“ಇಲ್ಲಿ ನಡೆಯುತ್ತಿರುವ ಪ್ರತಿಭಟನೆಯಿಂದ ಕಂಪನಿಯ ಜನರು ಖಂಡಿತವಾಗಿಯೂ ಇರುಸುಮುರುಸುಗೊಂಡಿದ್ದಾರೆ. ಇದು ಸಾರಿಗೆಯ ವ್ಯವಸ್ಥೆ ಮೇಲೆ ಕೆಟ್ಟ ಪರಿಣಾಮ ಬೀರಿದೆ ಮತ್ತು ವ್ಯಾಪಾರ ಸರಿಯಾಗಿ ನಡೆಯುತ್ತಿಲ್ಲ” ಎಂದು ಕುಂಡ್ಲಿ ಕೈಗಾರಿಕಾ ಪ್ರದೇಶದ ಗೃಹೋಪಯೋಗಿ ಉಪಕರಣಗಳ ಕಾರ್ಖಾನೆಯ ಭದ್ರತಾ ಮೇಲ್ವಿಚಾರಕ 22 ವರ್ಷದ ನಿಜಾಮುದ್ದೀನ್ ಅಲಿ ಹೇಳುತ್ತಾರೆ. ಅವರು ಹರಿಯಾಣ-ದೆಹಲಿ ಗಡಿಯಲ್ಲಿರುವ ಸಿಂಘು ಎಂಬಲ್ಲಿ ರೈತರ ಪ್ರತಿಭಟನಾ ಸ್ಥಳದಿಂದ ಸುಮಾರು ಆರು ಕಿಲೋಮೀಟರ್ ದೂರದಲ್ಲಿ ವಾಸಿಸುತ್ತಿದ್ದಾರೆ. (ಕುಂಡ್ಲಿ ಹರಿಯಾಣದ ಸೋನಿಪತ್ ಜಿಲ್ಲೆಯ ಹಳೆಯ ಗ್ರಾಮ, ಈಗ ಪುರಸಭೆಯಾಗಿದೆ).
ರೈತರ ಪ್ರತಿಭಟನೆಯಿಂದಾದ ಉಂಟಾದ ಅಡ್ಡಿಯಿಂದಾಗಿ ನಿಜಾಮುದ್ದೀನ್ಗೆ ಅವರ ಕಂಪನಿಯು ಎರಡು ತಿಂಗಳಿನಿಂದ ಹಣ ಪಾವತಿಸಿಲ್ಲ, ಆದಾಗ್ಯೂ ಕೂಡ ಅವರು ಚಳುವಳಿ ನಿರತ ರೈತರಿಗೆ ಬೆಂಬಲವಾಗಿ ನಿಂತಿದ್ದಾರೆ. "ನನ್ನ ಕಾರ್ಖಾನೆ ಇದೀಗ ಎದುರಿಸುತ್ತಿರುವ ಸಮಸ್ಯೆಗಳನ್ನು ನಾನು ಅರ್ಥಮಾಡಿಕೊಂಡಿದ್ದೇನೆ, ಅದು ನನ್ನ ಸಂಬಳದ ಮೇಲೆ ಪರಿಣಾಮ ಬೀರಿದೆ. ಅದೇ ಸಮಯದಲ್ಲಿ, ನಾನು ರೈತರನ್ನು ಬೆಂಬಲಿಸುತ್ತೇನೆ," ಎಂದು ಅವರು ಹೇಳುತ್ತಾರೆ. ಈ ವಿಚಾರದಲ್ಲಿ ಅವರ ನಿಷ್ಠೆ ಸಮಾನವಾಗಿ ವ್ಯಕ್ತವಾಗಿಲ್ಲ ." ನಾನು ಶೇ 20 ರಷ್ಟು ನನ್ನ ಕಾರ್ಖಾನೆಗೆ ಬೆಂಬಲ ವ್ಯಕ್ತಪಡಿಸಿದರೆ, ಶೇ 80 ರಷ್ಟು ರೈತರಿಗೆ ಬೆಂಬಲ ನೀಡುತ್ತೇನೆ" ಎಂದು ಹೇಳುತ್ತಾರೆ.
ನಿಜಾಮುದ್ದೀನ್ ಕೆಲವು ವರ್ಷಗಳ ಹಿಂದೆ ಬಿಹಾರದ ಸಿವಾನ್ ಜಿಲ್ಲೆಯ ಹಳ್ಳಿಯಿಂದ ಕುಂಡ್ಲಿಗೆ ಬಂದು ನೆಲೆಸಿದರು, ಅಲ್ಲಿ 6.5 ಬಿಘಾ ಭೂಮಿಯಲ್ಲಿ (ಬಿಹಾರದಲ್ಲಿ ಸರಿಸುಮಾರು 4 ಎಕರೆ), ಅವರ ಕುಟುಂಬವು ಗೋಧಿ, ಅಕ್ಕಿ, ತೊಗರಿಬೇಳೆ, ಸಾಸಿವೆ, ಹೆಸರುಬೇಳೆ ಮತ್ತು ತಂಬಾಕನ್ನು ಬೆಳೆಯುತ್ತದೆ. "ಈ ಬೆಳೆಗಳನ್ನು ಜೀವನೋಪಾಯಕ್ಕಾಗಿ ಬೆಳೆಯುವವರು ರೈತರೇ ಹೊರತು ಸರ್ಕಾರ ಅಥವಾ ಅಂಬಾನಿ ಮತ್ತು ಅದಾನಿಯವರಲ್ಲ. ಭಾರತದಾದ್ಯಂತ ಇರುವ ರೈತರ ನೋವು ನನಗೆ ಅರ್ಥವಾಗಿದೆ. ಈ ಹೊಸ ಕಾನೂನುಗಳು ಜಾರಿಗೆ ಬಂದಲ್ಲಿ ರೇಷನ್ ಗೆ ತೆರೆ ಬಿಳುತ್ತದೆ. ಶಾಲೆಗಳಲ್ಲಿರುವ ಮಧ್ಯಾಹ್ನದ ಬಿಸಿ ಊಟವನ್ನುಕೂಡ ಮುಂದುವರಿಸುವುದಿಲ್ಲ," ಎಂದು ಅವರು ಹೇಳುತ್ತಾರೆ.
“ಕೆಲವು ವರ್ಷಗಳ ಹಿಂದೆ ನಮಗೆ ಬಿಹಾರದಲ್ಲಿ ಪ್ರತಿ ಕಿಲೋಗ್ರಾಂ ಗೋಧಿ ಬೆಳೆಗೆ 25 ರೂಪಾಯಿ ಸಿಗಲಿದೆ ಎಂದು ಹೇಳಲಾಯಿತು. ಬಿಹಾರದ ಪ್ರತಿ ಕೃಷಿ ಕುಟುಂಬವು ಪಿಎಂ-ಕಿಸಾನ್ ಯೋಜನೆಯಡಿಯಲ್ಲಿ ತಮ್ಮ ಖಾತೆಗೆ 2,000 ರೂಪಾಯಿಗಳನ್ನು ಜಮಾ ಮಾಡಿಕೊಂಡಿದೆ. ಆದರೆ ನಂತರ ಆ 25 ರೂಪಾಯಿ ದರವನ್ನು ಪ್ರತಿ ಕಿಲೋಗೆ 7 ರೂಪಾಯಿಗೆ ಇಳಿಸಲಾಯಿತು. ನಾವು ಅಭಿವೃದ್ದಿ ಹೊಂದಲು ಬಯಸುತ್ತೇವೆ, ಆದರೆ ಸರ್ಕಾರ ಸ್ಪಷ್ಟವಾಗಿ ನಮ್ಮನ್ನು ಹಿಂದಕ್ಕೆ ತಳ್ಳುತ್ತಿದೆ" ಎಂದು ಹೇಳುತ್ತಾರೆ.










