ಮೊದಲು ಸರಿಯಾಗಿ ಮಳೆ ಸುರಿಯದೆ, ಆ ನಂತರ ಅಕಾಲಿಕ ಮಳೆ ಸುರಿದು ಚತ್ರಾದೇವಿಯವರು ಬೆಳೆದ ಬೆಳೆಗಳೆಲ್ಲಾ ನಾಶವಾದವು. “ನಾವು ಬಾಜ್ರಾ [ಸಜ್ಜೆ] ಬೆಳೆಯುತ್ತಿದ್ದೆವು. ಚೆನ್ನಾಗಿ ಫಸಲು ಬೆಳೆದಿತ್ತು. ಆದರೆ ನಮ್ಮ ಹೊಲಗಳಿಗೆ ನೀರು ಹಾಕಬೇಕಾದ ಸಮಯದಲ್ಲಿ ಮಳೆಯೇ ಬರಲಿಲ್ಲ. ಆ ನಂತರ ಸುಗ್ಗಿ ತಿಂಗಳಲ್ಲಿ ಸುರಿದ ಮಳೆಯಿಂದಾಗಿ ಬೆಳೆಯೆಲ್ಲಾ ನಾಶವಾಗಿ ಹೋಯ್ತು,” ಎಂದು ರಾಜಸ್ಥಾನದ ಕರೌಲಿ ಜಿಲ್ಲೆಯ ಖಿರ್ಖಿರಿ ಗ್ರಾಮದ 45 ವರ್ಷ ಪ್ರಾಯದ ಈ ರೈತ ಮಹಿಳೆ ಹೇಳುತ್ತಾರೆ.
ಕರೌಲಿಯ ಇಡೀ ಆರ್ಥಿಕತೆಯು ಮುಖ್ಯವಾಗಿ ಕೃಷಿಯ ಮೇಲೆ ನಿಂತಿದೆ. ಇಲ್ಲಿನ ಹೆಚ್ಚಿನ ನಿವಾಸಿಗಳು ಕೃಷಿಕರು, ಇಲ್ಲವೇ ಕೃಷಿ ಕಾರ್ಮಿಕರು (ಜನಗಣತಿ 2011). ಹೆಚ್ಚಾಗಿ ಮಳೆಯಾಧಾರಿತ ಕೃಷಿ ಮಾಡುವ ಈ ರಾಜ್ಯವು ಹಿಂದಿನಿಂದಲೂ ನೀರಿನ ಸಮಸ್ಯೆಯಿಂದ ಬಳಲುತ್ತಿದೆ.
ಮೀನಾ ಸಮುದಾಯದ ಮಹಿಳೆಯಾಗಿರುವ (ರಾಜ್ಯದಲ್ಲಿ ಒಬಿಸಿ ಎಂದು ಪರಿಗಣಿಸಲಾಗಿದೆ) ಚತ್ರಾ ದೇವಿಯವರು ಕಳೆದ 10 ವರ್ಷಗಳಲ್ಲಿ ಮಳೆಯಲ್ಲಾಗಿರುವ ಬದಲಾವಣೆಯನ್ನು ಗಮನಿಸುತ್ತಾ ಬಂದಿದ್ದಾರೆ. ರಾಜಸ್ಥಾನ ಭಾರತದ ಅತಿದೊಡ್ಡ ರಾಜ್ಯ (ಭೌಗೋಳಿಕವಾಗಿ) ಮತ್ತು ಇಲ್ಲಿನ ಜನಸಂಖ್ಯೆಯ 70 ಶೇಕಡಾದಷ್ಟು ಜನರು ತಮ್ಮ ಜೀವನೋಪಾಯಕ್ಕಾಗಿ ಕೃಷಿ ಹಾಗೂ ಪಶುಸಂಗೋಪನೆಯನ್ನು ನಂಬಿದ್ದಾರೆ.


