“ಬಾಪು ತೂ ಆಜಾ [ತಾತಾ ಮನೆಗೆ ಬನ್ನಿ] “ ಎಂದು ತನ್ನಾ ಸಿಂಗ್ ಅವರ ಮೊಮ್ಮಗ ಫೋನ್ ಮಾಡಿದಾಗಲೆಲ್ಲ ಕರೆಯುತ್ತಿರುತ್ತಾನೆ. “ಆದ್ರೆ ನಾನು ಹೇಗೆ ಹೋಗೋದು? ಅಷ್ಟಕ್ಕೂ ಇದನ್ನೆಲ್ಲ ಮಾಡುತ್ತಿರುವುದೇ ಅವನ ಭವಿಷ್ಯ ಸಲುವಾಗಿ.” ಎಂದು ಟೆಂಟಿನ ಬಳಿ ಸ್ಟೂಲ್ ಒಂದರ ಮೇಲೆ ಕುಳಿತಿದ್ದ ಸಿಂಗ್ ಹೇಳುತ್ತಾರೆ.
“ಒಮ್ಮೊಮ್ಮೆ ಅವನ [ನನ್ನ ಮಗನ 15 ವರ್ಷದ ಮಗ] ಮಾತು ಕೇಳಿ ನನಗೆ ಅಳುವೇ ಬಂದುಬಿಡುತ್ತದೆ. ಯಾರು ತಾನೆ ಹೀಗೆ ಮೊಮ್ಮಗನನ್ನು ಬಿಟ್ಟಿರುತ್ತಾರೆ? ಯಾರು ಹೀಗೆ ಮಗ, ಮಗಳನ್ನು ಬಿಟ್ಟು ದೂರವಿರುತ್ತಾರೆ?” ಎಂದು ಕಣ್ತುಂಬಿಕೊಂಡು ಕೇಳುತ್ತಾರೆ.
ಆದರೆ ತನ್ನಾ ಸಿಂಗ್ ಯಾವುದೇ ಪರಿಸ್ಥಿತಿಯಲ್ಲೂ ಊರಿಗೆ ಮರಳದಿರಲು ತೀರ್ಮಾನಿಸಿದ್ದಾರೆ. ಅವರು 2020ರ ನವೆಂಬರ್ 26ರಿಂದ ಪ್ರತಿಭಟನಾ ಸ್ಥಳದಲ್ಲಿದ್ದು ಅವರು ಒಂದು ದಿನವೂ ಅಲ್ಲಿಂದ ಕದಲಿಲ್ಲ. ನವೆಂಬರ್ 19 2021ರಂದು ಮೂರು ವಿವಾದಸ್ಪದ ಕೃಷಿ ಕಾನೂನುಗಳನ್ನು ರದ್ದುಗೊಳಿಸುವುದಾಗಿ ಘೋಷಿಸಿದ್ದರೂ, ಅದಕ್ಕೆ ಅಧಿಕೃತ ಮುದ್ರೆ ಬೀಳುವ ತನಕವೂ ತಾನು ಟಿಕ್ರಿಯಲ್ಲೇ ಇರುವುದಾಗಿ ಹೇಳುತ್ತಾರೆ. ಎಪ್ಪತ್ತು ವರ್ಷದ ವಿಧುರರಾಗಿರುವ ಅವರು “ನಾವು ಈ ಮೂರು ಕಾಯಿದೆಗಳ ವಾಪಸಾತಿ ಘೋಷಿಸಿ ರಾಷ್ಟ್ರಪತಿಯವರ ಅಧಿಕೃತ ಮುದ್ರೆ ಬೀಳುವುದನ್ನು ಕಾಯುತ್ತಿದ್ದೇವೆ. ಈ ದಿನವನ್ನು ನೋಡಲೆಂದೇ ನಾವು ವರ್ಷದ ಕೆಳಗೆ ಮನೆ ಬಿಟ್ಟು ಬಂದು ಇಲ್ಲಿ ಕುಳಿತಿದ್ದು” ಎನ್ನುತ್ತಾರೆ.
ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸಿ ಒಂದು ವರ್ಷದ ಹಿಂದೆ ರಾಜಧಾನಿಯ ಗಡಿಗೆ ಬಂದ ಲಕ್ಷಾಂತರ ರೈತರಲ್ಲಿ ಅವರೂ ಒಬ್ಬರು. ಮತ್ತು ಟಿಕ್ರಿ (ಪಶ್ಚಿಮ ದೆಹಲಿ), ಸಿಂಘು (ರಾಜಧಾನಿಯ ವಾಯುವ್ಯ) ಮತ್ತು ಗಾಜಿಪುರ ( ಪೂರ್ವ) ದಾಟಿ ಮುಂದೆ ಹೋಗಲು ಅನುಮತಿಸದಿದ್ದಾಗ ಅಲ್ಲೇ ನೆಲೆನಿಂತಿದ್ದರು.
ಸಿಂಗ್ ಅವರು ಪಂಜಾಬ್ನ ಮುಕ್ತಸರ್ ಜಿಲ್ಲೆಯ ಭಂಗ್ಚಾರಿ ಗ್ರಾಮದಿಂದ ತಮ್ಮ ಟ್ರ್ಯಾಕ್ಟರ್ನಲ್ಲಿ ಇತರ ಕೆಲವು ರೈತರೊಂದಿಗೆ ಇಲ್ಲಿಗೆ ಬಂದರು, ಆ ಟ್ರ್ಯಾಕ್ಟರ್ ಪ್ರತಿಭಟನಾ ಸ್ಥಳದ ಬಳಿ ಎಲ್ಲೋ ನಿಂತಿದೆ. ಅವರ ಗ್ರಾಮದಲ್ಲಿ, ಅವರ ಕುಟುಂಬವು ತಮ್ಮ ಎಂಟು ಎಕರೆ ಭೂಮಿಯಲ್ಲಿ ಗೋಧಿ ಮತ್ತು ಭತ್ತವನ್ನು ಬೆಳೆಯುತ್ತಾರೆ. "ನನ್ನ ಮಗನ ಜೊತೆ ನಮ್ಮ ಖೇತ್ [ಕೃಷಿಭೂಮಿ] ಜವಾಬ್ದಾರಿಯನ್ನು ಬಿಟ್ಟು ನಾನು ಇಲ್ಲಿಗೆ ಬಂದಿದ್ದೇನೆ" ಎಂದು ಅವರು ಹೇಳುತ್ತಾರೆ.










