2016ರಲ್ಲಿ ಸ್ನೇಹಿತನೊಬ್ಬನ ಮದುವೆಯಲ್ಲಿ ಮುತ್ತುರಾಜರನ್ನು ನೋಡಿದಾಗ ಮೊದಲ ನೋಟದಲ್ಲೇ ಅವರ ಮೇಲೆ ಚಿತ್ರಾರಿಗೆ ಪ್ರೇಮವಾಗಿತ್ತು. ಮುತ್ತುರಾಜ ಕೂಡ ಪ್ರೀತಿಯಲ್ಲಿ ಸಿಲುಕಿದರು, ಆದರೆ ಅವರು ಚಿತ್ರಾರನ್ನು ನೋಡಿರಲಿಲ್ಲ, ಏಕೆಂದರೆ ಅವರಿಂದ ನೋಡಲು ಸಾಧ್ಯವಿಲ್ಲ. ಚಿತ್ರಾರ ಮನೆಯವರು ಈ ಮದುವೆಯನ್ನು ವಿರೋಧಿಸಿದರು. ಅಂಧನನ್ನು ಮದುವೆಯಾಗುವ ಮೂಲಕ ಚಿತ್ರಾ ತನ್ನ ಜೀವನವನ್ನು ಹಾಳುಮಾಡಿಕೊಳ್ಳುತ್ತಿದ್ದಾರೆನ್ನುವುದು ಅವರ ಅಭಿಪ್ರಾಯವಾಗಿತ್ತು. ಚಿತ್ರಾರೇ ಇಬ್ಬರಿಗಾಗುವಷ್ಟು ದುಡಿಯಬೇಕಾಗುತ್ತದೆ ಎಂದು ಕುಟುಂಬವು ಎಚ್ಚರಿಸುವುದರ ಜೊತೆಗೆ ಚಿತ್ರಾರನ್ನು ಮದುವೆಯಾಗದಂತೆ ತಡೆಯಲು ಬಹಳ ಪ್ರಯತ್ನಿಸಿತು.
ಮದುವೆಯಾದ ಒಂದು ತಿಂಗಳ ನಂತರ, ಚಿತ್ರಾರ ಕುಟುಂಬದ ಅಭಿಪ್ರಾಯ ತಪ್ಪಾಗಿತ್ತೆನ್ನುವುದು ಸಾಬೀತಾಯಿತು. ಚಿತ್ರಾರ ಹೃದಯದ ಖಾಯಿಲೆ ಪತ್ತೆಯಾದಾಗ, ಆ ಸಮಯದಲ್ಲಿ ಅವರನ್ನು ಪೂರ್ಣವಾಗಿ ನೋಡಿಕೊಳ್ಳುತ್ತಿದ್ದವರು ಮುತ್ತುರಾಜ. ಅಂದಿನಿಂದ, ಅವರ ಜೀವನವು ಕಷ್ಟಕರ ತಿರುವುಗಳಿಂದ ತುಂಬಿತ್ತು, ಅವುಗಳಲ್ಲಿ ಕೆಲವು ಭೀಕರವಾಗಿವೆ. ಆದರೆ ತಮಿಳುನಾಡಿನ ಮಧುರೈ ಜಿಲ್ಲೆಯ ಸೋಲಂಕುರುಣಿ ಗ್ರಾಮದಲ್ಲಿ ವಾಸಿಸುತ್ತಿರುವ ದಂಪತಿಗಳಾದ ಎಂ. ಚಿತ್ರಾ(25) ಮತ್ತು ವರ್ಷದ ಡಿ.ಮುತ್ತುರಾಜ (28) ಧೈರ್ಯ ಮತ್ತು ಭರವಸೆಯಿಂದ ಜೀವನವನ್ನು ಎದುರಿಸುತ್ತಿದ್ದಾರೆ. ಇದು ಅವರ ಪ್ರೇಮದ ಕಥೆ.



















