ಪಾಟಲ್ಪರುದಲ್ಲಿ ಉಳಿದಿರುವ ಕೊನೆಯ ರೈತನೆಂದರೆ ಅದು ಉಜ್ವಲ್ ದಾಸ್. ಅಥವಾ ಅಲ್ಲಿ ಉಳಿದಿರುವ ಕೊನೆಯ ಕುಟುಂಬವೆಂದರೆ ಅವರ ಕುಟುಂಬ.
ಕಳೆದ ಅಕ್ಟೋಬರ್ ತಿಂಗಳಿನಲ್ಲಿ ಆನೆಗಳು ಅವರ ಮನೆಯ ಗೋಡೆಯನ್ನು ಬೀಳಿಸುವುದರೊಂದಿಗೆ ಈ ದಾಳಿಕೋರ ಆನೆಗಳು ಇದುವರೆಗೆ ಎಂಟು ಸಲ ಅವರ ಮನೆಯ ಗೋಡೆಯನ್ನು ಬೀಳಿಸಿದಂತಾಗಿದೆ.
ಅದು ಕೊಯ್ಲಿನ ಸಮಯ. ಅಷ್ಟೊತ್ತಿಗೆ ಆಷಾಢ ಮತ್ತು ಶ್ರಾವಣ ಮಾಸದ ಮಾನ್ಸೂನ್ ಕೂಡಾ ಬಂದಿತ್ತು. ಈ ಆನೆಗಳ ಹಿಂಡು ಬೆಟ್ಟ ಮತ್ತು ಕಾಡುಗಳ ಮೂಲಕ 200 ಕಿಲೋಮೀಟರ್ ನಡೆದು ಬೆಟ್ಟಗಳ ತಪ್ಪಲಿನಲ್ಲಿದ್ದ ಪಾಟಲ್ಪುರವನ್ನು ತಲುಪಿದ್ದವು. ಅವು ಮೊದಲಿಗೆ ಮಯೂರಾಕ್ಷಿಯ ಉಪನದಿಯಾದ ಸಿದ್ಧೇಶ್ವರಿ ದಡದಲ್ಲಿ ನಿಂತು ವಿಶ್ರಾಂತಿ ಪಡೆದವು. ಈ ಸ್ಥಳವು ಹಳ್ಳಿಯಿಂದ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿದೆ. ಸರಿಸುಮಾರು 200 ಕಿ.ಮೀ. ನಡಿಗೆಯ ದಣಿವನ್ನು ಆರಿಸಿಕೊಂಡ ನಂತರ ಆನೆಗಳು ಬೆಳೆದು ನಿಂತಿದ್ದ ಬೆಳೆಗಳ ಕಡೆ ಮುಖ ಮಾಡಿದವು.
ಚಂದನಾ ಮತ್ತು ಉಜ್ವಲಾ ದಾಸ್ ಅವರ ಕಿರಿಯ ಮಗ ಪ್ರೊಸೇನ್ಜೀತ್ ಹೇಳುತ್ತಾರೆ, “ನಾವು ನಮ್ಮ ಜೀವ ಪಣಕ್ಕಿಟ್ಟು ಅವುಗಳನ್ನು ಓಡಿಸಲು ಪಂಜು ಹಿಡಿದು ಓಡಿದೆವು. ಹಲವು ಬಾರಿ ಈ ಆನೆಗಳು ಬಂದು ಗದ್ದೆಗಳಲ್ಲಿನ [ಬೆಳೆದು ನಿಂತ] ಭತ್ತವನ್ನು ನಾಶಗೊಳಿವೆ. ಆನೆಗಳೇ ಪೂರ್ತಿ ಬೆಳೆಯನ್ನು ತಿಂದರೆ, ನಾವು ಏನನ್ನು ತಿನ್ನುವುದು?”
ದಾಸ್ ಕುಟುಂಬ ಕೇವಲ ಭತ್ತದ ನಷ್ಟದ ಬಗ್ಗೆ ಮಾತ್ರ ಚಿಂತಿಸುತ್ತಿಲ್ಲ. ಕುಟುಂಬವು ತಮ್ಮ 14 ಬಿಘಾ ಜಮೀನಿನಲ್ಲಿ (ಸುಮಾರು 8.6 ಎಕರೆ) ಆಲೂಗಡ್ಡೆ, ಸೋರೆಕಾಯಿ, ಟೊಮೆಟೊ ಮತ್ತು ಕುಂಬಳ, ಜೊತೆಗೆ ಬಾಳೆ ಮತ್ತು ಪಪ್ಪಾಯಿಯನ್ನು ಸಹ ಬೆಳೆಯುತ್ತದೆ.
ಹಾಗೆಯೇ ಉಜ್ವಲ್ ದಾಸ್ ತೀರಾ ಸಾಮಾನ್ಯ ರೈತರಲ್ಲ. ಅವರು ಬೆಳೆದ ಕುಂಬಳ ಬೆಳೆ ಅವರಿಗೆ ರಾಜ್ಯ ಪ್ರಶಸ್ತಿಯನ್ನು ತಂದು ಕೊಟ್ಟಿದೆ. ರಾಜ್ಯದ ಪ್ರತಿ ಬ್ಲಾಕ್ನ ಉತ್ತಮ ಕೃಷಿಕರನ್ನು ಗುರುತಿಸಿ ನೀಡಲಾಗುವ ಕೃಷಕ್ ರತ್ನ ಪ್ರಶಸ್ತಿ ಅವರಿಗೆ ದೊರಕಿದೆ. ಅವರು 2016 ಮತ್ತು 2022ರಲ್ಲಿ ರಾಜ್ನಗರ್ ವಿಭಾಗದ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಈ ಪ್ರಶಸ್ತಿಯು 10,000 ರೂ.ಗಳ ನಗದು ಬಹುಮಾನ ಮತ್ತು ಪ್ರಮಾಣಪತ್ರಗಳನ್ನು ಒಳಗೊಂಡಿದೆ.








