ಅಶೋಕ್ ಜಾತವ್ ಓರ್ವ ನಡೆದಾಡುವ ಹೆಣ.
45 ವರ್ಷ ಪ್ರಾಯದ ಇವರು ಎಲ್ಲಾ ಮನುಷ್ಯರಂತೆ ಪ್ರತಿದಿನ ಬೆಳಿಗ್ಗೆ ಏಳುತ್ತಾರೆ. ಇತರ ಕೂಲಿ ಕಾರ್ಮಿಕರಂತೆ ಬೇರೆಯವರ ಹೊಲಕ್ಕೆ ಹೋಗಿ ದುಡಿಯುತ್ತಾರೆ. ಇತರ ಕೆಲಸಗಾರರಂತೆ ಕೆಲಸ ಮುಗಿಸಿ ಸಂಜೆ ಮನೆಗೆ ಹಿಂದಿರುಗುತ್ತಾರೆ. ಇವರಿಗೂ ಉಳಿದವರಿಗೂ ಇರುವ ಒಂದೇ ಒಂದು ವ್ಯತ್ಯಾಸವೆಂದರೆ: ಅಧಿಕೃತವಾಗಿ ಅಶೋಕ್ ಮರಣಹೊಂದಿದ್ದಾರೆ.
2023ರ ಜುಲೈಯಲ್ಲಿ, ಖೋರ್ಘರ್ ನಿವಾಸಿ ಅಶೋಕ್ರವರಿಗೆ ರೈತರಿಗಾಗಿ ಕೇಂದ್ರ ಸರ್ಕಾರ 2019 ರಲ್ಲಿ ಘೋಷಿಸಿದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಅಡಿಯಲ್ಲಿ ವರ್ಷಕ್ಕೆ ಸಿಗುವ ಕನಿಷ್ಠ ಆರ್ಥಿಕ ಬೆಂಬಲ 6,000 ರುಪಾಯಿ ಸತತವಾಗಿ ಎರಡು ವರ್ಷಗಳಿಂದ ಸಿಕ್ಕಿಲ್ಲ.
ಮೊದಲೆರಡು ವರ್ಷಗಳವರೆಗೆ ಹಣ ನಿಯಮಿತವಾಗಿ ಖಾತೆಗೆ ಜಮೆಯಾಗುತ್ತಿತು. ನಂತರ ಇದ್ದಕ್ಕಿದ್ದಂತೆ ನಿಂತುಹೋಯಿತು. ಏನೋ ಸಮಸ್ಯೆಯಾಗಿದೆ, ವ್ಯವಸ್ಥೆಯೇ ಇದನ್ನು ಸ್ವತಃ ಸರಿಪಡಿಸಬಹುದು ಎಂದು ಅವರು ಭಾವಿಸಿದ್ದರು. ಅಶೋಕ್ ಅಂದುಕೊಂಡದ್ದು ಸರಿಯಾಗಿತ್ತು. ಅಲ್ಲೊಂದು ಸಮಸ್ಯೆ ಇತ್ತು. ಆದರೆ ಅದು ಇವರು ಅಂದುಕೊಂಡಿದ್ದ ಸಮಸ್ಯೆಯಾಗಿರಲಿಲ್ಲ.
ಹಣ ಯಾಕೆ ಸಿಗುತ್ತಿಲ್ಲ ಎಂದು ಕೇಳಲು ಜಿಲ್ಲಾಧಿಕಾರಿ ಕಚೇರಿಗೆ ಹೋದಾಗ, ಕಂಪ್ಯೂಟರ್ನ ಹಿಂದೆ ಕುಳಿತಿದ್ದ ವ್ಯಕ್ತಿ ಡೇಟಾವನ್ನು ನೋಡಿ, ನೀವು 2021ರಲ್ಲಿ ಕೋವಿಡ್ -19 ಸಮಯದಲ್ಲಿ ಮೃತಪಟ್ಟಿದ್ದೀರಿ ಎಂದು ಶಾಂತವಾಗಿಯೇ ಹೇಳಿದ. ಇದಕ್ಕೆ ನಗಬೇಕೋ ಇಲ್ಲ ಅಳಬೇಕೋ ಎಂದು ತಿಳಿಯದ ಅಶೋಕ್, “ಮುಜೆ ಸಮಜ್ ನಹಿ ಅಯಾ ಇಸ್ಪೇ ಕ್ಯಾ ಬೋಲು [ನನಗೆ ಹೇಳಬೇಕು ಎಂದೇ ತಿಳಿಯಲಿಲ್ಲ],” ಎಂದು ಹೇಳುತ್ತಾರೆ.







