡು ಮೌನವಾದರು. ಇಶಾರ್ ಅವರು ಸಾಯುವಾಗ ಅವರಿಗೆ 45 ವರ್ಷ ವಯಸ್ಸು. ಪಾರುಲ್ ಅವರೇ ನಾಲ್ಕು ಹೆಣ್ಣು ಮಕ್ಕಳನ್ನು ಬೆಳೆಸಿದರು.
ಪಾರುಲ್ ಮತ್ತು ಲೋಖಿ ಮತ್ತೆ ಮತ್ತೆ ಭಾರವಾದ ಹುಟ್ಟುಗಳನ್ನು ಎಳೆದು ಬೆವರಿ ಹೋಗಿದ್ದರು. ಈ ಹೆಂಗಸರು ಈಗ ಮೀನುಗಾರಿಕೆ ನಿಷೇಧಿಸಿರುವ ಮ್ಯಾಂಗ್ರೋವ್ ಕಾಡಿನಿಂದ ದೋಣಿಯನ್ನು ಸುರಕ್ಷಿತ ಅಂತರದಲ್ಲಿ ಓಡಿಸುತ್ತಾರೆ. ಮೀನುಗಳ ಸಂತಾನೋತ್ಪತ್ತಿಯ ಸಮಯ ಏಪ್ರಿಲ್ ನಿಂದ ಜೂನ್ ವರೆಗೆ ಮೂರು ತಿಂಗಳ ಕಾಲ ಮ್ಯಾಂಗ್ರೋವ್ ಕಾಡಿನಲ್ಲಿ ಮೀನುಗಾರಿಕೆಯನ್ನು ನಿಷೇಧಿಸಲಾಗಿದೆ. ಈ ಸಂದರ್ಭದಲ್ಲಿ ಪಾರುಲ್ ಜೀವನ ನಡೆಸಲು ತಮ್ಮದೇ ಕೊಳದಿಂದ ಮೀನುಗಳನ್ನು ಹಿಡಿದು ಮಾರಾಟ ಮಾಡುತ್ತಾರೆ.












