ಚಂಧ್ರಿಕಾ ಬೆಹೆರಾಳಿಗೆ ಈ ಒಂಬತ್ತು ವರ್ಷ. ಸುಮಾರು ಕಳೆದ ಎರಡು ವರ್ಷಗಳಿಂದ ಅವಳು ಶಾಲೆಗೆ ಹೋಗುತ್ತಿಲ್ಲ. ಬಾರಾಬಂಕಿಯಲ್ಲಿ ಶಾಲೆಯಿಂದ ಹೊರಗುಳಿದಿರುವ 1ರಿಂದ 5ನೇ ತರಗತಿಯ 19 ವಿದ್ಯಾರ್ಥಿಗಳಲ್ಲಿ ಅವಳೂ ಒಬ್ಬಳು. ಈ ಮಕ್ಕಳು 2020ರಿಂದ ನಿಯಮಿತವಾಗಿ ಶಾಲೆಗೆ ಹೋಗಿಲ್ಲ. ತನ್ನ ತಾಯಿ ಶಾಲೆಗೆ ಹೋಗಲು ಬಿಡುವುದಿಲ್ಲವೆನ್ನುವುದು ಅವಳು ಶಾಲೆಗೆ ಹೋಗದಿರುವುದಕ್ಕೆ ಕೊಡುವ ಕಾರಣ.
ಬಾರಾಬಂಕಿ 2007ರಲ್ಲಿ ಊರಿನಲ್ಲಿ ತನ್ನದೇ ಆದ ಶಾಲೆಯನ್ನು ಹೊಂದಿತ್ತು, ಆದರೆ ಇದನ್ನು ಒಡಿಶಾ ಸರ್ಕಾರವು 2020ರಲ್ಲಿ ಮುಚ್ಚಿತು. ಪ್ರಾಥಮಿಕ ಶಾಲಾ ಮಕ್ಕಳು, ಹೆಚ್ಚಾಗಿ ಹಳ್ಳಿಯಿಂದ ಬರುವ ಚಂದ್ರಿಕಾಳಂತಹ ಸಂತಾಲ್ ಮತ್ತು ಮುಂಡಾ ಆದಿವಾಸಿ ವಿದ್ಯಾರ್ಥಿಗಳನ್ನು ಸುಮಾರು 3.5 ಕಿಲೋಮೀಟರ್ ದೂರದಲ್ಲಿರುವ ಜಮುಪಾಸಿ ಗ್ರಾಮದ ಶಾಲೆಗೆ ದಾಖಲಿಸಲು ಹೇಳಲಾಯಿತು.
"ಮಕ್ಕಳು ಪ್ರತಿದಿನ ಅಷ್ಟು ದೂರ ನಡೆಯಲು ಸಾಧ್ಯವಿಲ್ಲ. ಅಲ್ಲದೆ ದೀರ್ಘ ನಡಿಗೆಯ ದಾರಿಯಲ್ಲಿ ಪರಸ್ಪರ ಜಗಳವಾಡುತ್ತಿರುತ್ತಾರೆ," ಎಂದು ಚಂದ್ರಿಕಾ ಅವರ ತಾಯಿ ಮಾಮಿ ಬೆಹೆರಾ ಹೇಳುತ್ತಾರೆ. "ನಾವು ಬಡ ಕಾರ್ಮಿಕರು. ಕೆಲಸ ಹುಡುಕೋದನ್ನ ಬಿಟ್ಟು ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗಲು ಸಾಧ್ಯವೆ? ಅಧಿಕಾರಿಗಳು ನಮ್ಮ ಊರಿನ ಶಾಲೆಯನ್ನು ಮತ್ತೆ ತೆರೆಯಬೇಕು," ಎಂದು ಅವರು ಹೇಳುತ್ತಾರೆ.
ಅಲ್ಲಿಯವರೆಗೆ ತನ್ನ ಕಿರಿಯ ಮಗಳಂತೆ 6ರಿಂದ 10 ವರ್ಷದೊಳಗಿನ ಮಕ್ಕಳು ಶಿಕ್ಷಣ ಪಡೆಯಲು ಸಾಧ್ಯವಿಲ್ಲವೆಂದು ಅವರು ಅಸಾಯಕತೆಯಿಂದ ನಿಟ್ಟುಸಿರಿಡುತ್ತಾರೆ. 30 ವರ್ಷದವರಾದ ಅವರು ಜಾಜ್ಪುರ ಜಿಲ್ಲೆಯ ದಾನಗಡಿ ಬ್ಲಾಕ್ನ ಕಾಡಿನಲ್ಲಿ ಮಕ್ಕಳ ಕಳ್ಳರು ಸಹ ಇರಬಹುದೆಂದು ಹೆದರುತ್ತಾರೆ.
ತನ್ನ ಮಗ ಜೋಗಿಗೆ ಮಾಮಿ ಒಂದು ಹಳೆಯ ಸೈಕಲ್ಲೊಂದನ್ನು ವ್ಯವಸ್ಥೆ ಮಾಡುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ಜೋಗಿ ಊರಿನಿಂದ 6 ಕಿಲೋಮೀಟರ್ ದೂರದಲ್ಲಿರುವ ಮತ್ತೊಂದು ಶಾಲೆಯಲ್ಲಿ 9ನೇ ತರಗತಿಯಲ್ಲಿ ಓದುತ್ತಿದ್ದಾನೆ. ಹಿರಿಯ ಮಗಳು ಮೋನಿ ಜಮುಪಾಸಿಯಲ್ಲಿನ ಶಾಲೆಯಲ್ಲಿ 7ನೇ ತರಗತಿಯಲ್ಲಿ ಓದುತ್ತಿರುವ ಅವಳು ಸಹ ನಡೆದೇ ಶಾಲೆಗೆ ಹೋಗುತ್ತಾಳೆ. ಕಿರಿಯ ಮಗಳು ಚಂದ್ರಿಕಾ ಮನೆಯಲ್ಲೇ ಇರುತ್ತಾಳೆ.
“ನಮ್ಮ ತಲೆಮಾರು ನಡೆಯುವುದು, ಏರಿಳಿಯುವುದು ಎಲ್ಲವನ್ನೂ ದೇಹ ಗಟ್ಟಿಯಿರುವ ತನಕವೂ ಮಾಡಿದೆ. ಈಗ ನಮ್ಮ ಮಕ್ಕಳೂ ಹಾಗೇ ಬದುಕಬೇಕೆ?” ಎಂದು ಕೇಳುತ್ತಾರೆ ಮಾಮಿ.





















