"ಸಂಭ್ರಮಾಚರಣೆಗಳಿದ್ದಾಗಲೆಲ್ಲ ನಾನು ಹಾಡುಗಳನ್ನು ಸಂಯೋಜಿಸಲು ಪ್ರಾರಂಭಿಸುತ್ತೇನೆ."
ಕೊಹಿನೂರ್ ಬೇಗಮ್ ಅವರದು ಏಕ ವ್ಯಕ್ತಿ ಬ್ಯಾಂಡ್. ಅವರು ಹಾಡುಗಳಿಗೆ ಟ್ಯೂನ್ ಹಾಕುತ್ತಾರೆ ಮತ್ತು ಧೋಲ್ ನುಡಿಸುತ್ತಾರೆ. "ನನ್ನ ಸ್ನೇಹಿತರು ಒಟ್ಟುಗೂಡುತ್ತಾರೆ ಮತ್ತು ಕೋರಸ್ ಗೆ ಸೇರುತ್ತಾರೆ." ಎನ್ನುವ ಅವರ ಉತ್ಸಾಹಭರಿತ ಹಾಡುಗಳು ಕಾರ್ಮಿಕ, ಕೃಷಿ ಮತ್ತು ದೈನಂದಿನ ಜೀವನದ ದೈನಂದಿನ ಕೆಲಸಗಳನ್ನು ಒಳಗೊಂಡಿವೆ.
ಮುರ್ಷಿದಾಬಾದ್ ಜಿಲ್ಲೆಯಾದ್ಯಂತ ಪ್ರೀತಿಯಿಂದ ಕೊಹಿನೂರ್ ಆಪಾ (ಅಕ್ಕ)ದು ಕರೆಯಲ್ಪಡುವ ಅನುಭವಿ ಕಾರ್ಮಿಕ ಹಕ್ಕುಗಳ ಕಾರ್ಯಕರ್ತರಾದ ಅವರು ಬೆಲ್ದಂಗ-1 ಬ್ಲಾಕಿನ ಜಾನಕಿ ನಗರ ಪ್ರಾಥಮಿಕ್ ವಿದ್ಯಾಲಯ ಪ್ರಾಥಮಿಕ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟದ ಅಡುಗೆಯವರಾಗಿ ದುಡಿಯುತ್ತಿದ್ದಾರೆ.
"ನಾನು ಬಾಲ್ಯದಿಂದಲೂ ಕಷ್ಟದ ದಿನಗಳನ್ನು ನೋಡಿದ್ದೇನೆ. ಆದರೆ ಹಸಿವು ಮತ್ತು ಕಡುಬಡತನಕ್ಕೆ ನನ್ನನ್ನು ಸೋಲಿಸಲಾಗಲಿಲ್ಲ" ಎಂದು ಹಲವಾರು ಹಾಡುಗಳನ್ನು ರಚಿಸಿರುವ 55 ವರ್ಷದ ಅವರು ಹೇಳುತ್ತಾರೆ. ಓದಿ: ಬೀಡಿ ಕಾರ್ಮಿಕರು: ಜೀವನ ಮತ್ತು ಶ್ರಮದ ಹಾಡುಗಳು
ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯಲ್ಲಿ, ಹೆಚ್ಚಿನ ಮಹಿಳೆಯರು ತಮ್ಮ ಕುಟುಂಬಗಳನ್ನು ಪೋಷಿಸಲು ಬೀಡಿ ಕಟ್ಟುವ ಕೆಲಸ ಮಾಡುತ್ತಾರೆ. ಇಕ್ಕಟ್ಟಾದ ಭಂಗಿಗಳಲ್ಲಿ ದೀರ್ಘ ಗಂಟೆಗಳ ಕಾಲ ವಿಷಕಾರಿ ವಸ್ತುಗಳನ್ನು ನಿರ್ವಹಿಸುವ ಅವರ ಆರೋಗ್ಯದಲ್ಲಿ ತೀವ್ರ ಮತ್ತು ಬದಲಾಯಿಸಲಾಗದ ಕುಸಿತಕ್ಕೆ ಕಾರಣವಾಗುತ್ತದೆ. ಸ್ವತಃ ಬೀಡಿ ಕಾರ್ಮಿಕರಾಗಿರುವ ಕೊಹಿನೂರ್ ಆಪಾ ಈ ಕಾರ್ಮಿಕರಿಗೆ ಉತ್ತಮ ಕೆಲಸದ ಪರಿಸ್ಥಿತಿಗಳು ಮತ್ತು ಕಾರ್ಮಿಕ ಹಕ್ಕುಗಳಿಗಾಗಿ ಒತ್ತಾಯಿಸುವಲ್ಲಿ ಮುಂಚೂಣಿಯಲ್ಲಿದ್ದಾರೆ. ಇದನ್ನೂ ಓದಿ: ದಟ್ಟ ಹೊಗೆಯಲ್ಲಿ ಉಸಿರುಗಟ್ಟಿದ ಸ್ಥಿತಿಯಲ್ಲಿ ಬೀಡಿ ಕಟ್ಟುವ ಮಹಿಳೆಯರ ಆರೋಗ್ಯ
"ನನ್ನ ಬಳಿ ಭೂಮಿಯಿಲ್ಲ. ಬಿಸಿಯೂಟ ಕಾರ್ಮಿಕಳಾಗಿ ನಾನು ಗಳಿಸುವುದನ್ನು ಹೇಳದಿರುವುದೇ ಒಳ್ಳೆಯದು - ಏಕೆಂದರೆ ಇದು ಕಡಿಮೆ ವೇತನ ಪಡೆಯುವ ದಿನಗೂಲಿ ಕೆಲಸಗಾರರಿಗೂ ಹೋಲಿಕೆಯಾಗುವುದಿಲ್ಲ. ನನ್ನ ವ್ಯಕ್ತಿ [ಪತಿ ಜಮಾಲುದ್ದೀನ್ ಶೇಖ್] ತ್ಯಾಜ್ಯ ಸಂಗ್ರಾಹಕ. ನಾವು ನಮ್ಮ ಮೂವರು ಮಕ್ಕಳನ್ನು [ಕಷ್ಟಪಟ್ಟು] ಬೆಳೆಸಿದ್ದೇವೆ", ಎಂದು ಜಾನಕಿ ನಗರದಲ್ಲಿರುವ ತಮ್ಮ ಮನೆಯಲ್ಲಿ ನಮ್ಮೊಂದಿಗೆ ಮಾತನಾಡುತ್ತಾ ಅವರು ಹೇಳುತ್ತಾರೆ.
ಇದ್ದಕ್ಕಿದ್ದಂತೆ, ಒಂದು ಮಗು ಮೆಟ್ಟಿಲುಗಳ ಮೇಲೆ ತೆವಳುತ್ತಾ ನಾವು ಇರುವ ಟೆರೇಸ್ ಮೇಲೆ ಬಂದಾಗ ಅವರ ಮುಖ ಹೊಳೆಯಿತು. ಅದು ಕೊಹಿನೂರ್ ಆಪಾ ಅವರ ಒಂದು ವರ್ಷದ ಮೊಮ್ಮಗಳು. ಮಗು ತನ್ನ ಅಜ್ಜಿಯ ತೊಡೆಯ ಮೇಲೆ ಜಿಗಿಯುತ್ತದೆ, ಅವಳ ದಾದಿಯ (ತಂದೆಯ ಅಮ್ಮ) ಮುಖದಲ್ಲಿ ದೊಡ್ಡ ನಗುವನ್ನು ತರುತ್ತದೆ.
"ಬದುಕು ಎಂದ ಮೇಲೆ ಹೋರಾಟ ಇದ್ದೇ ಇರುತ್ತದೆ. ನಾವು ಭಯಪಡಬಾರದು. ನಮ್ಮ ಕನಸುಗಳಿಗಾಗಿ ನಾವು ಹೋರಾಡಬೇಕು" ಎಂದು ಅವರು ಸಣ್ಣ ಅಂಗೈಯನ್ನು ತನ್ನ ಕೈಗಳಲ್ಲಿ ಹಿಡಿದುಕೊಂಡು ಹೇಳುತ್ತಾರೆ. "ಇದು ನನ್ನ ಮಗುವಿಗೆ ಸಹ ತಿಳಿದಿದೆ. ಅಲ್ವಮ್ಮಾ?"
"ನಿಮ್ಮ ಕನಸುಗಳೇನು, ಆಪಾ?" ನಾವು ಕೇಳುತ್ತೇವೆ.
"ನನ್ನ ಕನಸುಗಳ ಬಗ್ಗೆ ಗೀತ್ [ಹಾಡು] ಕೇಳಿ" ಎಂದು ಅವರು ಪ್ರತಿಕ್ರಿಯಿಸಿದರು.


