“ನನ್ನನ್ನು ಅನೇಕ ಬಾರಿ ಆನೆಗೆಳು ಅಟ್ಟಿಸಿಕೊಂಡು ಬಂದಿವೆ. ಆದರೆ ಇದುವರೆಗೆ ಅವುಗಳಿಂದಾಗಿ ನನಗೆ ಯಾವುದೇ ಹಾನಿ ಆಗಿಲ್ಲ” ಎಂದು ರವಿಕುಮಾರ್ ನೇತಮ್ ಮುಗುಳ್ನಗೆಯೊಂದಿಗೆ ಹೇಳುತ್ತಾರೆ.
25 ವರ್ಷದ ಈ ಗೊಂಡ ಆದಿವಾಸಿ ಅರ್ಸಿಕನ್ಹಾರ್ ಅರಣ್ಯದ ದಾರಿಯಲ್ಲಿ ನಡೆಯುತ್ತ ನಮ್ಮೊಂದಿಗೆ ಮಾತನಾಡುತ್ತಿದ್ದರು. ಉದಂತಿ ಸೀತಾನದಿ ಟೈಗರ್ ರಿಸರ್ವ್ ಪ್ರದೇಶದಲ್ಲಿ ಎಲಿಫಂಟ್ ಟ್ರ್ಯಾಕರ್ ಆಗಿ ಕೆಲಸ ಮಾಡುವ ಅವರು, ಲದ್ದಿ ಮತ್ತು ಹೆಜ್ಜೆ ಗುರುತಿನ ಮೂಲಕ ಆನೆಗಳ ಜಾಡನ್ನು ಪತ್ತೆ ಮಾಡಬಲ್ಲರು.
“ನಾನು ಕಾಡಿನ ನಡುವೆಯೇ ಹುಟ್ಟಿ ಬೆಳೆದವನು. ನನಗೆ ಇದನ್ನೆಲ್ಲ ಕಲಿಯಲು ಶಾಲೆಗೆ ಹೋಗಬೇಕಾದ ಅವಶ್ಯಕತೆಯಿಲ್ಲ” ಎಂದು ಧಮ್ತಾರಿ ಜಿಲ್ಲೆಯ ತೆನಾಹಿ ಗ್ರಾಮದ ರವಿ ಹೇಳುತ್ತಾರೆ. 12ನೇ ತರಗತಿಯವರೆಗೆ ಓದಿದ ಅವರು, ಸುಮಾರು ನಾಲ್ಕು ವರ್ಷಗಳ ಕೆಳಗೆ ಅರಣ್ಯ ಇಲಾಖೆಯಲ್ಲಿ ಅಗ್ನಿಶಾಮಕ ಸಿಬ್ಬಂದಿಯಾಗಿ ಕೆಲಸ ಮಾಡಲು ಪ್ರಾರಂಭಿಸಿದರು.
ಕಾಡಿನ ಒಳಗೆ ಅವರೊಂದಿಗೆ ನಡೆಯುತ್ತಿದ್ದರೆ, ಕೀಟಗಳ ಸದ್ದು ಕಾಡಿನ ಮೌನವನ್ನು ಆಗಾಗ ಕಲಕುತ್ತಿತ್ತು. ಸಾಲ್ (ಶೋರಿಯಾ ರೊಬಸ್ಟಾ) ಮತ್ತು ತೇಗ (ಟೆಕ್ಟೋನಾ ಗ್ರಾಂಡಿಸ್) ಮರಗಳ ನಡುವೆ ತೂರುವ ಗಾಳಿ ಸದ್ದು ಸಂಗೀತದಂತೆ ಕೇಳುತ್ತಿತ್ತು. ಮತ್ತೆ ಕೆಲವೊಮ್ಮೆ ಹಕ್ಕಿಗಳ ಸದ್ದು ಮತ್ತು ಕೊಂಬೆಗಳು ಮುರಿದು ಬೀಳುವ ಸದ್ದೂ ಕಿವಿಗೆ ಬೀಳುತ್ತಿದ್ದವು. ಎಲಿಫಂಟ್ ಟ್ರ್ಯಾಕಿಂಗ್ ಕೆಲಸ ಮಾಡುವವರು ಕಾಡಿದ ಸದ್ದು ಮತ್ತು ಕಾಣಬಹುದಾದ ಸುಳಿವುಗಳತ್ತ ಸದಾ ಗಮನಹರಿಸುತ್ತಿರಬೇಕು.












