ಡಾ.ಬಿ.ಆರ್.ಅಂಬೇಡ್ಕರ್ ಅವರು ಭಾರತೀಯ ರಾಜಕೀಯದ ಕ್ಷಿತಿಜದಲ್ಲಿ ಪ್ರಮುಖ ವ್ಯಕ್ತಿಯಾಗಿ ಹೊರಹೊಮ್ಮಿದ ನಂತರ ಮಹಾರಾಷ್ಟ್ರದುದ್ದಕ್ಕೂ ಜ್ಞಾನೋದಯಕ್ಕಾಗಿ ಅವರ ಚಳುವಳಿಯನ್ನು ಪ್ರಚಾರ ಮಾಡುವ ಮತ್ತು ಪ್ರಸಾರ ಮಾಡುವ ನಿಟ್ಟಿನಲ್ಲಿ ಶಾಹಿರ್ ಗಳನ್ನು ಬರೆಯುವವರು,ಕವಿಗಳು-ಗಾಯಕರು ಮಹತ್ವದ ಪಾತ್ರವನ್ನು ವಹಿಸಿದರು. ಅವರ ಜೀವನ, ಸಂದೇಶ ಮತ್ತು ದಲಿತ ಹೋರಾಟಗಳಲ್ಲಿನ ಅವರ ಪಾತ್ರವನ್ನು ಎಲ್ಲರಿಗೂ ಅರ್ಥವಾಗುವ ಭಾಷೆಯಲ್ಲಿ ವಿವರಿಸಿದರು. ಅವರು ಹಾಡಿದ ಹಾಡುಗಳು ಹಳ್ಳಿಗಳಲ್ಲಿ ದಲಿತರಿಗೆ ಒಂದು ರೀತಿ ಏಕೈಕ ವಿಶ್ವವಿದ್ಯಾನಿಲಯವಾಗಿದ್ದು, ಅವರ ಮೂಲಕ ಮುಂದಿನ ಪೀಳಿಗೆ ಬುದ್ಧ ಮತ್ತು ಅಂಬೇಡ್ಕರ್ ಅವರ ವಿಚಾರಗಳ ಬಗ್ಗೆ ತಿಳಿಯುವಂತಾಗಿದೆ.


Beed, Maharashtra
|FRI, APR 15, 2022
ಅಂಬೇಡ್ಕರ್ ಸ್ಫೂರ್ತಿ: ಸಾಳ್ವೆಯವರ ವಿಮೋಚನಾ ಗೀತೆ
ಅಂಬೇಡ್ಕರ್ ಜಯಂತಿ ಪ್ರಯುಕ್ತ ಶಾಹಿರ್ ಆತ್ಮಾರಾಮ್ ಸಾಳ್ವೆಯವರ ಕವಿತೆ ಕೇಳುಗರಿಗೆ ಈ ಹಿಂದಿನ ಎಲ್ಲ ಹಳೆಯ ಮಾರ್ಗಗಳನ್ನು ತೊರೆದು ಬಾಬಾಸಾಹೇಬರು ತೋರಿಸಿದ ದಾರಿಯಲ್ಲಿ ಮುನ್ನಡೆಯಲು ಪ್ರೇರೇಪಿಸುತ್ತದೆ
Author
Illustration
Translator

ಆತ್ಮಾರಾಮ್ ಸಾಳ್ವೆ (1953-1991) ಶಾಹಿರ್ಗಳ ಬಳಗಕ್ಕೆ ಸೇರಿದವರು, ಅವರು 70ರ ಪ್ರಕ್ಷುಬ್ಧ ದಶಕದಲ್ಲಿ ಪುಸ್ತಕಗಳ ಮೂಲಕ ಬಾಬಾಸಾಹೇಬರ ಚಿಂತನೆಗಳನ್ನು ಪರಿಚಯಿಸಿದರು.ಸಾಳ್ವೆಯವರ ಜೀವನವು ಡಾ.ಅಂಬೇಡ್ಕರ್ ಮತ್ತು ಅವರ ವಿಮೋಚನೆಯ ಸಂದೇಶವಾಗಿದೆ.ಅವರ ಪ್ರಖರ ಕಾವ್ಯವು ಎರಡು ದಶಕಗಳ ಕಾಲದ ನಮಂತರ್ ಆಂದೋಲನವನ್ನು ರೂಪಿಸಿತು.ಇದು ಮರಾಠವಾಡ ವಿಶ್ವವಿದ್ಯಾಲಯವನ್ನು ಡಾ.ಅಂಬೇಡ್ಕರ್ ಅವರ ಹೆಸರಿನಲ್ಲಿ ಮರುನಾಮಕರಣ ಮಾಡುವ ಚಳುವಳಿಯಾಗಿ ರೂಪುಗೊಳ್ಳುವುದರ ಮೂಲಕ ಮರಾಠವಾಡ ಪ್ರದೇಶವನ್ನು ಜಾತಿ ಯುದ್ಧಗಳ ರಣಾಂಗಣವನ್ನಾಗಿ ಪರಿವರ್ತಿಸಿತು. ಅವರ ಕಂಠ, ಮಾತು, ಶಾಹಿರಿಗಳ ಮೂಲಕ ಸಾಳ್ವೆ ದಬ್ಬಾಳಿಕೆಯ ವಿರುದ್ಧ ಜ್ಞಾನಜ್ಯೋತಿಯನ್ನು ಹೊತ್ತೊಯ್ದರು, ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಮಹಾರಾಷ್ಟ್ರದ ಹಳ್ಳಿಗಳುದ್ದಕ್ಕೂ ಪಾದಯಾತ್ರೆಯನ್ನು ಮಾಡಿದರು.ಮತ್ತು ಆತ್ಮರಾಮ್ ಅವರ ಹಾಡನ್ನು ಕೇಳಲು ಸಾವಿರಾರು ಜನರು ಸೇರುತ್ತಿದ್ದರು.ಕೊನೆಗೆ ವಿಶ್ವವಿದ್ಯಾನಿಲಯದ ಹೆಸರನ್ನು ಅಧಿಕೃತವಾಗಿ ಬದಲಾಯಿಸಿದಾಗ, ನಾನು ವಿಶ್ವವಿದ್ಯಾನಿಲಯದ ಪ್ರವೇಶದ ಕಮಾನಿನ ಮೇಲೆ ಸುವರ್ಣಾಕ್ಷರಗಳಲ್ಲಿ ಅಂಬೇಡ್ಕರ್ ಅವರ ಹೆಸರನ್ನು ಬರೆಯುತ್ತೇನೆ ಎಂದು ಅವರು ಹೇಳುತ್ತಿದ್ದರು.
ಶಾಹಿರ್ ಆತ್ಮಾರಾಮ್ ಸಾಳ್ವೆ ಅವರ ಪ್ರಖರ ಮಾತುಗಳು ಮರಾಠವಾಡದ ದಲಿತ ಯುವಕರನ್ನು ಇಂದಿಗೂ ಜಾತಿ ದಬ್ಬಾಳಿಕೆಯ ವಿರುದ್ಧದ ಹೋರಾಟದಲ್ಲಿ ಪ್ರೇರೇಪಿಸುತ್ತವೆ. ಬೀಡ್ ಜಿಲ್ಲೆಯ ಫುಲೆ ಪಿಂಪಲ್ಗಾಂವ್ ಗ್ರಾಮದ 27 ವರ್ಷದ ವಿದ್ಯಾರ್ಥಿ ಸುಮಿತ್ ಸಾಳ್ವೆ, ಆತ್ಮರಾಮ್ ಎಂದರೆ ತಮಗೆ ಏನು ಎನ್ನುವುದನ್ನು ವಿವರಿಸಲು ಹೊರಟರೆ "ಇಡೀ ರಾತ್ರಿ ಮತ್ತು ಇಡೀ ದಿನ ಸಾಕಾಗುವುದಿಲ್ಲ" ಎಂದು ಹೇಳುತ್ತಾರೆ.ಡಾ.ಅಂಬೇಡ್ಕರ್ ಮತ್ತು ಆತ್ಮರಾಮ್ ಸಾಳ್ವೆ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದ ಸುಮಿತ್ ಅವರು ಆತ್ಮರಾಮ್ ಅವರ ಸ್ಮರಣೀಯ ಗೀತೆಯನ್ನು ಪ್ರಸ್ತುತಪಡಿಸಿದರು, ಕೇಳುಗರಿಗೆ ಅಂಬೇಡ್ಕರ್ ಅವರ ಮಾರ್ಗವನ್ನು ಅನುಸರಿಸಲು ಮತ್ತು ಹಳೆಯ ಮಾರ್ಗಗಳನ್ನು ತ್ಯಜಿಸಲು ಪ್ರೇರೇಪಿಸಿದರು."ಎಷ್ಟು ದಿನ ಅಂತ ನೀವು ಹಳೆ ಕಂಬಳಿಯನ್ನು ಸುತ್ತಿಕೊಂಡಿರುತ್ತೀರಿ ?" ಎಂಬ ಪ್ರಶ್ನೆಯೊಂದಿಗೆ ತಮ್ಮ ಪ್ರೇಕ್ಷಕರನ್ನು ಪ್ರಚೋದಿಸುತ್ತಾ, 'ಸಂವಿಧಾನವನ್ನು ತನ್ನ ಸೂತ್ರವನ್ನಾಗಿಸಿ, ನಿಮ್ಮ ರಕ್ಷಕ ಭೀಮನು ಗುಲಾಮಗಿರಿಯ ಸಂಕೋಲೆಗಳನ್ನು ಮುರಿದನು’ ಎನ್ನುವ ಶಾಹಿರ್ ನ್ನು ಅವರು ನಮಗೆ ನೆನಪಿಸುತ್ತಾರೆ. ಸುಮಿತ್ ಹಾಡನ್ನು ಇಲ್ಲಿ ಕೇಳಿ.
ಸಂವಿಧಾನವನ್ನೇ ತನ್ನ ಸೂತ್ರವನ್ನಾಗಿಸಿದ
ನಿನ್ನ ರಕ್ಷಕ ಭೀಮನು
ಗುಲಾಮಗಿರಿಯ ಸಂಕೋಲೆಯನ್ನು ಮುರಿದನು
ನಿನ್ನ ಸುತ್ತಲೂ ಎಷ್ಟು ದಿನ ಅಂತ ಹಳೆ ಕಂಬಳಿಯನ್ನು ಸುತ್ತಿಕೊಂಡಿರುತ್ತಿಯಾ?
ನಿನ್ನ ಜೀವನ ಛಿದ್ರವಾಗಿದ್ದಾಗ
ಭೀಮಜಿ ನಿನ್ನನ್ನು ಮನುಷ್ಯನನ್ನಾಗಿ ಪರಿವರ್ತಿಸಿದ
ನನ್ನ ಮಾತು ಕೇಳು ಮೂರ್ಖ
ನಿನ್ನ ಗಡ್ಡ ಮತ್ತು ಕೂದಲು ಬೆಳೆಯುವುದನ್ನು ನಿಲ್ಲಿಸು
ರನೋಬಾ ಅಂದ ಭಕ್ತನೇ
ನಿನ್ನ ಸುತ್ತಲೂ ಎಷ್ಟು ದಿನ ಅಂತ ಹಳೆ ಕಂಬಳಿಯನ್ನು ಸುತ್ತಿಕೊಂಡಿರುತ್ತಿಯಾ?
ಕಂಬಳಿಯು ನಾಲ್ಕು ವರ್ಣಗಳ ಕೂಡಿತ್ತು
ಅದನ್ನು ಭೀಮನು ಸುಟ್ಟು ಶಕ್ತಿಹೀನಗೊಳಿಸಿದನು
ನೀನು ಬುದ್ಧನಗರಿಯಲ್ಲಿ ವಾಸಿಸುತ್ತಿದ್ದಿಯಾ
ಆದರೆ ಬೇರೆಡೆ ಇರಲು ಬಯಸುತ್ತಿಯಾ
ಹೀಗಾದ್ರೆ ಭೀಮವಾಡಿ [ದಲಿತ ವಸ್ತಿ] ಒಳ್ಳೆಯ ದಿನಗಳನ್ನು ಕಾಣುವುದಾದರು ಹೇಗೆ ಹೇಳು?
ನಿನ್ನ ಸುತ್ತಲೂ ಎಷ್ಟು ದಿನ ಅಂತ ಹಳೆ ಕಂಬಳಿಯನ್ನು ಸುತ್ತಿಕೊಂಡಿರುತ್ತಿಯಾ?
ನಿನ್ನ ಕಂಬಳಿಯಲ್ಲಿನ ಹೇನುಗಳಿಂದ ಕೆದರಿದ ಕೂದಲಿಗೆ ಸೋಂಕು ತಗುಲಿದೆ
ನೀನು ನಿಮ್ಮ ಮನೆ ಮತ್ತು ಮಠದಲ್ಲಿ ರಾಣೋಬಾ ಪೂಜಿಸುತ್ತಲೇ ಇರುತ್ತಿಯಾ
ಅಜ್ಞಾನದ ಮಾರ್ಗವನ್ನು ಬಿಟ್ಟು ಬಿಡು
ಸಾಳ್ವೆಯನ್ನು ನಿನ್ನ ಗುರುವಾಗಿ ಮಾಡಿಕೋ
ಜನರ ದಾರಿ ತಪ್ಪಿಸುವುದನ್ನು ನಿಲ್ಲಿಸಬೇಕು, ಅಲ್ಲವೇ?
ನಿನ್ನ ಸುತ್ತಲೂ ಎಷ್ಟು ದಿನ ಅಂತ ಹಳೆ ಕಂಬಳಿಯನ್ನು ಸುತ್ತಿಕೊಂಡಿರುತ್ತಿಯಾ?
ಈ ವೀಡಿಯೊ ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ ಸಹಯೋಗದೊಂದಿಗೆ ಇಂಡಿಯಾ ಫೌಂಡೇಶನ್ ಫಾರ್ ದಿ ಆರ್ಟ್ಸ್ನ ತಮ್ಮ ಆರ್ಕೈವ್ಸ್ ಮತ್ತು ಮ್ಯೂಸಿಯಮ್ಸ್ ಕಾರ್ಯಕ್ರಮದಡಿಯಲ್ಲಿ ಜಾರಿಗೊಳಿಸಲಾದ ‘Influential Shahirs, Narratives from Marathwada’,' ಎಂಬ ಶೀರ್ಷಿಕೆಯ ಸಂಗ್ರಹದ ಭಾಗವಾಗಿದೆ. ಇದು ಗೋತೆ ಇನ್ಸ್ಟಿಟ್ಯೂಟ್/ಮ್ಯಾಕ್ಸ್ ಮುಲ್ಲರ್ ಭವನ ನವದೆಹಲಿಯ ಬೆಂಬಲದೊಂದಿಗೆ ಸಾಧ್ಯವಾಗಿದೆ.
ಅನುವಾದ: ಎನ್.ಮಂಜುನಾಥ್
Want to republish this article? Please write to [email protected] with a cc to [email protected]
Donate to PARI
All donors will be entitled to tax exemptions under Section-80G of the Income Tax Act. Please double check your email address before submitting.
PARI - People's Archive of Rural India
ruralindiaonline.org
https://ruralindiaonline.org/articles/ಅಂಬೇಡ್ಕರ್-ಸ್ಫೂರ್ತಿ-ಸಾಳ್ವೆಯವರ-ವಿಮೋಚನಾ-ಗೀತೆ

