"1994ರ ಪ್ಲೇಗ್ನ ಅವಧಿಯಲ್ಲಾಗಲಿ, 2006ರ ಚಿಕನ್ಗುನ್ಯದ ಅವಧಿಯಲ್ಲಾಗಲಿ, 1993ರ ಭೂಕಂಪದ ಕಾಲದಲ್ಲಾಗಲಿ, ಈ ದೇವಸ್ಥಾನವನ್ನು ಮುಚ್ಚಿದ್ದೇ ಇಲ್ಲ. ಇತಿಹಾಸದಲ್ಲಿ ಮೊದಲ ಬಾರಿಗೆ ನಾವಿದನ್ನು ಕಾಣುತ್ತಿದ್ದೇವೆ", ಎನ್ನುತ್ತಾರೆ ವ್ಯಾಕುಲಗೊಂಡಂತೆ ಕಾಣುವ ಸಂಜಯ್ ಪೆಂಡೆ. ದಕ್ಷಿಣ ಮಹಾರಾಷ್ಟ್ರದ ತುಲ್ಜಾಪುರ ಊರಿನಲ್ಲಿರುವ ತುಲ್ಜಾ ಭವಾನಿ ದೇವತೆಯ ದೇವಸ್ಥಾನದ ಪ್ರಮುಖ ಅರ್ಚಕರಲ್ಲಿ ಇವರೂ ಒಬ್ಬರು.
ಕೊವಿಡ್-19 ಹರಡುವುದನ್ನು ತಡೆಗಟ್ಟಲು ಮಾರ್ಚ್ 17ರ ಮಂಗಳವಾರದಂದು ದೇವಸ್ಥಾನದ ಬಾಗಿಲನ್ನು ಭಕ್ತರಿಗೆ ಮುಚ್ಚಲಾಯಿತು. ಇಲ್ಲಿಯ ಜನರಿಗೆ ಇದನ್ನು ನಂಬಲಾಗುತ್ತಿಲ್ಲ. “ಇದೆಂಥ ಖಾಯಿಲೆ? ಬೇರೆ ರಾಜ್ಯಗಳಿಂದ ಭಕ್ತರು ಇಲ್ಲಿಗೆ ಬರುತ್ತಿದ್ದಾರೆ. ದೇವಸ್ಥಾನದ ಹೊರಗಿನಿಂದಲೇ ಅವರು ದರ್ಶನವನ್ನು ಪಡೆಯಬೇಕಿದೆ. ಅದೂ ಪೋಲೀಸರೊಂದಿಗೆ ಗುದ್ದಾಡಿದ ನಂತರ”, ಎನ್ನುತ್ತಾರೆ 38 ವರ್ಷದ ಪೆಂಡೆ. ನಿತ್ಯವೂ ಅವರು ಕೈಗೊಳ್ಳುವ 10-15 ವಿಶೇಷ ಪೂಜೆಯ ಮೂಲಕ ದೊರೆಯುತ್ತಿದ್ದ ಸಂಪಾದನೆಗೆ ಧಕ್ಕೆಯೊದಗಿದ ಕಾರಣ ಅವರು ಚಿಂತಿತರಾಗಿದ್ದರು. ತುಲ್ಜಾಪುರದಲ್ಲಿ, ದೇವಸ್ಥಾನಕ್ಕೆ ಸಂಬಂಧಿಸಿದ ಚಟುವಟಿಕೆಗಳಿಂದ ದೊರೆಯುವ ಸಂಪಾದನೆಯನ್ನು ಅವಲಂಬಿಸಿದ ಸುಮಾರು 5 ಸಾವಿರ ಪುರೋಹಿತರಿದ್ದಾರೆಂಬುದು ಪೆಂಡೆ ಅವರ ಅಂದಾಜು.
ಮರಾಠವಾಡ ಪ್ರದೇಶದ ಉಸ್ಮಾನಾಬಾದ್ ಜಿಲ್ಲೆಯ ಈ ಊರಿನ 34 ಸಾವಿರ ಜನರ (2011ರ ಜನಗಣತಿಯಂತೆ) ಆರ್ಥಿಕ ಸ್ಥಿತಿಯು ಬೆಟ್ಟದ ಮೇಲೆ ನೆಲೆಗೊಂಡಿರುವ 12ನೇ ಶತಮಾನದ್ದೆಂದು ಹೇಳಲಾಗುವ ದೇವಸ್ಥಾನವನ್ನು ಅವಲಂಬಿಸಿದೆ. ಮಹಾರಾಷ್ಟ್ರ ಹಾಗೂ ಇತರೆ ರಾಜ್ಯಗಳಲ್ಲಿನ ಅನೇಕ ಜನರು ತುಲ್ಜಾ ಭವಾನಿ ದೇವತೆಯನ್ನು ತಮ್ಮ ಮನೆ ದೇವರೆಂದು ಭಾವಿಸುತ್ತಾರೆ. ರಾಜ್ಯದ ತೀರ್ಥಯಾತ್ರೆಯ ಮಾರ್ಗದಲ್ಲಿನ ಈ ದೇವಸ್ಥಾನವು ದೇವತೆಯರಿಗೆ ಮೀಸಲಾದ ದೇವಸ್ಥಾನಗಳಲ್ಲಿ ಪ್ರಮುಖವೆನಿಸಿದೆ.









