ನಾಗಿರೆಡ್ಡಿಯವರು ಇರುವುದು ತಮಿಳುನಾಡಿನಲ್ಲಿ. ಅವರು ಕನ್ನಡ ಮಾತನಾಡುತ್ತಾರೆ ಮತ್ತು ತೆಲುಗು ಓದಬಲ್ಲರು. ಕಳೆದ ಡಿಸೆಂಬರ್ ತಿಂಗಳ ಒಂದು ಬೆಳಗು ನಾವು ಅವರನ್ನು ಹುಡುಕಿ ಹೊರಟಿದ್ದೆವು. ಅಂದು ನಾವು ಆಗಲೇ ಸಾಕಷ್ಟು ದೂರ ನಡೆದಿದ್ದೆವು. ಅವರು ಮನೆ “ಇಲ್ಲೇ ಹತ್ತಿರದಲ್ಲಿದೆ,” ಎನ್ನುತ್ತಿದ್ದರು. ಆದರೆ ನಿಜವಾಗಿ ಅದು ಉಕ್ಕಿ ಹರಿಯುತ್ತಿದ್ದ ಕೆರೆ, ಹುಣಿಸೆ ಮರ, ಒಂದು ನೀಲಗಿರಿ ಗುಡ್ಡ, ಇನ್ನೊಂದು ಮಾವಿನ ತೋಪು, ಅಲ್ಲಿಂದ ಒಂದು ಕಾವಲು ನಾಯಿ, ಇನ್ನೊಂದು ಸಣ್ಣ ನಾಯಿ ಮತ್ತು ದನದ ಕೊಟ್ಟಿಗೆಯನ್ನು ದಾಟಿ ಹೋದ ನಂತರ ಸಿಕ್ಕಿತು.
ದೇಶದ ಯಾವುದೇ ರೈತನು ಎದುರಿಸುವ ಎಲ್ಲಾ ಸಾಮಾನ್ಯ ಸಮಸ್ಯೆಗಳು ಮತ್ತು ತಲೆನೋವುಗಳ ಜೊತೆಗೆ, ನಾಗಿ ರೆಡ್ಡಿಗೆ ತಾನು ಬೆಳೆಯುವ ಬೆಳೆಗಳನ್ನು ಬದಲಾಯಿಸಬೇಕಾದ ಹಂತಕ್ಕೆ ಅವರನ್ನು ಕಾಡುವ ಮತ್ತೊಂದು ಅಂಶವಿದೆ. ಅವರನ್ನು ಮೂರು ಕಠಿಣ ಮತ್ತು ಭಯಭೀತ ಪಾತ್ರಗಳು ಬೇಟೆಯಾತ್ತಿವೆ: ಮೊಟ್ಟೈ ವಾಲ್, ಮಖಾನಾ ಮತ್ತು ಗಿರಿ.
ಸಾಂಕೇತಿಕವಾಗಿ ಅಥವಾ ಅಕ್ಷರಶಃ - ಈ ಮೂವರನ್ನು ಲಘುವಾಗಿ ತೆಗೆದುಕೊಳ್ಳಬಾರದು ಎನ್ನುವುದನ್ನು ಇಲ್ಲಿನ ರೈತರು ಕಲಿತಿದ್ದಾರೆ. ಅದರಲ್ಲೂ ಅವರಲ್ಲಿ ಒಬ್ಬೊಬ್ಬರು 4,000 ಮತ್ತು 5,000 ಕಿಲೋಗಳ ನಡುವೆ ತೂಕವನ್ನು ಹೊಂದಿರುವಾಗ ನಿರ್ಲಕ್ಷಿಸಲು ಸಾಧ್ಯವೇ ಇಲ್ಲ. ಈ ಮಾರಕ ಆನೆಗಳ ನಿಖರವಾದ ತೂಕ ಮತ್ತು ಎತ್ತರವನ್ನು ಪರಿಶೀಲಿಸುವಲ್ಲಿ ನನ್ನ ಉತ್ಸಾಹದ ಕೊರತೆಯನ್ನು ಸ್ಥಳೀಯರು ಕ್ಷಮಿಸಲಿ.
ತಮಿಳುನಾಡು ಮತ್ತು ಕರ್ನಾಟಕ ಎನ್ನುವ ಎರಡು ರಾಜ್ಯಗಳ ಗಡಿಯಲ್ಲಿರುವ ಕೃಷ್ಣಗಿರಿ ಜಿಲ್ಲೆಯಲ್ಲಿ ನಾವಿದ್ದೇವೆ. ಮತ್ತು ನಾಗಿ ರೆಡ್ಡಿಯವರ ಕುಗ್ರಾಮ, ಡೆಂಕಣಿಕೋಟೆ ತಾಲೂಕಿನ ವಡ್ಡರ ಪಾಳಯಂ, ಕಾಡಿನಿಂದ ಹೆಚ್ಚು ದೂರದಲ್ಲಿಲ್ಲ, ಆನೆಗಳಿಂದಲೂ ದೂರವಿಲ್ಲ, ಮತ್ತು ನಾವು ಕುಳಿತಿರುವ ಅವರ ಸಿಮೆಂಟ್ ವರಾಂಡವು ಅವರ ಹೊಲಗಳಿಂದ ಕೆಲವು ಮೀಟರ್ಗಳಷ್ಟು ದೂರದಲ್ಲಿದೆ. ನಾಗಣ್ಣ ಎಂದು ಗ್ರಾಮಸ್ಥರಿಂದ ಕರೆಯಲ್ಪಡುವ ನಾಗಿ ರೆಡ್ಡಿಯವರು, 86 ವರ್ಷ ವಯಸ್ಸಿನವರು ಮತ್ತು ಹೆಚ್ಚು ಪೌಷ್ಟಿಕಾಂಶವುಳ್ಳ ರಾಗಿ ಬೆಳೆಯುವ ರೈತ. ಅವರು ದಶಕಗಳಿಂದ ಕೃಷಿಯಲ್ಲಿನ ಪ್ರತಿಯೊಂದು ಕದಲುವಿಕೆಯನ್ನು ನೆನಪಿಸಿಕೊಳ್ಳಬಲ್ಲ ಸಾಕ್ಷಿಯಾಗಿದ್ದಾರೆ. ಅವುಗಳಲ್ಲಿ ಕೆಲವು ಒಳ್ಳೆಯದು, ಕೆಟ್ಟದು ಮತ್ತು ಕೆಲವೊಮ್ಮೆ, ಭಯಾನಕ.
“ನಾನು ಸಣ್ಣವನಿದ್ದಾಗ ಆನೆಗಳು ರಾಗಿ ಹೂವಿನ ಪರಿಮಳ ಬರುವ ಕಾಲದಲ್ಲಷ್ಟೇ ಅದನ್ನು ಹುಡುಕಿ ಬರುತ್ತಿದ್ದವು. ಆದ್ರೆ ಈಗ? ಯಾವಾಗಂದ್ರೆ ಆಗ ಬರ್ತಾವೆ. ಅವುಗಳಿಗೆ ನಮ್ಮ ಬೆಳೆ, ಹಣ್ಣು ಎಲ್ಲ ತಿಂದು ಅಭ್ಯಾಸ ಆಗಿಬಿಟ್ಟಿದೆ.”
ಇದಕ್ಕೆ ಎರಡು ಕಾರಣಗಳಿವೆ ಎಂದು ನಾಗಣ್ಣ ತಮಿಳಿನಲ್ಲಿ ವಿವರಿಸುತ್ತಾರೆ. “1990ರ ನಂತರ, ಈ ಕಾಡಿನಲ್ಲಿ ಆನೆಗಳ ಸಂಖ್ಯೆ ಹೆಚ್ಚಾಯಿತು, ಆದರೆ ಕಾಡಿನ ಗಾತ್ರ ಮತ್ತು ಗುಣಮಟ್ಟ ಕಡಿಮೆಯಾಯಿತು. ಆದ್ದರಿಂದ, ಅವು ತಮ್ಮ ಆಹಾರಕ್ಕಾಗಿ ಇಲ್ಲಿ ಕಾಣಿಸಿಕೊಳ್ಳುತ್ತವೆ. ಮತ್ತು ನೀವು ಒಳ್ಳೆಯ ಹೋಟೆಲ್ಗೆ ಹೋದಾಗ ನಿಮ್ಮ ಸ್ನೇಹಿತರಿಗೆ ಹೇಳುವಂತೆ, ಅವು ಕೂಡಾ ತಾವು ಹೋದ ಜಾಗದ ಬಗ್ಗೆ ಹೇಳ್ತವೆ,” ಅವರು ನಿಟ್ಟುಸಿರು ಮತ್ತು ನಗುವನ್ನು ಒಮ್ಮೆಲೆ ಹೊರಸೂಸುತ್ತಾರೆ. ಈ ವ್ಯಂಗ್ಯಾತ್ಮಕ ಹೋಲಿಕೆ ಅವರನ್ನು ರಂಜಿಸಿದರೆ ನನ್ನನ್ನು ಆಶ್ಚರ್ಯಗೊಳಿಸುತ್ತದೆ.
































