ಈ ಪ್ಯಾನೆಲ್ 'ಕಾಣುವ ಕೆಲಸಗಳ ನಡುವೆ ಕಾಣದೆ ಹೋಗುವ ಮಹಿಳೆಯರು' ಶೀರ್ಷಿಕೆಯ ಛಾಯಾಚಿತ್ರ ಪ್ರದರ್ಶನದ ಭಾಗವಾಗಿದ್ದು, ಇದರ ಅಡಿಯಲ್ಲಿ ಗ್ರಾಮೀಣ ಮಹಿಳೆಯರು ಮಾಡುವ ವಿವಿಧ ಕಾರ್ಯಗಳನ್ನು ಚಿತ್ರರೂಪದಲ್ಲಿ ದಾಖಲಿಸಲಾಗಿದೆ. ಈ ಎಲ್ಲಾ ಚಿತ್ರಗಳನ್ನು ಪಿ.ಸಾಯಿನಾಥ್ ಅವರು 1993ರಿಂದ 2002ರ ನಡುವೆ ತಮ್ಮ 10 ರಾಜ್ಯಗಳಲ್ಲಿನ ಓಡಾಟದಲ್ಲಿ ತೆಗೆದಿದ್ದಾರೆ. ಇಲ್ಲಿ, ಪರಿ ಈ ಛಾಯಾಚಿತ್ರ ಪ್ರದರ್ಶನದ ಡಿಜಿಟಲ್ ಪ್ರಾತಿನಿಧ್ಯವನ್ನು ಸೃಜನಾತ್ಮಕವಾಗಿ ರಚಿಸಿದೆ, ಇದನ್ನು ಹಲವು ವರ್ಷಗಳಿಂದ ದೇಶದ ಬಹುತೇಕ ಭಾಗಗಳಲ್ಲಿ ಪ್ರದರ್ಶಿಸಲಾಗಿದೆ.
ದನ ಮನೆಗೆ ಬರುವವರೆಗೆ…
ಬಿಹಾರದ ಈ ಮಹಿಳೆ ಹಸುವಿನ ದುಂಡಗಿನ ಸಗಣಿ ಚೆಂಡುಗಳನ್ನು ತಯಾರಿಸುತ್ತಿದ್ದು, ರಾಷ್ಟ್ರೀಯ ಆರ್ಥಿಕತೆಗೆ ಅದ್ಭುತ ಕೊಡುಗೆ ನೀಡುತ್ತಿದ್ದಾರೆ. ಆದರೆ, ಅದನ್ನು ನಮ್ಮ ಜಿಡಿಪಿಯಲ್ಲಿ ಲೆಕ್ಕ ಹಾಕಲಾಗುವುದಿಲ್ಲ. ಹಸುವಿನ ಸಗಣಿಯನ್ನು ಇಂಧನವಾಗಿ ಬಳಸುವ ಲಕ್ಷಾಂತರ ಕುಟುಂಬಗಳು ಅದರ ಬದಲಿಗೆ ಅನಿಲ ಅಥವಾ ತೈಲ ಉರಿಸಲು ಆರಂಭಿಸಿದರೆ, ದುರಂತದ ಪರಿಸ್ಥಿತಿ ಉದ್ಭವಿಸುತ್ತದೆ. ಭಾರತವು ಯಾವುದೇ ಇತರ ಸರಕುಗಳಿಗಿಂತ ಪೆಟ್ರೋಲಿಯಂ ಮತ್ತು ಅದರ ಉತ್ಪನ್ನಗಳ ಆಮದಿನ ಮೇಲೆ ಹೆಚ್ಚು ವಿದೇಶಿ ವಿನಿಮಯವನ್ನು ಖರ್ಚು ಮಾಡುತ್ತದೆ. 1999-2000 ವರ್ಷದಲ್ಲಿ, ಈ ಮೊತ್ತವು ರೂ 47,421 ಕೋಟಿಯಷ್ಟಿತ್ತು.
ಇದು ಆಹಾರ, ಖಾದ್ಯ ತೈಲಗಳು, ಔಷಧಿ ಮತ್ತು ಔಷಧೀಯ ಉತ್ಪನ್ನಗಳು, ರಾಸಾಯನಿಕಗಳು, ಕಬ್ಬಿಣ ಮತ್ತು ಉಕ್ಕಿನ ಆಮದುಗಳ ಮೇಲೆ ನಾವು ಖರ್ಚು ಮಾಡುವ ವಿದೇಶಿ ವಿನಿಮಯದ ಮೂರು ಪಟ್ಟು ಹೆಚ್ಚು. ಪೆಟ್ರೋಲಿಯಂ ಮತ್ತು ಅದರ ಉತ್ಪನ್ನಗಳಿಗೆ ನಾವು ಖರ್ಚು ಮಾಡುವ ಮೊತ್ತವು ನಮ್ಮ ಒಟ್ಟು ಆಮದು ಮೊತ್ತದ ಸುಮಾರು ಕಾಲು ಭಾಗದಷ್ಟು ಇರುತ್ತದೆ.
ಇದು ನಾವು ರಸಗೊಬ್ಬರ ಆಮದಿನ ಮೇಲೆ ಖರ್ಚು ಮಾಡುವ ವಿದೇಶಿ ವಿನಿಮಯದ ಸುಮಾರು ಎಂಟು ಪಟ್ಟು ಹೆಚ್ಚು, ಅಂದರೆ $1.4 ಬಿಲಿಯನ್. ಸಗಣಿಯು ಒಂದು ಪ್ರಮುಖ ಸಾವಯವ ಗೊಬ್ಬರವಾಗಿದ್ದು, ಲಕ್ಷಾಂತರ ಜನರು ಬೆಳೆಗಳನ್ನು ಬೆಳೆಯಲು ಬಳಸುತ್ತಾರೆ. ಆದ್ದರಿಂದ, ಆ ವಿಭಾಗದಲ್ಲಿ ನಮಗಾಗಿ ಲೆಕ್ಕವಿಲ್ಲದಷ್ಟು ಮೊತ್ತವನ್ನು ಉಳಿಸಲು ಇದು ಕೆಲಸ ಮಾಡುತ್ತಿದೆ. ಇದು ಕೀಟನಾಶಕವಾಗಿಯೂ ಕಾರ್ಯನಿರ್ವಹಿಸುತ್ತದೆ. ಇದಷ್ಟೇ ಅಲ್ಲದೆ, ಇನ್ನೂ ಅನೇಕ ಉಪಯೋಗಗಳನ್ನು ಹೊಂದಿದೆ. ನಿಮಗೆ ಬೇಕಾದ ರೀತಿಯಲ್ಲಿ ಅದನ್ನು ಬಳಸಿಕೊಳ್ಳಬಹುದು. ದೇಶಾದ್ಯಂತ ಹಸುವಿನ ಸಗಣಿ ಸಂಗ್ರಹಿಸುವ ಮಹಿಳೆಯರಿದ್ದಾರೆ - ಮತ್ತು ಇದು 'ಮಹಿಳೆಯರ ಕೆಲಸ' – ಈ ಮೂಲಕ ಭಾರತಕ್ಕೆ ಲಕ್ಷಾಂತರ, ಬಹುಶಃ ಶತಕೋಟಿ ಡಾಲರ್ಗಳನ್ನು ವರ್ಷಕ್ಕೆ ಉಳಿಸುತ್ತಿದ್ದಾರೆ. ಆದರೆ ಹಸುವಿನ ಸಗಣಿ ಸ್ಟಾಕ್ ಎಕ್ಸ್ಚೇಂಜಿನಲ್ಲಿ ನೋಂದಾಯಿಸಲ್ಪಟ್ಟಿಲ್ಲದ ಕಾರಣ, ಮತ್ತು ಬಹುಶಃ ಅವರು ಅದನ್ನು ಸಂಗ್ರಹಿಸುವ ಮಹಿಳೆಯರ ಜೀವನದ ಬಗ್ಗೆ ಸ್ವಲ್ಪ ತಿಳಿದಿರುವ ಅಥವಾ ಅವರ ಕುರಿತು ಕಾಳಜಿ ವಹಿಸದ ಕಾರಣ - ಮುಖ್ಯವಾಹಿನಿಯ ಅರ್ಥಶಾಸ್ತ್ರಜ್ಞರು ಎಂದಿಗೂ ಅದರ ಬಗ್ಗೆ ಗಮನ ಹರಿಸುವುದಿಲ್ಲ. ಈ ಜನರು ಈ ರೀತಿಯ ಶ್ರಮವನ್ನು ನೋಡುವುದಿಲ್ಲ ಅಥವಾ ಗೌರವಿಸುವುದಿಲ್ಲ.




