"ಶಾಲೆಗೆ ಹೋಗುವ ಮೊದಲು ನಾನು ದಿನಾ ಈ ಕೆಲಸಗಳನ್ನು ಮಾಡಬೇಕು. ಬೇರೆ ಯಾರಿದ್ದಾರೆ ಮಾಡುವುದಕ್ಕೆ?" ಎಂದು ತಾಯಿಯ ಹಾಲನ್ನು ಕುಡಿಯಲು ಎಳೆ ಕರುವಿನ ಹಗ್ಗವನ್ನು ಬಿಚ್ಚುತ್ತಾ 15 ವರ್ಷ ಪ್ರಾಯದ ಕಿರಣ್ ಕೇಳುತ್ತಾಳೆ. ಮುಂಜಾನೆ ಐದು ಗಂಟೆಯ ಹೊತ್ತು. ಅನಾರೋಗ್ಯ ಪೀಡಿತ ತಾಯಿ ಮತ್ತು ತಮ್ಮ ರವಿ ಇನ್ನೂ ಕೋಣೆಯಲ್ಲಿ ಮಲಗಿದ್ದಾರೆ. ಮನೆಯನ್ನು ಸ್ವಚ್ಛಗೊಳಿಸುವ ಮೊದಲು ಅವಳು ಕರುವನ್ನು ಮತ್ತೆ ಹಟ್ಟಿಯಲ್ಲಿ ಕಟ್ಟಿಹಾಕಬೇಕು. ಆ ನಂತರ ಅವಳ ಅಜ್ಜ ಹಾಲು ಕರೆಯಲು ಬರುತ್ತಾರೆ.
ಎಂದಿನಂತೆ ಬೇಗ ಎದ್ದ ಕಿರಣ್ ಗೆ ಅಂದು ಕೆಲಸ ಮಾಡಲಾಗಲೀ, ಶಾಲೆಗೆ ಹೋಗಲಾಗಲೀ ಸಾಧ್ಯವಿರಲಿಲ್ಲ. ಅದು ಅವಳ ಋತುಚಕ್ರದ ಮೊದಲ ದಿನವಾದ್ದರಿಂದ ಆಯಾಸ ಹೆಚ್ಚಾಗಿತ್ತು. ಸಾಂಕ್ರಾಮಿಕ ರೋಗದಿಂದಾಗಿ ಅವಳಿಗೆ ವಿಪರೀತ ಹೊಟ್ಟೆ ನೋವು ಕೂಡ ಇತ್ತು. ಆದರೆ ಅವಳು ತನ್ನ ಕೆಲಸಗಳನ್ನು 6.30 ಗಂಟೆಗೆ ಮುನ್ನ ಮುಗಿಸಲೇ ಬೇಕು. "ಬೆಳಿಗ್ಗಿನ ಅಸೆಂಬ್ಲಿ 7 ಗಂಟೆಗೆ ಆರಂಭವಾಗುತ್ತದೆ. ಅಲ್ಲದೇ, ಶಾಲೆಗೆ ಹೋಗಲು ನನಗೆ 20-25 ನಿಮಿಷಗಳು ಬೇಕು" ಎಂದು ಅವಳು ಹೇಳುತ್ತಾಳೆ.
11 ನೇ ತರಗತಿಯಲ್ಲಿ ಓದುತ್ತಿರುವ ಕಿರಣ್ ದೇವಿಯ ಸರ್ಕಾರಿ ಶಾಲೆ ಉತ್ತರ ಪ್ರದೇಶದ ಚಿತ್ರಕೂಟ ಜಿಲ್ಲೆಯ ಕಾರ್ವಿ ತಹಸಿಲ್ನಲ್ಲಿರುವ ಅವಳ ಮನೆಯಿಂದ 2 ಕಿಲೋಮೀಟರ್ ದೂರದಲ್ಲಿದೆ. ಅವಳು ತನ್ನ ಸಹೋದರ ರವಿ, 40 ವರ್ಷ ಪ್ರಾಯದ ತಾಯಿ ಪೂನಂ ದೇವಿ ಮತ್ತು 67 ವರ್ಷದ ಅಜ್ಜ ಖುಷಿರಾಮ್ ಅವರೊಂದಿಗೆ ಇಲ್ಲಿ ವಾಸಿಸುತ್ತಾಳೆ. ಅವಳ ಅಜ್ಜ ಮನೆಯ ಹಿಂದಿರುವ ತನ್ನ ಕುಟುಂಬಕ್ಕೆ ಸೇರಿದ 800 ಚದರ ಅಡಿ ಜಾಗವನ್ನು ನೋಡಿಕೊಂಡು ಗೋಧಿ, ಕಡ್ಲೆ ಮತ್ತು ಕೆಲವೊಮ್ಮೆ ಕಾಲೋಚಿತವಾದ ತರಕಾರಿಗಳನ್ನು ಬೆಳೆಯುತ್ತಾರೆ. ಪೂನಂ ಅವರಿಗೆ ಮಣಿಕಟ್ಟು ಮತ್ತು ಮೊಣಕಾಲುಗಳ ವಿಪರೀತ ನೋವಿದೆ. ಇದರಿಂದಾಗಿ ಮನೆಯಲ್ಲಿ ಕೆಲಸ ಮಾಡಲು ಇವರಿಗೆ ಸಾಧ್ಯವೇ ಇಲ್ಲ. ಹೀಗಾಗಿ ಈ ಎಲ್ಲಾ ಕೆಲಸಗಳ ಜವಾಬ್ದಾರಿಯೂ ಕಿರಣ್ ಮೇಲಿದೆ.
ಕಿರಣ್ಗೆ ದಿನದಿನದ ಕೆಲಸಗಳು ಒಂದು ರೀತಿಯ ಯಾತನಾಮಯ ಕಸರತ್ತಾಗಿ ಹೋಗಿವೆ. "ಈ ಸಣ್ಣ ಕೆಲಸಗಳನ್ನು ಮಾಡಲು ನನಗೇನೂ ಅಡ್ಡಿಯಿಲ್ಲ, ಆದರೆ ಮುಟ್ಟಿನ ಸಮಯದಲ್ಲಿ ತುಂಬಾ ಕಷ್ಟವಾಗುತ್ತದೆ.”












