ಮೊಹಮ್ಮದ್ ಶಮೀಮ್ ಅವರ ಕುಟುಂಬದಲ್ಲಿ ಮೂರು ಜನರಿದ್ದರೂ, ವೇಟಿಂಗ್ ಲಿಸ್ಟಿನಲ್ಲಿರುವ ತಮ್ಮ ಟಿಕೆಟ್ನಲ್ಲಿ ಒಂದನ್ನಾದರೂ ಕನ್ಫರ್ಮ್ ಮಾಡಿಸಲು ರೈಲ್ವೆ ಟಿಕೆಟ್ ಮಾಡುವ ಏಜೆಂಟ್ ಬಳಿ ವಿನಂತಿಸುತ್ತಿದ್ದರು. ಉತ್ತರ ಪ್ರದೇಶದಲ್ಲಿರುವ ತನ್ನ ಊರನ್ನು ತಲುಪಲು ಪ್ರಯತ್ನಿಸುತ್ತಿರುವ ಶಮೀಮ್, "ನನ್ನ ಹೆಂಡತಿಗೆ ಸೀಟ್ ಕೊಡಿ" ಎಂದು ಒತ್ತಾಯ ಮಾಡುತ್ತಿದ್ದರು. "ನಾನು ಹೇಗಾದರೂ ಏರುತ್ತೇನೆ. ನಾನು ಯಾವುದೇ ಸ್ಥಿತಿಯಲ್ಲಿ ಪ್ರಯಾಣಿಸಬಹುದು. ಕಳೆದ ಬಾರಿಯಂತೆ ಪರಿಸ್ಥಿತಿ ಹದಗೆಡುವ ಮೊದಲು ನಾವು ನಮ್ಮ ಮನೆಗೆ ತಲುಪಲು ಬಯಸುತ್ತೇವೆ."
"ಕನ್ಫರ್ಮ್ ಆಗಿರುವ ಸೀಟ್ ಪಡೆಯಲು ಏಜೆಂಟ್ ಪ್ರತಿ ಟಿಕೆಟ್ಗೆ 1,600 ರೂ.ಗಳನ್ನು ಕೇಳುತ್ತಿದ್ದಾನೆ. ನಾನು ಅದನ್ನು 1,400 ರೂ.ಗೆ ಇಳಿಸಲು ಮಾತುಕತೆ ನಡೆಸಿದ್ದೇನೆ" ಎಂದು ಅವರು ಹೇಳಿದರು. "ನಮಗೆ ಒಂದು ಸೀಟು ಸಿಕ್ಕರೆ, ರೈಲು ಹತ್ತುತ್ತೇವೆ ಮತ್ತು ನಂತರ ಯಾವುದೇ ಪೆನಾಲ್ಟಿ ಅಥವಾ ಫೈನ್ ಹಾಕಿದರೆ ಅದನ್ನು ಕಟ್ಟುತ್ತೇವೆ." ಮುಂಬೈನಿಂದ ಉತ್ತರ ಪ್ರದೇಶಕ್ಕೆ ಅಗ್ಗದ ರೈಲು ಟಿಕೆಟ್ ಸಾಮಾನ್ಯವಾಗಿ 380-500 ರೂ.ಗಳಷ್ಟು ಇದೆ. ಯುಪಿಯಲ್ಲಿ, ಫೈಜಾಬಾದ್ ಜಿಲ್ಲೆಯ ಮಸೋಧಾ ಬ್ಲಾಕ್ನ ಅಬ್ಬೂ ಸರಾಯ್ ಗ್ರಾಮದಲ್ಲಿ, ಶಮೀಮ್ ಅವರ ಇಬ್ಬರು ಹಿರಿಯ ಸಹೋದರರು ಭೂ ಮಾಲೀಕತ್ವದ ಕುಟುಂಬಗಳಿಗೆ ಕೃಷಿ ಕಾರ್ಮಿಕರಾಗಿ ಕೆಲಸ ಮಾಡುತ್ತಾರೆ, ಇದು ಹಂಗಾಮಿ ಉದ್ಯೋಗವಾಗಿದೆ
22 ವರ್ಷದ ಶಮೀಮ್ ಮತ್ತು ಮುಂಬೈನ ಸಾವಿರಾರು ವಲಸೆ ಕಾರ್ಮಿಕರಿಗೆ, ಕೋವಿಡ್-19 ಹರಡುವಿಕೆಯನ್ನು ನಿಭಾಯಿಸಲು ಮಹಾರಾಷ್ಟ್ರ ಸರ್ಕಾರವು ಪರಿಚಯಿಸಿದ ಹೊಸ ನಿರ್ಬಂಧಗಳು ಮತ್ತೊಂದು ಸುತ್ತಿನ ಕಾರ್ಖಾನೆ ಮುಚ್ಚುವಿಕೆ, ಕೆಲಸದಿಂದ ತೆಗೆದುಹಾಕುವಿಕೆ ಮತ್ತು ನಿರ್ಮಾಣ ಸ್ಥಳಗಳಲ್ಲಿ ಕೆಲಸವನ್ನು ಸ್ಥಗಿತಗೊಳಿಸಲು ಪ್ರೇರೇಪಿಸುವುದರಿಂದ ಸುಮಾರು 10 ತಿಂಗಳ ಅವಧಿಯಲ್ಲಿ ಇದು ಎರಡನೇ ಮನೆ ಪ್ರಯಾಣವಾಗಿದೆ.
ಮುಂಬಯಿಯ ಪ್ರಮುಖ ರೈಲು ನಿಲ್ದಾಣಗಳು, ವಿಶೇಷವಾಗಿ ಬಾಂದ್ರಾ ಟರ್ಮಿನಸ್ ಮತ್ತು ಲೋಕಮಾನ್ಯ ತಿಲಕ್ ಟರ್ಮಿನಸ್, ಅಲ್ಲಿಂದ ಹಲವಾರು ರೈಲುಗಳು ಉತ್ತರ ಪ್ರದೇಶ ಮತ್ತು ಬಿಹಾರ ರಾಜ್ಯಗಳಿಗೆ ಹೊರಡುತ್ತವೆ, ಏಪ್ರಿಲ್ 11-12ರಿಂದ ವಲಸೆ ಕಾರ್ಮಿಕರು ಏಪ್ರಿಲ್ 14ರಂದು ರಾಜ್ಯದಲ್ಲಿ ಕೆಲಸ ಮತ್ತು ಚಲನೆಯ ಮೇಲೆ ಹೊಸ ನಿರ್ಬಂಧಗಳು ಪ್ರಾರಂಭವಾಗುವ ಮೊದಲು ಹೊರಡಲು ನಿರ್ಧರಿಸಿದ್ದರಿಂದ ಏಪ್ರಿಲ್ 11-12ರಿಂದ ಹೆಚ್ಚಿನ ಜನಸಂದಣಿಯನ್ನು ಕಂಡಿವೆ. ಹೆಚ್ಚಿನ ನಿರ್ಬಂಧಗಳಿಗೆ ಹೆದರಿ ಅನೇಕರು ಇನ್ನೂ ಹೊರಡಲು ಪ್ರಯತ್ನಿಸುತ್ತಿದ್ದಾರೆ.
ಶಿವಸೇನೆ ನೇತೃತ್ವದ ರಾಜ್ಯ ಸರ್ಕಾರವು ಕರ್ಫ್ಯೂ ಮತ್ತು ನಿರ್ಬಂಧಗಳನ್ನು ಮತ್ತೊಂದು 'ಲಾಕ್ಡೌನ್' ಎಂದು ಕರೆದಿಲ್ಲವಾದರೂ, ಶಮೀಮ್ ಈ ಪರಿಭಾಷೆಯನ್ನು ತಳ್ಳಿಹಾಕುತ್ತಾರೆ: "ನಮಗೆ ಇದು ಎರಡನೇ ಸುತ್ತಿನ ವೇತನ-ನಷ್ಟವಾಗಿದೆ. ಮತ್ತು ಅದು ಈಗಾಗಲೇ ನಮ್ಮ ಮೇಲೆ ಪರಿಣಾಮ ಬೀರಿಯಾಗಿದೆ."






