ಅವರ ಮುರಿದ ಕೈಗೆ ಕಟ್ಟಿದ ಬ್ಯಾಂಡೇಜಿನ ಹಗ್ಗದಿಂದಾಗಿ ಕಿರಿಕಿರಿಯಾಗುತ್ತಿತ್ತು. ಅವರು ಅದನ್ನು ಹೊರಗೆಳೆದು, ತನ್ನ ತಲೆ ಮೇಲಿನ ಟೋಪಿ ಸರಿಮಾಡಿಕೊಂಡು, ತನ್ನ ಬಳಿಯಿದ್ದ ನೀಲಿ ಡೈರಿ ಮತ್ತು ಪೆನ್ನು ಹುಡುಕಲು ಪ್ರಾರಂಭಿಸಿದರು. ಅವರು ಬಹಳ ಅವಸರದಲ್ಲಿರುವಂತೆ ಕಾಣುತ್ತಿತ್ತು.
"ಮಾಜ್ಹಾ ನಾವ್ ನಾರಾಯಣ್ ಗಾಯಕವಾಡ್. ಮೀ ಕೊಲ್ಹಪುರತಾನ ಆಲೋಯ್. ತುಮ್ಹಿ ಕುತುನ್ ಆಲೇ? [ನನ್ನ ಹೆಸರು ನಾರಾಯಣ್ ಗಾಯಕವಾಡ್. ನಾನು ಕೊಲ್ಹಾಪುರದಿಂದ ಬಂದಿದ್ದೇನೆ. ನೀವು ಎಲ್ಲಿಂದ ಬಂದಿದ್ದೀರಿ?],” ಎಂದು ಕೊಲ್ಹಾಪುರದ ಜಂಬಾಲಿ ಗ್ರಾಮದ 73 ವರ್ಷದ ರೈತ ಕೇಳಿದರು
ಅವರು ದಕ್ಷಿಣ ಮುಂಬೈಯ ಆಜಾದ್ ಮೈದಾನದಲ್ಲಿ ಟೆಂಟ್ ನೆರಳಿನಲ್ಲಿ ಕುಳಿತಿದ್ದ ಅಹ್ಮದ್ನಗರ ಜಿಲ್ಲೆಯ ಬುಡಕಟ್ಟು ಸಮುದಾಯದ ರೈತರ ಗುಂಪಿನೊಂದಿಗೆ ಮಾತನಾಡುತ್ತಾ ಈ ಪ್ರಶ್ನೆಗಳನ್ನು ಕೇಳುತ್ತಿದ್ದರು. ಹೊಸ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ರಾಜ್ಯದ 21 ಜಿಲ್ಲೆಗಳ ರೈತರು ಜನವರಿ 24-26ರಂದು ಮುಂಬೈಗೆ ಬಂದಿದ್ದರು. ನಾರಾಯಣರಾವ್ ಅವರು ತನ್ನ ಮುರಿದ ಕೈಯೊಂದಿಗೆ ಶಿರೋಲ್ ತಾಲ್ಲೂಕಿನ ತಮ್ಮ ಹಳ್ಳಿಯಿಂದ 400 ಕಿ.ಮೀ ಪ್ರಯಾಣಿಸಿ ಅಲ್ಲಿಗೆ ಬಂದಿದ್ದರು.
ತನ್ನನ್ನು ಪರಿಚಯಿಸಿಕೊಂಡ ನಂತರ, ತಾನು ಮತ್ತು ಇತರ ರೈತರು ಅವರ ಊರುಗಳಲ್ಲಿ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮಾತನಾಡಲು ಪ್ರಾರಂಭಿಸಿದರು. "ನಾನು ಒಬ್ಬ ಕೃಷಿಕ, ಹಾಗಾಗಿ ಈ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಬಲ್ಲೆ" ಎಂದು ಅವರು ಜನವರಿ 25ರಂದು ನಮ್ಮನ್ನು ಭೇಟಿಯಾದ ಸಮಯದಲ್ಲಿ ಹೇಳಿದ್ದರು. ಅವರು ತನ್ನ ಮುರಿದ ಬಲಗೈ ನೋಯುತ್ತಿದ್ದರೂ ಅದರಲ್ಲೇ ಅಲ್ಲಿನ ಮಾತುಕತೆಯ ಅಂಶಗಳನ್ನು ತನ್ನ ಡೈರಿಯಲ್ಲಿ ಟಿಪ್ಪಣಿ ಮಾಡಿಕೊಳ್ಳುತ್ತಿದ್ದರು, "ರೈತರು ಮತ್ತು ಕೃಷಿ ಕಾರ್ಮಿಕರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ, ಅದಕ್ಕಾಗಿಯೇ ನಾನು ಅವರ ಸಮಸ್ಯೆಗಳನ್ನು ಆಲಿಸುತ್ತಿದ್ದೇನೆ" ಎಂದು ಅವರು ಹೇಳುತ್ತಾರೆ.
ನಂತರ, ಅವರು ಆಜಾದ್ ಮೈದಾನದಲ್ಲಿ 10 ಜಿಲ್ಲೆಗಳ 20ಕ್ಕೂ ಹೆಚ್ಚು ರೈತರೊಂದಿಗೆ ಮಾತನಾಡಿದ್ದಾಗಿ ಹೇಳಿದರು.
ನಾರಾಯಣ್ ಅವರು ತಮ್ಮ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಸಮಯ ತೆಂಗಿನ ಗರಿಯೊಂದು ಅವರ ಮೇಲೆ ಬಿದ್ದು ಗಾಯಗೊಂಡರು. ಅವರು ತಮ್ಮ ಊರಿನಲ್ಲಿ ಕಬ್ಬು ಮತ್ತು ಜೋಳದ ಬೇಸಾಯ ನಡೆಸುತ್ತಾರೆ. ಜೊತೆಗೆ ಯಾವುದೇ ರಸಗೊಬ್ಬರ ಬಳಸದೆ ತರಕಾರಿಗಳನ್ನು ಸಹ ಬೆಳೆಯುತ್ತಾರೆ. ಅವರು ಮೊದಲಿಗೆ ತನಗಾದ ಗಾಯವನ್ನು ನಿರ್ಲಕ್ಷಿಸಿದರಾದರೂ ವಾರದ ನಂತರವೂ ನೋವು ಕಡಿಮೆಯಾಗದಿದ್ದಾಗ ಜಾಂಬಲಿಯ ಖಾಸಗಿ ವೈದ್ಯರೊಬ್ಬರ ಬಳಿ ಹೋದರು. "ಪರೀಕ್ಷಿಸಿದ ವೈದ್ಯರು ಕೈ ಉಳುಕಿರುವುದರಿಂದ ಹೇಳಿ ಪಟ್ಟಿ (ಕ್ರೇಪ್ ಬ್ಯಾಂಡೇಜ್) ಕಟ್ಟಿಸಲು ಹೇಳಿದರು." ಎಂದು ಅವರು ಹೇಳಿದರು.








