"ನಾನು ಯಾವುದೇ ಕೃಷಿಭೂಮಿಯನ್ನು ಹೊಂದಿಲ್ಲ, ನನ್ನ ಪೂರ್ವಜರೂ ಹೊಂದಿರಲಿಲ್ಲ" ಎಂದು ಕಮಲ್ಜಿತ್ ಕೌರ್ ಹೇಳುತ್ತಾರೆ. "ಆದರೂ, ನಮ್ಮ ರೈತರಿಗೆ ನನ್ನ ಸಣ್ಣ ರೀತಿಯಲ್ಲಿ ಸಹಾಯ ಮಾಡಲು ಇಲ್ಲಿಗೆ ಬಂದಿದ್ದೇನೆ, ಏಕೆಂದರೆ ನಾನು ಮಾಡದೆ ಹೋದರೆ, ನನ್ನ ಮಕ್ಕಳ ತಟ್ಟೆಯಲ್ಲಿ ಏನಾದರೂ ಆಹಾರ ಕಾಣಿಸಲು ನಾನು ಕಾರ್ಪೊರೇಟ್ ದುರಾಶೆಯನ್ನು ಎದುರಿಸಬೇಕಾಗುತ್ತದೆನ್ನುವ ಭಯವಿದೆ"
ಕಮಲ್ಜಿತ್ (35) ಪಂಜಾಬ್ನ ಲುಧಿಯಾನ ನಗರದ ಶಿಕ್ಷಕಿಯಾಗಿದ್ದು, ಕೆಲವು ಸ್ನೇಹಿತರ ಜೊತೆಗೂಡಿ ಸಿಂಘುವಿನಲ್ಲಿ ನೆರಳಿರುವ ಜಾಗದಲ್ಲಿ ಎರಡು ಹೊಲಿಗೆ ಯಂತ್ರಗಳನ್ನು ನಡೆಸುತ್ತಿದ್ದಾರೆ. ಅವರು ಪ್ರತಿಭಟನಾ ಸ್ಥಳಕ್ಕೆ ಸರದಿಯಂತೆ ಬರುತ್ತಾರೆ. ಒಮ್ಮೆ ಬಂದರೆ ಮೂರು ದಿನಗಳವರೆಗೆ ಇರುತ್ತಾರೆ, ಮತ್ತು ಪ್ರತಿಭಟನಾ ನಿರತ ರೈತರ ಅಂಗಿಯ ಹರಿದ ಗುಂಡಿಗಳನ್ನು ಸರಿಪಡಿಸುತ್ತಾರೆ ಅಥವಾ ಅವರ ಹರಿದ ಸಲ್ವಾರ್-ಕಮೀಜ್ ಅನ್ನು ಹೊಲಿಯುತ್ತಾರೆ. ಅವರ ಬಳಿ ಪ್ರತಿದಿನ ಸುಮಾರು 200 ಜನರು ಬರುತ್ತಾರೆ.
ಈ ರೀತಿಯ ಸೇವೆಗಳು ವಿವಿಧ ರೂಪಗಳಲ್ಲಿ ಮತ್ತು ಸಿಂಘುವಿನಲ್ಲಿ ಪ್ರತಿಭಟನೆಗೆ ಬೆಂಬಲವಾಗಿ ಅತ್ಯಂತ ಉದಾರವಾದ ರೀತಿಯಲ್ಲಿ ಲಭ್ಯವಿದೆ.
ಅಂತಹ ಸೇವೆಗಳನ್ನು ಒದಗಿಸುವವರಲ್ಲಿ ಇರ್ಷಾದ್ (ಪೂರ್ಣ ಹೆಸರು ಲಭ್ಯವಿಲ್ಲ) ಕೂಡ ಒಬ್ಬರು. ಸಿಂಘು ಗಡಿಯಿಂದ ನಾಲ್ಕು ಕಿಲೋಮೀಟರ್ ದೂರದಲ್ಲಿರುವ ಕುಂಡ್ಲಿ ಕೈಗಾರಿಕಾ ಪ್ರದೇಶದ ಟಿಡಿಐ ಮಾಲ್ನ ಹೊರಗಿನ ಕಿರಿದಾದ ಮೂಲೆಗಳಲ್ಲಿ, ಅವರು ಸಿಖ್ ಪ್ರತಿಭಟನಾಕಾರರ ತಲೆಗೆ ಮಸಾಜ್ ಮಾಡುತ್ತಿದ್ದಾರೆ. ಇನ್ನೂ ಅನೇಕರು ತಮ್ಮ ಸರದಿಗಾಗಿ ಕಾಯುತ್ತಿದ್ದಾರೆ. ಕುರುಕ್ಷೇತ್ರದ ನಿವಾಸಿಯಾಗಿರುವ ಇರ್ಷಾದ್ ಕ್ಷೌರಿಕರಾಗಿದ್ದು, ಬಿರದಾರಿ - ಭ್ರಾತೃತ್ವದ ಭಾವದಿಂದ ಇಲ್ಲಿಗೆ ಬಂದಿದ್ದೇನೆ ಎಂದು ಹೇಳುತ್ತಾರೆ.
ಇದೇ ಮಾರ್ಗದಲ್ಲಿ, ತನ್ನ ಮಿನಿ ಟ್ರಕ್ನ ಹೊರಗೆ ಕುಳಿತ ಸರ್ದಾರ್ ಗುರ್ಮಿಕ್ ಸಿಂಗ್ ಅವರ ಬಳಿ ಮಸಾಜ್ ಮಾಡಿಸಿಕೊಂಡು ತಮ್ಮ ಸ್ನಾಯುಗಳನ್ನು ಸಡಿಲಗೊಳಿಸಿಕೊಳ್ಳಲು ಅನೇಕರು ಒಗ್ಗೂಡಿದ್ದಾರೆ. "ಅವರು ಇದೀಗ ಅನೇಕ ರೀತಿಯ ಕಷ್ಟಗಳನ್ನು ಎದುರಿಸುತ್ತಿದ್ದಾರೆ....." ಈ ವಿಷಯವೇ ಅವರನ್ನು ಇಲ್ಲಿಗೆ ಕರೆತಂದಿದ್ದೆಂದು ಅವರು ಹೇಳುತ್ತಾರೆ.
ಚಂಡೀಗಢದ ವೈದ್ಯ ಸುರಿಂದರ್ ಕುಮಾರ್ ಅವರು ಸಿಂಘುವಿನಲ್ಲಿ ಇತರ ವೈದ್ಯರೊಂದಿಗೆ ವೈದ್ಯಕೀಯ ಶಿಬಿರದಲ್ಲಿ ಸೇವೆಯನ್ನು ಒದಗಿಸುತ್ತಿದ್ದಾರೆ. ಇದು ಪ್ರತಿಭಟನಾ ಸ್ಥಳದಲ್ಲಿನ ಹಲವಾರು ವೈದ್ಯಕೀಯ ಶಿಬಿರಗಳಲ್ಲಿ ಒಂದಾಗಿದೆ - ಅವುಗಳಲ್ಲಿ ಕೆಲವು ಕೋಲ್ಕತಾ ಅಥವಾ ಹೈದರಾಬಾದ್ನಂತಹ ದೂರದ ಪ್ರದೇಶಗಳ ವೈದ್ಯರಿಂದ ನಡೆಸಲ್ಪಡುತ್ತಿವೆ. "ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಶೀತವನ್ನು ಎದುರಿಸುತ್ತಿರುವ ವಯಸ್ಸಾದವರಿಗೆ ಸೇವೆ ಸಲ್ಲಿಸುವ ಮೂಲಕ, ನಾವು ಪದವಿ ಪಡೆಯುವಾಗ ತೆಗೆದುಕೊಂಡ ಪ್ರತಿಜ್ಞೆಯನ್ನು ಅನುಸರಿಸಲು ಪ್ರಯತ್ನಿಸುತ್ತಿದ್ದೇವೆ. ಅವರಲ್ಲಿ ಹಲವರು ತೆರೆದ ರಸ್ತೆಗಳಲ್ಲಿ ವಾಸಿಸುತ್ತಿದ್ದಾರೆ" ಎಂದು ಸುರಿಂದರ್ ಹೇಳುತ್ತಾರೆ.

















