ಸುಧೀರ್ ಕೋಸ್ರೆ ಮಂಚದ ಮೇಲೆ ವಿಚಿತ್ರವಾಗಿ ಕುಳಿತುಕೊಂಡು ಅವರ ಬಲ ಪಾದದಲ್ಲಿರುವ ಆಳವಾದ ಗಾಯ, ಬಲ ತೊಡೆಯಲ್ಲಿ ಆಗಿರುವ ಸುಮಾರು ಐದು ಸೆಂಟಿಮೀಟರ್ ಉದ್ದದ ಕಟ್, ಬಲ ಮುಂದೋಳಿನ ಕೆಳಗೆ ಉದ್ದವಾದ ಹೊಲಿಗೆ ಹಾಕಬೇಕಿರುವ ಭಯಾನಕ ಗಾಯ ಮತ್ತು ಅವರ ದೇಹದಾದ್ಯಂತ ಆಗಿರುವ ಏಟುಗಳನ್ನು ತೋರಿಸುತ್ತಾರೆ.
ಮಂದ ಬೆಳಕಿನ ಗಾರೆ ಹಾಕದ ಗೋಡೆಯ ಎರಡು ಕೋಣೆಗಳ ಮನೆಯ ಕೋಣೆಯೊಂದರಲ್ಲಿ ಒಳಗೊಳಗೆ ನಡುಗುತ್ತಾ, ಸಾಕಷ್ಟು ನೋವನ್ನು ಅನುಭವಿಸುತ್ತಾ ಅವರು ಕುಳಿತುಕೊಂಡಿದ್ದರು. ಅವರ ಪಕ್ಕದಲ್ಲಿಯೇ ಅವರ ಹೆಂಡತಿ, ತಾಯಿ ಮತ್ತು ಸಹೋದರ ಕೂಡ ಇದ್ದರು. ಹೊರಗೆ ತಡವಾಗಿಯಾದರೂ ಕಿರಿಕಿರಿಯುಂಟು ಮಾಡುತ್ತಾ ಕೊನೆಗೂ ಜಡಿಮಳೆ ಸುರಿಯುತ್ತಿತ್ತು.
ಜುಲೈ 2, 2023ರ ಸಂಜೆ, ಲೋಹರ್-ಗಡಿ (ಗಡಿ ಲೋಹರ್ ಎಂದೂ ಕರೆಯಲ್ಪಡುತ್ತದೆ ಮತ್ತು ರಾಜ್ಯದಲ್ಲಿ ಇತರ ಹಿಂದುಳಿದ ಜಾತಿಯಡಿ ಪಟ್ಟಿ ಮಾಡಲಾಗಿದೆ) ಸಮುದಾಯಕ್ಕೆ ಸೇರಿದ ಭೂರಹಿತ ಕಾರ್ಮಿಕ ಸುಧೀರ್ ಅವರು ಕೆಲಸ ಮಾಡುತ್ತಿದ್ದ ಜಮೀನಿನಲ್ಲಿ ಎದುರಾದ ಭಾರಿ ಮತ್ತು ಕ್ರೂರ ಕಾಡುಹಂದಿಯ ದಾಳಿಯಿಂದ ಬದುಕುಳಿದರು. ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿರುವ 30 ವರ್ಷದ ತೆಳ್ಳಗಿನ ಆದರೆ ಬಲಶಾಲಿಯಾದ ಕೃಷಿ ಕಾರ್ಮಿಕ, ಅದೃಷ್ಟವಶಾತ್ ತನ್ನ ಮುಖ ಮತ್ತು ಎದೆಗೆ ಯಾವುದೇ ಹಾನಿಯಾಗಿಲ್ಲ ಎಂದು ಹೇಳುತ್ತಾರೆ.
ಜುಲೈ 8ರ ಸಂಜೆ ಚಂದ್ರಾಪುರ ಜಿಲ್ಲೆಯ ಸಾವೊಲಿ ತೆಹಸಿಲ್ನಲ್ಲಿರುವ ಅರಣ್ಯದ ಪಕ್ಕದಲ್ಲಿರುವ, ಅಷ್ಟೇನು ಆಸಕ್ತಿದಾಯಕವಲ್ಲದ ಅವರ ಗ್ರಾಮವಾದ ಕವಾತಿಯಲ್ಲಿ ಪರಿ ಅವರನ್ನು ಭೇಟಿಮಾಡಿತ್ತು. ಅವರು ಆಗಷ್ಟೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಬಂದಿದ್ದರು.
ಜಮೀನಿನಲ್ಲಿ ಟ್ರಾಕ್ಟರ್ ಓಡಿಸುವ ಸಹ ಕಾರ್ಮಿಕನೊಬ್ಬ ಇವರ ಬೊಬ್ಬೆ ಕೇಳಿ ಸಹಾಯಕ್ಕಾಗಿ ಓಡಿ ಬಂದು, ತನ್ನ ಸುರಕ್ಷತೆಯನ್ನೂ ಮರೆತು ಹಂದಿಯ ಮೇಲೆ ಕಲ್ಲುಗಳನ್ನು ಎಸೆದದ್ದನ್ನು ಅವರು ನೆನಪಿಸಿಕೊಳ್ಳುತ್ತಾರೆ.
ಬಹುಶಃ ಅದು ಹೆಣ್ಣು ಹಂದಿಯಾಗಿರಬೇಕು, ಸುಧೀರ್ ಬಿದ್ದಾಗ ಅದು ತನ್ನ ಕೋರೆಗಳಿಂದ ಅವರ ಮೇಲೆ ದಾಳಿ ಮಾಡಿತ್ತು. ಅವರ ಕಣ್ಣುಗಳು ಭಯಭೀತಗೊಂಡು ಮೋಡ ಕವಿದ ಆಕಾಶದತ್ತ ನೋಡಿದ್ದವು. "ಅದು ಹಿಂದೆ ಹೆಜ್ಜೆಗಳನ್ನಿಟ್ಟು ನನ್ನ ಮೇಲೆರಗಿತು. ನಂತರ ತನ್ನ ಉದ್ದನೆಯ ದಂತಗಳಿಂದ ತಿವಿಯಿತು,” ಎಂದು ಸುಧೀರ್ ಹೇಳುತ್ತಾರೆ. ಅವರ ಪತ್ನಿ ದರ್ಶನಾ ಅದನ್ನು ನಂಬಲು ಅಸಾಧ್ಯವೆಂಬಂತೆ ಗೊಣಗಿದರು. ಅವರಿಗೆ ತನ್ನ ಪತಿ ಸಾವನ್ನು ಮುಟ್ಟಿಬಂದದ್ದು ತಿಳಿದಿತ್ತು.
ಹಂದಿಯು ಅವರನ್ನು ತೀವ್ರವಾಗಿ ಗಾಯಗೊಳಿಸಿ ಪಕ್ಕದ ಪೊದೆಯೊಳಗೆ ನುಗ್ಗಿ ತಪ್ಪಿಸಿಕೊಂಡಿತು.


















