ಕೆಲವು ತಿಂಗಳ ಹಿಂದೆ ವರ್ಸೊವ ಜೆಟ್ಟಿಯ ಮುಂಜಾನೆಯೊಂದರಲ್ಲಿ, ಬಂಡೆಯೊಂದರ ಕೊರಕಲಿನ ತುದಿಯಲ್ಲಿ ಕುಳಿತಿದ್ದ ರಾಂಜಿಭಾಯ್ ಅವರನ್ನು ಏನು ಮಾಡುತ್ತಿದ್ದೀರೆಂದು ಪ್ರಶ್ನಿಸಿದೆ. “ಹೀಗೇ ಸಮಯ ದೂಡುತ್ತಿದ್ದೇನೆ”ಎಂದು ಉತ್ತರಿಸಿದ ಆತ, ಆಗ ತಾನೇ ಹಿಡಿದಿದ್ದ ತೆಂಗ್ಡ (ಹೆಮ್ಮೀನಿನ ಒಂದು ಪ್ರಕಾರ) ಮೀನಿನೆಡೆಗೆ ಕೈ ತೋರಿಸುತ್ತಾ, “ಇದನ್ನು ಮನೆಗೆ ಒಯ್ದು ತಿನ್ನುತ್ತೇನೆ”ಎಂದರು. ಹಿಂದಿನ ರಾತ್ರಿ, ಕಡಲ ಖಾರಿಯಲ್ಲಿ ಒಡ್ಡಿದ್ದ ಬಲೆಯನ್ನು ಇತರೆ ಮೀನುಗಾರರು ಸ್ವಚ್ಛಗೊಳಿಸುತ್ತಿದ್ದುದನ್ನು ನೋಡಿದೆ. ಅವರು ಒಡ್ಡಿದ್ದ ಬಲೆಯಲ್ಲಿ ಪ್ಲಾಸ್ಟಿಕ್ ನ ರಾಶಿಯು ಸಿಲುಕಿತ್ತೇ ಹೊರತು ಅದರಲ್ಲಿ ಒಂದು ಮೀನೂ ಇರಲಿಲ್ಲ.
ಉತ್ತರ ಮುಂಬೈನ ಕೆ-ಪಶ್ಚಿಮ ಮೊಹಲ್ಲಾದಲ್ಲಿನ ಮೀನುಗಾರರ ಗ್ರಾಮ, ವರ್ಸೊವ ಕೊಲಿವಾಡಾದಲ್ಲಿ 70ಕ್ಕೂ ಹೆಚ್ಚು ವರ್ಷಗಳಿಂದ ನೆಲೆಸಿರುವ ಭಗ್ವಾನ್ ನಾಮ್ದೇವ್ ಭಂಜಿ ಅವರು, “ಇಂದು ಖಡಿಯಲ್ಲಿ (ಕಡಲ ಖಾರಿ) ಮೀನು ಹಿಡಿಯಲು ಸಾಧ್ಯವಿಲ್ಲ. ನಾವು ಚಿಕ್ಕವರಿದ್ದಾಗ ಇಲ್ಲಿನ ಕಡಲ ತೀರವು ಮಾರಿಷಸ್ನ ಕಡಲ ತೀರವನ್ನು ಹೋಲುತ್ತಿದ್ದು, ನೀರಿನಲ್ಲಿ ಎಸೆದ ನಾಣ್ಯವನ್ನು ಕಾಣಬಹುದಾಗಿದ್ದು, ನೀರು ಅಷ್ಟು ಸ್ವಚ್ಛವಾಗಿತ್ತು”ಎಂದು ತಿಳಿಸಿದರು.
ಭಗವಾನ್ ನ ನೆರೆಹೊರೆಯವರು ಬಲೆಗಳನ್ನು ಬೀಸಿ ಮೀನುಗಳನ್ನು ಹಿಡಿಯುತ್ತಿದ್ದರು. ಈಗೀಗ ಬಲೆಗಳನ್ನು ಸಮುದ್ರದಲ್ಲಿ ಆಳವಾಗಿ ಬೀಸಲಾಗುತ್ತದೆ. ಅವು ಚಿಕ್ಕವೂ ಹೌದು. “ಮೊದಲೆಲ್ಲಾ ನಮಗೆ ದೊಡ್ಡ ಮಂಜಿ ಮೀನುಗಳು ದೊರೆಯುತ್ತಿದ್ದವು. ಆದರೀಗ ಚಿಕ್ಕ ಮಂಜಿ ಮೀನುಗಳು ಮಾತ್ರವೇ ದೊರೆಯುತ್ತಿವೆ. ಇದು ನಮ್ಮ ಉದ್ಯಮದ ಮೇಲೆ ಮಹತ್ತರ ಪರಿಣಾಮವನ್ನು ಬೀರಿದೆ”ಎನ್ನುತ್ತಾರೆ ಕಳೆದ 25 ವರ್ಷಗಳಿಂದಲೂ ಮೀನಿನ ಮಾರಾಟದಲ್ಲಿ ತೊಡಗಿರುವ ಭಗ್ವಾನ್ ರ ಸೊಸೆ 48ರ ಪ್ರಿಯ ಭಾಂಜಿ.
ಕೊಲಿವಾಡದಲ್ಲಿ ಮೀನುಗಾರಿಕೆಯಲ್ಲಿ ನಿರತವಾದ 1,072 ಕುಟುಂಬಗಳು ಅಥವ 4,943 ಜನರಿದ್ದು (2010ರ ಕಡಲ ಮೀನುಗಾರಿಕಾ ಗಣತಿ) ಕಾಣೆಯಾಗುತ್ತಿರುವ ಅಥವ ಕ್ಷೀಣಿಸುತ್ತಿರುವ ಮತ್ಸ್ಯ ಸಂಪತ್ತಿನ ಬಗ್ಗೆ ಕಥೆಯೊಂದಿದೆ. ಇದಕ್ಕೆ ಅವರು ನೀಡುವ ಕಾರಣವು ಸ್ಥಳೀಯ ಮಟ್ಟದ ಮಾಲಿನ್ಯದಿಂದ ತೊಡಗಿ, ಜಾಗತಿಕ ಮಟ್ಟದ ತಾಪಮಾನದವರೆಗೂ ವ್ಯಾಪಿಸಿದೆ. ಈ ಎರಡೂ ಕಾರಣಗಳಿಂದಾಗಿ ವರ್ಸೊವದಲ್ಲಿನ ತೀರಗಳಲ್ಲಿನ ಹವಾಮಾನದಲ್ಲಿ ಬದಲಾವಣೆಗಳುಂಟಾಗಿವೆ.











