"ನನ್ನ ಇಬ್ಬರು ಹಿರಿಯ ಪುತ್ರರು ಪಾಟೀಲ್ (ಕೃಷಿ ಮಾಲಿಕರು) ಅವರ ಬಳಿ ಎರಡು ದಿನಗಳ ಕಾಲ ಕೆಲಸ ಮಾಡಿ ತಲಾ 150 ರೂ ಗಳಿಸಿದರು. ಅವರು ಅದೇ ಹಣದಿಂದ ಪಾಟೀಲರ್ ಬಳಿ ಕನ್ಯಾವನ್ನು ಖರೀದಿಸಿದರು", ಎಂದು ವನಿತಾ ಭೋಯಿರ್ ಹೇಳುತ್ತಾ ಹಳದಿ ಬಣ್ಣದ ಪ್ಲಾಸ್ಟಿಕ್ ಜಾರ್ ತೆರೆದು ನನಗೆ ತೋರಿಸಲೆಂದು ಅದರಿಂದ ಒಂದಿಷ್ಟು ಅಕ್ಕಿಯ ನುಚ್ಚನ್ನು ಕೈಯಲ್ಲಿ ತೆಗೆದುಕೊಂಡರು. ಅವು ಭತ್ತದ ಕೊಯ್ಲಿನ ನಂತರ ಅಕ್ಕಿ ಮಾಡಿಸುವಾಗ ಸಿಗುವ ತುಂಡಾದ ಅಕ್ಕಿಕಾಳುಗಳಾಗಿದ್ದವು ಮತ್ತು ಇದರ ಬೆಲೆ ಅಕ್ಕಿಗಿಂತ ಕಡಿಮೆಯಿರುತ್ತದೆ. ಈ ಕನ್ಯಾದ ಜೊತೆಗೆ 52 ವರ್ಷದ ವನಿತಾರ ಒಣ ಹುಲ್ಲು ಮತ್ತು ಮಣ್ಣಿನಿಂದ ನಿರ್ಮಿಸಿದ ಗುಡಿಸಲಿನಲ್ಲಿ ಒಂದು ವಾರಕ್ಕಾಗುವಷ್ಟು ಉಪ್ಪು, ಮೆಣಸಿನಕಾಯಿ ಮತ್ತು ಅರಿಶಿನ ಪುಡಿ, ಅಡುಗೆ ಎಣ್ಣೆ ಮತ್ತು ಕೆಲವು ಆಲೂಗಡ್ಡೆಗಳ ಸಂಗ್ರಹವಿತ್ತು. ಇವುಗಳನ್ನು ಅವರ ಕುಟುಂಬಕ್ಕೆ ಸ್ಥಳೀಯ ಸಾಮಾಜಿಕ ಕಾರ್ಯಕರ್ತರು ನೀಡಿದ್ದರು.
"ಪಡಿತರ ಚೀಟಿ ಹೊಂದಿರುವವರಿಗೆ ಸರಕಾರದಿಂದ ಧಾನ್ಯಗಳನ್ನು ನೀಡಲಾಗುತ್ತಿದೆ. ಅವರು ಉಚಿತವಾಗಿ ಅಕ್ಕಿಯನ್ನು ಸಹ ಪಡೆದರು. (ಪ್ರತಿ ತಿಂಗಳು, ಮಾರ್ಚ್ ತಿಂಗಳ ಲಾಕ್ಡೌನ್ ಆರಂಭವಾದಾಗಿನಿಂದ) ಆದರೆ ನನ್ನ ಬಳಿ ಪಡಿತರ ಚೀಟಿಯಿಲ್ಲ. ಈಗ ನನ್ನ ಕುಟುಂಬ ಏನು ಮಾಡಬೇಕು? ಸರ್ಕಾರ ನನಗೆ ಸಹಾಯ ಮಾಡುವುದಿಲ್ಲ. ನಮ್ಮ ಕೆಲಸವೂ ನಿಂತುಹೋಗಿದೆ. ನಾವು ಏನು ತಿನ್ನಬೇಕು?", ಇದು 55 ವರ್ಷದ ನವ್ಸು ಭೋಯಿರ್, ವನಿತಾರ ಪತಿಯ ಪ್ರಶ್ನೆ.
ನವ್ಸು ಪಡಿತರ ಚೀಟಿಗಾಗಿ ಇದುವರೆಗೂ ಅರ್ಜಿ ಸಲ್ಲಿಸಿಲ್ಲ. "ನಾವು ಪ್ರತಿ ವರ್ಷ ಕೆಲಸದ ಹುಡುಕಾಟದಲ್ಲಿ ವಲಸೆ ಹೋಗುತ್ತೇವೆ. ಇದಕ್ಕಾಗಿ ಅರ್ಜಿ ಸಲ್ಲಿಸುವುದು ಹೇಗೆಂದು ನನಗೆ ತಿಳಿದಿಲ್ಲ", ಎಂದು ಅವರು ಹೇಳುತ್ತಾರೆ. ನವ್ಸು ಅಶಿಕ್ಷಿತ. ದಂಪತಿಗಳ ಮೂವರು ಮಕ್ಕಳು ಕಾಲಕ್ರಮೇಣ ಶಾಲೆಯಿಂದ ಹೊರಗುಳಿದಿದ್ದಾರೆ. 18 ವರ್ಷ ಪ್ರಾಯದ ಆನಂದ್ ಮತ್ತು 12 ವರ್ಷದ ಶಿವ 3ನೇ ತರಗತಿ ನಂತರ ಶಾಲೆ ಬಿಟ್ಟಿದ್ದಾರೆ. ರಾಮದಾಸ್ 16 ವರ್ಷ 4ನೇ ತರಗತಿಯ ತನಕ ಓದಿದ್ದಾನೆ. ಅವರ ಇಬ್ಬರು ಕಿರಿಯ ಮಕ್ಕಳು ಶಾಲೆಯಲ್ಲಿ ಓದುತ್ತಿದ್ದಾರೆ. 8 ವರ್ಷದ ಕೃಷ್ಣ 2ನೇ ತರಗತಿ ಓದುತ್ತಿದ್ದರೆ ಕಿರಿಯಳಾದ ನಾಲ್ಕು ವರ್ಷದ ಸಂಗೀತ ಸ್ಥಳೀಯ ಅಂಗನವಾಡಿಗೆ ಹೋಗುತ್ತಾಳೆ.
ಭೋಯಿರ್ ಕುಟುಂಬವು ಪಾಲ್ಘರ್ ಜಿಲ್ಲೆಯ ವಡಾ ಪಟ್ಟಣದಿಂದ 20 ಕಿಲೋಮೀಟರ್ ದೂರದಲ್ಲಿರುವ ಬೊರಾಂಡಾ ಎಂಬ ಹಳ್ಳಿಯಲ್ಲಿ ವಾಸಿಸುತ್ತಿದೆ. ಅವರು ಕಟ್ಕರಿ ಆದಿವಾಸಿ ಸಮುದಾಯದ ಸುಮಾರು ಎಂಟು ಗುಡಿಸಲುಗಳ ಗುಂಪಿನಲ್ಲಿ ವಾಸಿಸುತ್ತಿದ್ದಾರೆ.
ಕಳೆದ ವರ್ಷ ನವೆಂಬರ್ನಲ್ಲಿ ಕಾರ್ಮಿಕರ ಕುಟುಂಬವು ಇಟ್ಟಿಗೆ ಗೂಡುಗಳಲ್ಲಿ ಕೆಲಸ ಮಾಡಲು ಭಿವಾಂಡಿ ತಾಲ್ಲೂಕಿಗೆ ವಲಸೆ ಬಂದಿತು. ಇಟ್ಟಿಗೆ ಗೂಡಿನಲ್ಲಿ ಕೆಲಸವೆಂದರೆ ಹಗಲು ರಾತ್ರಿಗಳ ಮೈಮುರಿಯುವಷ್ಟು ದುಡಿಮೆ. ವಾರಕ್ಕೊಮ್ಮೆ ಮಾಲಿಕರಿಂದ 400-500 ಖರ್ಚಿಗಾಗಿ ಪಡೆದು ಪಡಿತರ ಮತ್ತು ಇತರ ಅಗತ್ಯ ವಸ್ತುಗಳನ್ನು ಖರೀದಿಸುತ್ತಿದ್ದರು. ತಿಂಗಳ ಕೊನೆಯಲ್ಲಿ ಅವರಿಗೆ ಸಂಬಳದ ಲೆಕ್ಕ ಹಾಕುವಾಗ ಅವರ ಒಟ್ಟು ಗಳಿಕೆಯಿಂದ ಕಡಿತಗೊಳಿಸಲಾಗುತ್ತದೆ. ಕುಟುಂಬದ ಯಾವುದೇ ಸಾಲ ಇಲ್ಲದಿದ್ದಲ್ಲಿ ನವೆಂಬರ್ ತಿಂಗಳಿನಿಂದ ಮೇ ತನಕ ಏಳು ತಿಂಗಳು ದುಡಿದರೆ ಅವರ ಕೈಯಲ್ಲಿ 10,000-12,000 ರೂಪಾಯಿಗಳು ಕೈಯಲ್ಲಿರುತ್ತದೆ.






