ಕಲಿದಾಸ್ಪುರ್ ಹಳ್ಳಿಯ ನಿವಾಸಿಯಾದ ಅಮಿನ ಬೀಬಿ ಮೇ ತಿಂಗಳ ಅಂತ್ಯದಲ್ಲಿ ,“ಈಗ ಚಂಡಮಾರುತವು ನಿಂತಿದ್ದು, ನಮಗೆ ಇಲ್ಲಿಂದ ತೆರಳುವಂತೆ ಸೂಚಿಸಲಾಗಿದೆ. ಆದರೆ ನಾವು ಹೋಗುವುದಾದರೂ ಎಲ್ಲಿಗೆ?” ಎಂದು ನನ್ನನ್ನು ಕೇಳಿದ್ದರು.
ಪಶ್ಚಿಮ ಬಂಗಾಳದ ದಕ್ಷಿಣದ 24 ಪರಗಣಗ ಜಿಲ್ಲೆಯಲ್ಲಿನ ಅಮೀನ ಅವರ ಹಳ್ಳಿಯಿಂದ 150 ಕಿ.ಮೀ. ದೂರದಲ್ಲಿ ಅಂಫನ್ ಚಂಡಮಾರುತವು ಭೂ ಕುಸಿತವನ್ನುಂಟುಮಾಡಿದ ಒಂದು ದಿನದ ಮೊದಲು ಸ್ಥಳೀಯ ಪ್ರಾಧಿಕಾರದವರು ಅನೇಕ ಹಳ್ಳಿಗಳಲ್ಲಿನ ಪರಿವಾರಗಳನ್ನು ತೆರವುಗೊಳಿಸಿ, ಪರಿಹಾರ ಶಿಬಿರಗಳಲ್ಲಿ ಅವರನ್ನು ನೆಲೆಗೊಳಿಸಿತು. ಅಮಿನ ಹಾಗೂ ಆಕೆಯ ಪರಿವಾರದವರನ್ನು ಈ ವರ್ಷದ ಮೇ 19ರಂದು ಪಕ್ಕದ ಹಳ್ಳಿಯಲ್ಲಿನ ತಾತ್ಕಾಲಿಕ ಕೊಠಡಿಗಳಿಗೆ ರವಾನಿಸಲಾಯಿತು.
ಸುಂದರ್ಬನ್ನಲ್ಲಿನ ಗೊಸಬ ವಿಭಾಗದಲ್ಲಿ ಸುಮಾರು 5,800 ಜನರು ವಾಸವಾಗಿರುವ ಹಳ್ಳಿಯೊಂದರಲ್ಲಿನ ಅಮೀನ ಅವರ ಮಣ್ಣಿನ ಗುಡಿಸಲು, ಚಂಡಮಾರುತದಲ್ಲಿ ಕೊಚ್ಚಿಕೊಂಡು ಹೋಯಿತು. ಆಕೆಯ ವಸ್ತುಗಳೆಲ್ಲವೂ ನಾಶವಾದವು. 48 ವರ್ಷದ ಅಮಿನ, ಆಕೆಯ ಪತಿ 56 ವರ್ಷದ ಮೊಹಮ್ಮದ್ ಮೊಲ್ಲ ಮತ್ತು 2ರಿಂದ ಹದಿನಾರು ವರ್ಷದ ಅವರ ಆರು ಮಕ್ಕಳು ಸುರಕ್ಷಿತವಾಗಿದ್ದರು.
ಮೊಹಮ್ಮದ್ ಮೊಲ್ಲ ಚಂಡಮಾರುತಕ್ಕೂ ಮೊದಲು ಎರಡು ವಾರಗಳ ಹಿಂದೆ ಹಳ್ಳಿಗೆ ಹಿಂದಿರುಗಿದ್ದರು. ಮಹಾರಾಷ್ಟ್ರದ ಪುಣೆಯ ಅಂಗಡಿಸಾಲಿನಲ್ಲಿ ಇವರು ಸ್ವಚ್ಛತಾ ಕಾರ್ಮಿಕರಾಗಿ ದುಡಿಯುತ್ತಿದ್ದು, ಮಾಹೆಯಾನ 100,000 ರೂ.ಗಳನ್ನು ಗಳಿಸುತ್ತಿದ್ದರು. ಈ ಬಾರಿ, ಅವರು ಇಲ್ಲಿಯೇ ಉಳಿದು, ಹತ್ತಿರದ ಮೊಲ್ಲ ಖಲಿ ಬಜಾ಼ರಿನಲ್ಲಿ ಚಹಾದ ಅಂಗಡಿಯೊಂದನ್ನು ತೆರೆಯುವ ಯೋಜನೆಯಲ್ಲಿದ್ದರು.
ಮನೆಗೆಲಸಗಳನ್ನು ಮುಗಿಸಿದ ತರುವಾಯ ಹತ್ತಿರದ ಗೊಮೊರ್ ನದಿಗೆ ತೆರಳಿ, ಏಡಿ ಹಾಗೂ ಮೀನುಗಳನ್ನು ಹಿಡಿದು ತರುತ್ತಿದ್ದ ಅಮೀನ ಕುಟುಂಬದ ಸಂಪಾದನೆಗೆ ಕೈಜೋಡಿಸುತ್ತಿದ್ದರು. ಮಾರುಕಟ್ಟೆಯಲ್ಲಿ ಅವನ್ನು ಮಾರುತ್ತಿದ್ದರಾದರೂ “ಅದರಿಂದ ದಿನಕ್ಕೆ 100 ರೂ.ಗಳಷ್ಟು ಸಂಪಾದನೆಯೂ ಗಿಟ್ಟುವುದಿಲ್ಲ” ಎಂದು ಅವರು ನನಗೆ ತಿಳಿಸಿದ್ದರು.
2018ರಲ್ಲಿ ಇವರ ಹಿರಿಯ ಮಗ ರಖ್ವಿಬ್ ಅಲಿ, ತನ್ನ ೧೪ನೇ ವಯಸ್ಸಿನಲ್ಲಿ ಶಾಲೆಯನ್ನು ತೊರೆದ. “ಅಬ್ಬ ಮನೆಗೆ ಕಳುಹಿಸುವ ದುಡ್ಡು ನಮ್ಮ ಜೀವನೋಪಾಯಕ್ಕೆ ಸಾಲುವುದಿಲ್ಲ. ಹೀಗಾಗಿ ನಾನು ಕೆಲಸಕ್ಕೆ ತೆರಳಿದೆ” ಎನ್ನುತ್ತಾನೆ ಆತ. ಕೊಲ್ಕತ್ತದಲ್ಲಿನ ಹೊಲಿಗೆ ಅಂಗಡಿಯಲ್ಲಿ ತಿಂಗಳಿಗೆ 5,000 ರೂ.ಗಳನ್ನು ಸಂಪಾದಿಸುವ ಈತ, ಕೋವಿಡ್-19 ಲಾಕ್ಡೌನ್ ಅವಧಿಯಲ್ಲಿ ಅಂಫನ್ ಚಂಡಮಾರುತವು ಅಪ್ಪಳಿಸಿದಾಗ ಮನೆಗೆ ವಾಪಸ್ಸಾಗಿದ್ದ.
ಈ ಪರಿವಾರದ ಹುಲ್ಲುಮಾಡಿನ ಮಣ್ಣಿನ ಮನೆಯು ಗೊಮೊರ್ ನದಿಯ ದಡದಲ್ಲಿದೆ. ಸಿದ್ರ್ (2007), ಐಲ (2009) ಮತ್ತು ಬುಲ್ಬುಲ್ (2019) ಚಂಡಮಾರುತಗಳು ಅಪ್ಪಳಿಸಿದಾಗಲೆಲ್ಲ, ನದಿಯ ಹರಿವು ಇವರ ಮನೆಗೆ ನಿಕಟವಾಗುತ್ತಿತ್ತಲ್ಲದೆ, ಕೆಲವು ತರಕಾರಿಗಳೊಂದಿಗೆ ವರ್ಷಕ್ಕೊಮ್ಮೆ ಭತ್ತವನ್ನು ಬೆಳೆಯುತ್ತಿದ್ದ ಇವರ ಮೂರು ಬಿಘ (ಒಂದು ಎಕರೆ) ಭೂಮಿಯೆಲ್ಲವನ್ನು ನಿಧಾನವಾಗಿ ಆಪೋಶನ ತೆಗೆದುಕೊಂಡಿತು.














