“ಕೊರೊನಾ ಬಂದಾಗಿಂದ ಕೊಚಿಯಾ (ಮಧ್ಯವರ್ತಿ) ನಮ್ಮ ಊರಿಗೆ ಬರೋದನ್ನ ನಿಲ್ಲಿಶ್ಯಾರಿ" ಎಂದು ಜಮುನಾ ಬಾಯಿ ಮಾಂಡವಿ ಹೇಳುತ್ತಾರೆ."ಅವ್ರು ಕೊನೆ ಬಾರಿಗೆ ಇಲ್ಲೀಗ ಬುಟ್ಟಿ ಖರೀದಿ ಮಾಡಾಕ ಬಂದ ಮೂರು ವಾರ ಆತ್ರಿ, ಹಂಗಾಗಿ ನಮಗ ಈಗ ಏನೂ ಮಾರಾಟ ಮಾಡಕ್ಕೂ ಸಾಧ್ಯವಾಗಲ್ರಿ ಮತ್ತ ನಮ್ಮ ಹತ್ರ ಖರೀದಿ ಮಾಡಲಿಕ್ಕೂ ದುಡ್ಡು ಇಲ್ರಿ" ಎಂದು ಹೇಳಿದರು.
ಜಮುನಾ ಬಾಯಿ, ನಾಲ್ಕು ಮಕ್ಕಳನ್ನು ಹೊಂದಿರುವ ವಿಧವೆಯಾಗಿದ್ದು, ಧಮ್ತರಿ ಜಿಲ್ಲೆಯ ನಾಗರಿ ಬ್ಲಾಕ್ನ ಕೌಹಾಬಹ್ರಾ ಗ್ರಾಮದ ನಿವಾಸಿ. ಸುಮಾರು 40 ವರ್ಷ ವಯಸ್ಸಿನ ಅವರು, ಕಮರ್ ಬುಡಕಟ್ಟಿನ ಆದಿವಾಸಿ ಸಮುದಾಯಕ್ಕೆ ಸೇರಿದ್ದಾರೆ, ಕೇಂದ್ರ ಗೃಹ ಸಚಿವಾಲಯವು ಛತ್ತೀಸ್ಗಡದಲ್ಲಿ ವಿಶೇಷ ದುರ್ಬಲ ಬುಡಕಟ್ಟು ಗುಂಪಿನಲ್ಲಿ (Particularly Vulnerable Tribal Group (PVTG) ) ಈ ಸಮುದಾಯವನ್ನು ಪಟ್ಟಿ ಮಾಡಿದೆ. ಹಳ್ಳಿಯ ಈ ಕ್ಲಸ್ಟರ್ನಲ್ಲಿ ಅವರಂತಹ 36 ಇತರ ಕಮರ್ ಕುಟುಂಬಗಳಿವೆ. ಅವರಂತೆಯೇ ಅವರೆಲ್ಲರೂ ಸುತ್ತಮುತ್ತಲಿನ ಕಾಡುಗಳಿಂದ ಬಿದಿರು ಸಂಗ್ರಹಿಸಿ ಬುಟ್ಟಿ ಹೆಣೆಯುತ್ತಾ ಜೀವನ ಸಾಗಿಸುತ್ತಿದ್ದಾರೆ.
ಅವರು ಹೇಳುತ್ತಿರುವ 'ಕೊಚಿಯಾ' ಜಮುನಾ ಬಾಯಿ ಮತ್ತು ಇತರ ಬುಟ್ಟಿ ನೇಕಾರರಿಗೆ ಬಹಳ ಮುಖ್ಯವಾಗಿದ್ದಾರೆ. ಅವರು ಮಧ್ಯವರ್ತಿಗಳು ಅಥವಾ ವ್ಯಾಪಾರಿಗಳು, ಪ್ರತಿ ವಾರವೂ ಬುಟ್ಟಿಗಳನ್ನು ಖರೀದಿಸಲು ಹಳ್ಳಿಗೆ ಭೇಟಿ ನೀಡುತ್ತಾರೆ, ನಂತರ ಅವರು ಪಟ್ಟಣದ ಮಾರುಕಟ್ಟೆಗಳಲ್ಲಿ ಮತ್ತು ಗ್ರಾಮೀಣ ಸಂತೆಗಳಲ್ಲಿ ಚಿಲ್ಲರೆ ಮಾರಾಟ ಮಾಡುತ್ತಾರೆ.
ಅವರು ಕೊನೆಯದಾಗಿ ಕೌಹಾಬಹ್ರಾದಲ್ಲಿ ಕಾಣಿಸಿಕೊಂಡು ಒಂದು ತಿಂಗಳಾಗುತ್ತಾ ಬಂತು-ಕೋವಿಡ್ -19 ಲಾಕ್ಡೌನ್ ಪ್ರಾರಂಭವಾದ ನಂತರ ಅವರು ಬರುವುದನ್ನು ನಿಲ್ಲಿಸಿದರು.
ಜಮುನಾಗೆ ನಾಲ್ಕು ಮಕ್ಕಳಿದ್ದಾರೆ- 12 ವರ್ಷದ ಲಾಲೇಶ್ವರಿ, 5ನೇ ತರಗತಿಯ ನಂತರ ಶಾಲೆಯನ್ನು ತೊರೆದರು, ತುಳೇಶ್ವರಿ, 8, ಲೀಲಾ, 6, ಮತ್ತು ಲಖ್ಮಿ, 4. ಅವರ ಪತಿ 40ರ ಹರೆಯದ ಸಿಯಾರಾಮ್ ನಾಲ್ಕು ವರ್ಷಗಳ ಹಿಂದೆ ಅತಿಸಾರದಿಂದ ಅವರು ಕೊನೆಯುಸಿರೆಳೆದಿದ್ದರಿಂದಾಗಿ ಜೀವ ಬದುಕಿನ ಈ ಹೋರಾಟದಲ್ಲಿ ಪತ್ನಿ ಮತ್ತು ಮಕ್ಕಳು ಅನಾಥರಾಗಿದ್ದಾರೆ. ಈ ಲಾಕ್ಡೌನ್ ಕೇವಲ ಅವರ ಬುಟ್ಟಿಗಳಿಂದ ಬರುವ ಆದಾಯದ ಮೇಲೆ ಮಾತ್ರವಲ್ಲ, ಇತರ ಮೂಲಗಳ ಮೇಲೂ ಪರಿಣಾಮ ಬೀರುತ್ತದೆ.
ಈಗ ಕಾಡಿನಲ್ಲಿ ಮಹುವಾ ಹೂವುಗಳ (ಇದರಿಂದ ಸ್ಥಳೀಯವಾಗಿ ಮದ್ಯವನ್ನು ತಯಾರಿಸಲಾಗುತ್ತದೆ) ಋತುಮಾನವಾಗಿರುವುದರಿಂದ, ಇದೊಂದು ರೀತಿ ಇಲ್ಲಿನ ಆದಿವಾಸಿಗಳಿಗೆ ಕಡಿಮೆ ಸಮಯದಲ್ಲಿ ಹೆಚ್ಚಿನ ಆದಾಯಗಳಿಸುವ ಮೂಲವಾಗಿದೆ.






