ಇದು ಗೋಧಿ ಬೆಳೆಗೆ ನೀರು ಕೊಡಬೇಕಾದ ಸಮಯ ಮತ್ತು ಸಬರನ್ ಸಿಂಗ್ ಈ ಅಗತ್ಯ ಸಮಯದಲ್ಲಿ (ಹೊಲಗಳಿಗೆ ನೀರಾವರಿ ಮಾಡದೆ) ತನ್ನ ಹೊಲದಿಂದ ದೂರವಿರಲು ಸಾಧ್ಯವಿಲ್ಲ. ಈ ಕಾರಣಕ್ಕಾಗಿ ಅವರು ಡಿಸೆಂಬರ್ ಮೊದಲ ವಾರದಲ್ಲಿ ಹರಿಯಾಣ-ದೆಹಲಿಯ ಸಿಂಘುವಿನಿಂದ ಪಂಜಾಬಿನಲ್ಲಿರುವ ತಮ್ಮ ಊರಿಗೆ ಮರಳಿದರು.
ಆದರೆ ಅವರು ಪ್ರತಿಭಟನಾ ಸ್ಥಳವನ್ನು ಬಿಟ್ಟು ಹೋಗುತ್ತಿರಲಿಲ್ಲ, ಅಲ್ಲಿ ಅವರು ನವೆಂಬರ್ 26ರಿಂದ ಸ್ಥಿರವಾಗಿ ತಂಗಿದ್ದಾರೆ. ಕೆಲವು ದಿನಗಳ ನಂತರ, ಅವರು 250 ಕಿಲೋಮೀಟರ್ ದೂರದಲ್ಲಿರುವ ಖಾಂತ್ ಗ್ರಾಮದಲ್ಲಿರುವ ತಮ್ಮ 12 ಎಕರೆ ಜಮೀನಿನಿಂದ ಸಿಂಘುವಿಗೆ ಹಿಂತಿರುಗಿದರು. "ನಾನು ಮಾತ್ರ ಈ ರೀತಿ ಮಾಡುತ್ತಿಲ್ಲ" ಎಂದು 70 ವರ್ಷದ ರೈತ ಹೇಳುತ್ತಾರೆ. "ಇಲ್ಲಿ ಅನೇಕ ಜನರು ತಮ್ಮ ಹಳ್ಳಿಗಳು ಮತ್ತು ಪ್ರತಿಭಟನಾ ಸ್ಥಳಗಳ ನಡುವೆ ಓಡಾಡುತ್ತಿರುತ್ತಾರೆ."
ರಿಲೇ ವಿಧಾನವನ್ನು ಅಳವಡಿಸಿಕೊಳ್ಳಲು ರೈತರು ತೆಗೆದುಕೊಂಡ ನಿರ್ಧಾರವು ಸಿಂಘುವಿನಲ್ಲಿನ ರೈತರ ಸಂಖ್ಯೆಯನ್ನು ಬಲವಾಗಿರಿಸಿದೆ, ಈ ರೀತಿಯಾಗಿ ಅವರು ತಮ್ಮ ಬೆಳೆಗಳನ್ನು ನಿರ್ಲಕ್ಷಿಸದಂತೆ ನೋಡಿಕೊಂಡಿದ್ದಾರೆ.
"ನಾವು ಗೋಧಿ ಕೃಷಿ ಮಾಡಲು ಪ್ರಾರಂಭಿಸುವ ಸಮಯ ಇದು" ಎಂದು ನವೆಂಬರ್-ಡಿಸೆಂಬರ್ ಅವಧಿಯನ್ನು ಉಲ್ಲೇಖಿಸಿ ಸಬರನ್ ಹೇಳುತ್ತಾರೆ. "ನಾನು ಸಿಂಘುವಿನಿಂದ ದೂರವಿದ್ದಾಗ, ಹಳ್ಳಿಯ ನನ್ನ ಕೆಲವು ಸ್ನೇಹಿತರು ನನ್ನ ಸ್ಥಾನವನ್ನು ತುಂಬಿದರು."
ಹಲವಾರು ಪ್ರತಿಭಟನಾಕಾರರು ಇದನ್ನು ಅನುಸರಿಸುತ್ತಿದ್ದಾರೆ. "ನಮ್ಮಲ್ಲಿ ಹಲವರು ನಾಲ್ಕು ಚಕ್ರಗಳ ವಾಹನವನ್ನು ಹೊಂದಿದ್ದಾರೆ" ಎಂದು ಮಾಜಿ ಸೈನಿಕರೂ ಆಗಿರುವ ಸಬರನ್ ಹೇಳುತ್ತಾರೆ. “ಇವು ಇಲ್ಲಿಂದ ನಮ್ಮ ಹಳ್ಳಿಗಳಿಗೆ ಹೋಗಿ ಬರುತ್ತಲೇ ಇರುತ್ತವೆ. ಆದರೆ ಕಾರುಗಳು ಎಂದಿಗೂ ಖಾಲಿ ಬರುವುದಿಲ್ಲ. ನಾಲ್ಕು ಜನರನ್ನು ಹಳ್ಳಿಯಲ್ಲಿ ಇಳಿಸಲಾಗಿದ್ದರೆ, ಇತರ ನಾಲ್ವರು ಅದೇ ಕಾರಿನಲ್ಲಿ ಹಿಂತಿರುಗುತ್ತಾರೆ.”






