“ಮೊಬೈಲ್, ಟಿವಿ, ವಿಡಿಯೋ ಗೇಮ್ಸ್ ಬಂದ ಮೇಲೆ ಬೊಂಬೆಯಾಟ ಹಾಗೂ ಕಥೆ ಹೇಳುವಂತಹ ಐತಿಹಾಸಿಕ ಸಂಪ್ರದಾಯಗಳು ತೆರೆಮರೆಗೆ ಸರಿಯುತ್ತಿವೆ” ಎನ್ನುವ ಪೂರಣ್ ಭಟ್ ರಾಜಸ್ಥಾನದ ಸಿಕಾರ್ ಜಿಲ್ಲೆಯ ದಂತಾ ರಾಮಗಢದ ಬೊಂಬೆಯಾಟ ಕಲಾವಿದ. ಮಕ್ಕಳ ಹುಟ್ಟು ಹಬ್ಬದ ಪಾರ್ಟಿಗಳು, ವಿವಾಹ ಸಮಾರಂಭಗಳು ಮತ್ತು ಸರ್ಕಾರಿ ಸಮಾರಂಭಗಳಲ್ಲಿ ಅವರು ತಮ್ಮದೇ ಆದ ಬೊಂಬೆಗಳನ್ನು ತಯಾರಿಸಿ ನಾಟಕಗಳನ್ನು ಪ್ರದರ್ಶಿಸಿದ ಸಮಯವನ್ನು 30 ವರ್ಷದ ಅವರು ನೆನಪಿಸಿಕೊಳ್ಳುತ್ತಾರೆ.
“ಇಂದು ಜನರು ಬೇರೆ ಬೇರೆ ರೀತಿಯ ಚಟುವಟಿಕೆಗಳನ್ನು ಬಯಸುತ್ತಿದ್ದಾರೆ. ಮೊದಲು ಹೆಂಗಸರು ಧೋಲಕ್ ಬಾರಿಸುತ್ತಾ ಹಾಡುತ್ತಿದ್ದರು. ಈಗ ಹಾರ್ಮೋನಿಯಂನಲ್ಲಿ ಸಿನೆಮಾ ಹಾಡುಗಳನ್ನು ಕೇಳಲು ಬಯಸುತ್ತಿದ್ದಾರೆ. ನಮಗೆ ಪ್ರೋತ್ಸಾಹ ಸಿಕ್ಕರೆ ನಮಗೆ ಪರಂಪರೆಯಿಂದ ಬಂದ ಕಲಾ ಪ್ರಕಾರವನ್ನನು ಮುಂದುವರೆಸಲು ಸಾಧ್ಯವಾಗುತ್ತದೆ” ಎಂದು ಅವರು ಹೇಳುತ್ತಾರೆ.
ಪೂರಣ್ ಭಟ್ ಆಗಸ್ಟ್ (2023) ತಿಂಗಳಿನಲ್ಲಿ ಜೈಪುರದ ಜವಾಹರ್ ಕಲಾ ಕೇಂದ್ರದಲ್ಲಿ ನಮ್ಮನ್ನು ಭೇಟಿಯಾಗಿದ್ದರು. ಇದು ಮೂರು ದಶಕಗಳಷ್ಟು ಹಳೆಯದಾದ ವಿವಿಧ ಕಲಾ ಪ್ರದರ್ಶನ ಕೇಂದ್ರ. ಸರ್ಕಾರಿ ಪ್ರಾಯೋಜಿತ ಉತ್ಸವವೊಂದರಲ್ಲಿ ಪಾಲ್ಗೊಳ್ಳುವ ಸಲುವಾಗಿ ಅಲ್ಲಿ ರಾಜಸ್ಥಾನದ ಹಲವೆಡೆಯ ಜಾನಪದ ತಂಡಗಳು ಅಲ್ಲಿ ಸೇರಿದ್ದವು. ಅದೇ ಉತ್ಸವದಲ್ಲಿ ತಮ್ಮ ಕಲೆ ಮತ್ತು ಜೀವನೋಪಾಯವನ್ನು ಉಳಿಸಿಕೊಳ್ಳಲು ಹೋರಾಡುತ್ತಿರುವ ಕಲಾವಿದರಿಗೆ ನೆರವಾಗಲು ಹೊಸ ಯೋಜನೆಯೊಂದನ್ನು ಸಹ ಘೋಷಿಸಿತು.
ಮುಖ್ಯಮಂತ್ರಿ ಲೋಕ ಕಲಾಕರ್ ಪ್ರೋತ್ಸಾಹನ್ ಯೋಜನೆ ಎಂದು ಕರೆಯಲ್ಪಡುವ ಈ ಯೋಜನೆ ಪ್ರತಿ ಜಾನಪದ ಕಲಾವಿದ ಕುಟುಂಬಕ್ಕೆ ಅವರ ಸ್ಥಳದಲ್ಲಿ ದಿನಕ್ಕೆ 500 ರೂ.ಗಳಂತೆ 100 ದಿನಗಳ ವಾರ್ಷಿಕ ಕೆಲಸವನ್ನು ಖಾತರಿಪಡಿಸುತ್ತದೆ. ಗ್ರಾಮೀಣ ಕುಟುಂಬಗಳಿಗೆ 100 ದಿನಗಳ ಉದ್ಯೋಗವನ್ನು ಖಾತ್ರಿಪಡಿಸಿದ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ 2005 ಇದಕ್ಕೆ ಸ್ಫೂರ್ತಿ ಒದಗಿಸಿದೆ.
ಕುಶಲಕರ್ಮಿಗಳು ಮತ್ತು ಕುಶಲಕರ್ಮಿಗಳಿಗಾಗಿ ಕೇಂದ್ರ ಸರ್ಕಾರದ ವಿಶ್ವಕರ್ಮ ಯೋಜನೆಯನ್ನು ಸೆಪ್ಟೆಂಬರ್ 2023ರಲ್ಲಿ ಘೋಷಿಸಲಾಗಿದೆ. ಆದರೆ ಇದು - ಕಲಾಕರ್ ಯೋಜನೆ - ಕಲ್ಬೆಲಿಯಾ, ತೇರಾ ತಾಲಿ, ಬಹ್ರುಪಿಯಾ ಮತ್ತು ಇತರ ಹಲವಾರು ಪ್ರದರ್ಶನ ಕಲಾ ಸಮುದಾಯಗಳಿಗೆ ಘೋಷಿಸಲಾಗಿರುವ ಮೊದಲ ಯೋಜನೆ. ರಾಜಸ್ಥಾನದಲ್ಲಿ ಸುಮಾರು 1-2 ಲಕ್ಷ ಜಾನಪದ ಕಲಾವಿದರಿದ್ದಾರೆ ಎಂದು ಕಾರ್ಯಕರ್ತರು ಅಂದಾಜಿಸಿದ್ದಾರೆ. ಆದರೆ ಇದುವರೆಗೆ ಯಾರೂ ಒಟ್ಟು ಎಣಿಕೆಯನ್ನು ಮಾಡಿಲ್ಲ. ಈ ಯೋಜನೆಯು ಗಿಗ್ ಕಾರ್ಮಿಕರು (ಸಾರಿಗೆ ಮತ್ತು ವಿತರಣೆ) ಮತ್ತು ಬೀದಿ ಬದಿ ವ್ಯಾಪಾರಿಗಳನ್ನು ಸಾಮಾಜಿಕ ಭದ್ರತಾ ಜಾಲದಡಿ ತರಲಿದೆ.










