ಮುಂಗಾರಿನ ಅಬ್ಬರ ಕಡಿಮೆಯಾಗತೊಡಗಿತ್ತು. ಬಿಹಾರದ ಬರಗಾಂವ್ ಖುರ್ದ್ ಗ್ರಾಮದ ಮಹಿಳೆಯರು ತಮ್ಮ ಕಚ್ಛಾ ಮನೆಗಳ ಹೊರ ಗೋಡೆಗಳನ್ನು ಒಪ್ಪವಾಗಿಸಲು ಹೊಲಗಳಿಂದ ಮಣ್ಣನ್ನು ತರುತ್ತಿದ್ದರು, ಅವರು ಆಗಾಗ್ಗೆ ಇದನ್ನು ಮಾಡುತ್ತಿರುತ್ತಾರೆ, ವಿಶೇಷವಾಗಿ ಇದೊಂದು ಹಬ್ಬಗಳಿಗೆ ಮೊದಲು ಮನೆಯನ್ನು ಬಲಪಡಿಸುವ ಮತ್ತು ಸುಂದರಗೊಳಿಸುವ ಕಾರ್ಯ.
22 ವರ್ಷದ ಲೀಲಾವತಿ ದೇವಿ ಇತರ ಮಹಿಳೆಯರೊಂದಿಗೆ ಮಣ್ಣು ಸಂಗ್ರಹಿಸಲು ಹೊರಬರಲು ಬಯಸಿದ್ದರು. ಆದರೆ ಅವರ ಮೂರು ತಿಂಗಳ ಪ್ರಾಯದ ಗಂಡು ಮಗು ಗೋಳಾಡುತ್ತಾ ನಿದ್ರೆಗೆ ಜಾರಲು ನಿರಾಕರಿಸುತ್ತಿತ್ತು. ಅವರ ಪತಿ 24 ವರ್ಷದ ಅಜಯ್ ಒರಾನ್ ಅವರು ಅಲ್ಲಿನ ಪ್ರದೇಶದಲ್ಲಿ ತಾನು ನಡೆಸುತ್ತಿರುವ ಕಿರಾಣಿ ಅಂಗಡಿಯಲ್ಲಿದ್ದರು. ಮಗು ಲೀಲಾವತಿಯವರ ತೋಳುಗಳಲ್ಲಿ ಮಲಗಿತ್ತು ಮತ್ತು ಅವರು ಪ್ರತಿ ಕೆಲವು ನಿಮಿಷಗಳಿಗೊಮ್ಮೆ, ತನ್ನ ಅಂಗೈಯನ್ನು ಅವನ ಹಣೆಯ ಮೇಲಿಟ್ಟು ಜ್ವರವನ್ನು ಪರೀಕ್ಷಿಸುತ್ತಿದ್ದರು. "ಅವನು ಆರಾಮಿದ್ದಾನೆ, ಕನಿಷ್ಠ ನನಗೆ ಹಾಗನ್ನಿಸುತ್ತದೆ," ಅವರು ಹೇಳಿದರು.
2018ರಲ್ಲಿ ಲೀಲಾವತಿಯವರ 14 ತಿಂಗಳ ಹೆಣ್ಣು ಮಗು ಜ್ವರ ಬಂದು ಕೊನೆಯುಸಿರೆಳೆದಿತ್ತು. "ಅದು ಕೇವಲ ಎರಡು ದಿನಗಳ ಜ್ವರವಾಗಿತ್ತು, ಹೆಚ್ಚಿರಲಿಲ್ಲ" ಎಂದು ಲೀಲಾವತಿ ಹೇಳಿದರು. ಅದರಾಚೆಗೆ, ಸಾವಿಗೆ ಕಾರಣವೇನೆಂದು ಪೋಷಕರಿಗೆ ತಿಳಿದಿಲ್ಲ. ಆಸ್ಪತ್ರೆಯ ದಾಖಲೆ, ಔಷಧಿ ಚೀಟಿ, ಔಷಧಿಗಳಾಗಲಿ ಅವರ ಬಳಿ ಇರಲಿಲ್ಲ. ಇನ್ನೂ ಕೆಲವು ದಿನಗಳವರೆಗೆ ಜ್ವರ ಕಡಿಮೆಯಾಗದಿದ್ದರೆ, ತಮ್ಮ ಗ್ರಾಮದಿಂದ ಒಂಬತ್ತು ಕಿಲೋಮೀಟರ್ ದೂರದಲ್ಲಿರುವ ಕೈಮೂರ್ ಜಿಲ್ಲೆಯ ಅಧೌರಾ ಬ್ಲಾಕ್ನಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ (ಪಿಎಚ್ ಸಿ) ಕರೆದೊಯ್ಯಲು ದಂಪತಿಗಳು ಯೋಜಿಸಿದ್ದರು. ಆದರೆ ಅವರು ಹಾಗೆ ಮಾಡಲು ಅವಕಾಶವೇ ಸಿಗಲಿಲ್ಲ.
ಕೈಮೂರ್ ವನ್ಯಜೀವಿ ಅಭಯಾರಣ್ಯದ ಅರಣ್ಯ ಪ್ರದೇಶಕ್ಕೆ ಹತ್ತಿರವಿರುವ ಪಿಎಚ್ಸಿಗೆ ಗಡಿ ಗೋಡೆಯಿಲ್ಲ. ಬರಗಾಂವ್ ಖುರ್ದ್ ಗ್ರಾಮ ಮತ್ತು ಪಕ್ಕದ ಬರ್ಗಾಂವ್ ಕಲಾನ್ ನಿವಾಸಿಗಳು ಕಾಡು ಪ್ರಾಣಿಗಳ ಕಥೆಗಳನ್ನು ವಿವರಿಸುತ್ತಾರೆ – ಕರಡಿಗಳು (sloth bears), ಚಿರತೆಗಳು ಮತ್ತು ನೀಲ್ ಗಾಯ್ – ಕಟ್ಟಡದ ಬಳಿ ಅಲೆದಾಡುತ್ತಾ (ಎರಡು ಗ್ರಾಮಕ್ಕೆ ಸೇರಿ ಒಂದು ಪಿಎಚ್ಸಿ ಇದೆ), ರೋಗಿಗಳು ಮತ್ತು ಸಂಬಂಧಿಕರನ್ನು ಹೆದರಿಸುತ್ತವೆ, ಮತ್ತು ಇಲ್ಲಿ ಆರೋಗ್ಯ ಕಾರ್ಯಕರ್ತರು ಸಹ ಸೇವೆ ಮಾಡಲು ಆಸಕ್ತಿಯಿಲ್ಲದವರಾಗಿದ್ದಾರೆ.
"ಒಂದು ಉಪಕೇಂದ್ರವೂ ಇದೆ (ಬರಗಾಂವ್ ಖುರ್ದ್ ನಲ್ಲಿ), ಆದರೆ ಅದರ ಕಟ್ಟಡವು ಈಗ ಅನಾಥವಾಗಿದೆ. ಇದು ಆಡುಗಳು ಮತ್ತು ಇತರ ಪ್ರಾಣಿಗಳಿಗೆ ವಿಶ್ರಾಂತಿ ಧಾಮವಾಗಿ ಮಾರ್ಪಟ್ಟಿದೆ" ಎಂದು ಮಾನ್ಯತೆ ಪಡೆದ ಸಾಮಾಜಿಕ ಆರೋಗ್ಯ ಕಾರ್ಯಕರ್ತೆ (ಆಶಾ) ಫುಲ್ವಾಸಿ ದೇವಿ ಹೇಳುತ್ತಾರೆ, ಅವರು 2014ರಿಂದ ಈ ಕೆಲಸದಲ್ಲಿದ್ದಾರೆ - ಅವರದೇ ಮಾನದಂಡಗಳ ಮೂಲಕ, ಸೀಮಿತ ಯಶಸ್ಸಿನೊಂದಿಗೆ.






