“ಆ ದಿನ ಮಧ್ಯಾಹ್ನ ಅದು ಇದ್ದಕ್ಕಿದ್ದ ಹಾಗೆ ಘಟಿಸಿತು!”
“ನನಗೆ ಗೊತ್ತು ಚಂಡಮಾರುತ ಬಹಳ ತೀಕ್ಷ್ಣವಾಗಿತ್ತು. ಅಲ್ಲವೇ?
“ಹಾಗೆ ನೋಡಿದರೆ ಮರವೂ ಸಾಕಷ್ಟು ಹಳೆಯದು. ಇದು ನಾವು ಈ ಸೊಸೈಟಿಗೆ ಬಂದಾಗಿನಿಂದ ಇಲ್ಲೇ ಇದೆ.”
“ಅದೇನೇ ಇದ್ರೂ ಆ ಒಂದು ಬದಿಗೆ ವಾಲಿಕೊಂಡಂತೆ ಇದ್ದ ಮರವನ್ನು ಕಂಡರೆ ನನಗೆ ಇಷ್ಟವಿರಲಿಲ್ಲ. ಅದರ ನೆರಳಿನಡಿಯಿದ್ದ ಅಬ್ದುಲ್ಲನ ಟಾಪ್ರಿ ಕೂಡಾ ದೊಡ್ಡ ರಗಳೆಯಾಗಿತ್ತು.ರಾತ್ರಿಯಾದ್ರೆ ಬಾವಲಿಗಳ ಸದ್ದು, ಹಗಲಿನಲ್ಲಿ ಮಕ್ಕಳ ಕೂಗಾಟ ಸಾಕಾಗಿ ಹೋಗಿತ್ತು ಆ ಮರದಿಂದ ನನಗೆ.”
“ಎಂತಹ ಗದ್ದಲ ಅಲ್ವ? ಉಫ್!”
ಪುರಸಭೆಯ ತುರ್ತು ಸಹಾಯ ಬಂದು ಅಪಾರ್ಟ್ಮೆಂಟ್ ಗೇಟಿಗೆ ಅಡ್ಡವಾಗಿ ಬಿದ್ದಿದ್ದ ಮರವನ್ನು ತೆರವುಗೊಳಿಸಿ 36 ಗಂಟೆಗಳು ಕಳೆದಿವೆ. ಆದರೆ ಜನರು ಅದರ ಬಗ್ಗೆ ಮಾತನಾಡುವುದನ್ನು ನಿಲ್ಲಿಸಿಲ್ಲ: ಎಷ್ಟು ವಿಚಿತ್ರ, ಎಷ್ಟು ಆಘಾತಕಾರಿ, ಎಷ್ಟು ಹಠಾತ್, ಓಹ್ ತುಂಬಾ ಭಯಾನಕ, ದೊಡ್ಡ ಅದೃಷ್ಟ ಹೀಗೆ ಹಲವು ಮಾತುಗಳು. ಕೆಲವೊಮ್ಮೆ ಎಲ್ಲರೂ ತನ್ನಂತೆಯೇ ಜಗತ್ತನ್ನು ನೋಡುತ್ತಾರೆಯೇ ಎಂದು ಅವಳು ಯೋಚಿಸುತ್ತಾಳೆ. ಆ ಮಧ್ಯಾಹ್ನ ಅವನು ಅಲ್ಲಿದ್ದನೆಂದು ಅವರಿಗೆ ತಿಳಿದಿತ್ತೇ? ಅವನು ಸಾಯುವುದನ್ನು ಯಾರಾದರೂ ನೋಡಿದ್ದಾರಾ?
ಅಬ್ದುಲ್ ಚಾಚಾ ಅವರ ಅಂಗಡಿಯ ಬಳಿ ಆಟೋದಿಂದ ಇಳಿದಾಗ ಮಳೆ ಇನ್ನೂ ಜೋರಾಗಿತ್ತು. ರಸ್ತೆಯಲ್ಲಿ ನೀರು ನಿಂತಿತ್ತು. ಆಟೋದವ ಮುಂದೆ ಹೋಗಲು ನಿರಾಕರಿಸಿದ. ಚಾಚಾ ಅವಳನ್ನು ಗುರುತಿಸಿ, ಛತ್ರಿಯೊಂದಿಗೆ ಓಡಿ ಬಂದು ಒಂದು ಮಾತನ್ನೂ ಆಡದೆ ಅದನ್ನು ಅವಳಿಗೆ ಹಸ್ತಾಂತರಿಸಿದನು. ಅವನು ತಲೆಯಾಡಿಸಿದನು. ಅವಳು ಅದನ್ನು ಅರ್ಥಮಾಡಿಕೊಂಡಳು, ಮುಗುಳ್ನಗೆಯೊಂದಿಗೆ ಅದನ್ನು ಸ್ವೀಕರಿಸಿದಳು, ಹಿಂತಿರುಗಿ ತಲೆಯಾಡಿಸಿದಳು ಮತ್ತು ಜಲಾವೃತವಾದ ರಸ್ತೆಯನ್ನು ದಾಟಿ ಸ್ವಲ್ಪ ದೂರದಲ್ಲಿ ಅಪಾರ್ಟ್ಮೆಂಟ್ ತಲುಪಲು ಪ್ರಾರಂಭಿಸಿದಳು. ಹವಾಮಾನವು ಬದಲಾಗುತ್ತಿದೆ ಎನ್ನುವುದರ ಕುರಿತು ಅವಳು ಒಂದು ನಿಮಿಷವೂ ಯೋಚಿಸಲಿಲ್ಲ.
ಒಂದು ಗಂಟೆಯ ನಂತರ ದೊಡ್ಡ ಸದ್ದನ್ನು ಕೇಳಿ ಅವಳು ಕಿಟಕಿಯ ಬಳಿಗೆ ಧಾವಿಸಿದಾಗ ಅವಳಿಗೆ ಯಾವುದೋ ಹೊಸ ಕಾಡು ಮುಖ್ಯ ರಸ್ತೆಗೆ ಧಾವಿಸಿದಂತೆ ಭಾಸವಾಯಿತು. ಅವಳು ಎಲ್ಲವನ್ನೂ ಗಮನಿಸಲು ಸ್ವಲ್ಪ ಸಮಯ ಹಿಡಿಯಿತು, ದೂರದಲ್ಲಿದ್ದ ಹಳೆಯ ಮರ ಈಗ ಬಿದ್ದಿದೆ. ಮತ್ತು ಮರದ ಸಂಧಿಯಿಂದ ಬಿಳಿ ಪಾರಿವಾಳದಂತೆ ಅವರ ತಲೆ ಬುರುಡೆ ಇಣುಕಿ ನೋಡುತ್ತಿತ್ತು.



