“ಮುಂದೆ ಎಡಕ್ಕೆ ತಿರುಗಿ. ಅಲ್ಲಿಂದ ಸ್ವಲ್ಪ ಕೆಳಗೆ ಹೋದರೆ, ಕಪ್ಪು ಕಂಬವೊಂದರ ಮೇಲೆ ಫೌಜಿಯೊಬ್ಬರ ಚಿತ್ರ ಕಾಣುತ್ತೀರಿ. ಅದೇ ಅವರ ಮನೆ.” ರಾಮಗಢ ಸರ್ದಾರಾ ಪ್ರದೇಶದ ವೃದ್ಧ ಸೈಕಲ್ ಮೆಕಾನಿಕ್ ಒಬ್ಬರು ಹೀಗೆ ದಾರಿ ತೋರಿಸಿದರು. ಹಳ್ಳಿಯ ಜನರು ಅಜಯ್ ಕುಮಾರ್ ಅವರನ್ನು ಸೈನಿಕ ಅಥವಾ ಹುತಾತ್ಮ ಎಂದು ಕರೆಯುತ್ತಾರೆ.
ಆದರೆ ಸರ್ಕಾರದ ದೃಷ್ಟಿಯಲ್ಲಿ ಅವರು ಎರಡೂ ಅಲ್ಲ.
ಈ 23 ವರ್ಷದ ಯುವಕ ನುಸುಳುಕೋರರ ವಿರುದ್ಧದ ಹೋರಾಟದಲ್ಲಿ ಜಮ್ಮು-ಕಾಶ್ಮೀರದ ಗಡಿಯಲ್ಲಿ ಬಡಿದಾಡಿ ತನ್ನ ನೆತ್ತರಿನ ಕೊನೆ ಹನಿ ಬಸಿಯುವ ತನಕವೂ ಬಡಿದಾಡಿದ್ದರು. ಆದರೆ ಈಗ ಅದ್ಯಾವುದೂ ಲೆಕ್ಕಕ್ಕಿಲ್ಲ. ಈಗ ಅವರ ವಯಸ್ಸಾದ ದಲಿತ, ಭೂರಹಿತ ತಂದೆ-ತಾಯಿ ಕನಿಷ್ಟ ಪಿಂಚಣಿಯ ಕನಸನ್ನೂ ಕಾಣುವಂತಿಲ್ಲ. ಇನ್ನು ಹುತಾತ್ಮ ಪದವಿ ದೂರದ ಮಾತು. ಅವರಿಗೆ ಮಾಜಿ ಸೈನಿಕರಿಗೆ ಸಿಗುವ ಸೌಲಭ್ಯಗಳಾದ ಆರೋಗ್ಯ ಸೌಲಭ್ಯ, ಪಡಿತರ ರಿಯಾಯಿತಿ ಮೊದಲಾದ ಸೌಲಭ್ಯಗಳು ಸಿಗುವುದಿಲ್ಲ. ಏಕೆಂದರೆ ಅಧಿಕೃತ ದಾಖಲೆಗಳಲ್ಲಿ ಅಜಯ್ ಕುಮಾರ್ ಅವರು ಸೈನಿಕನೂ ಅಲ್ಲ, ಹುತಾತ್ಮನೂ ಅಲ್ಲ.
ಅವರು ಕೇವಲ ಒಬ್ಬ ಅಗ್ನಿವೀರನಾಗಿದ್ದರು
ಲುಧಿಯಾಣಾ ಜಿಲ್ಲೆಯೊಳಗೆ ನೆಲೆಗೊಂಡಿರುವ ಈ ಹಳ್ಳಿಯಲ್ಲಿ, ಸರ್ಕಾರಿ ದಾಖಲೆಗಳು ಕನಿಷ್ಠ ಪ್ರಾಮುಖ್ಯತೆಯನ್ನು ಹೊಂದಿವೆ. ಗ್ರ್ಯಾಂಡ್ ಟ್ರಂಕ್ ರಸ್ತೆಯ ಮೂಲಕ 45 ನಿಮಿಷಗಳ ಕಾಲ ಪ್ರಯಾಣಿಸಿದರೆ ರಾಮಗಢ ಸರ್ದಾರಾ ಸಿಗುತ್ತದೆ, ಈ ಊರಿನ ದಾರಿಯಲ್ಲಿ ಅರಳುತ್ತಿರುವ ಸಾಸಿವೆ ಹೂವುಗಳಿಂದ ಅಲಂಕರಿಸಲ್ಪಟ್ಟ ಸುಂದರ ಹೊಲಗಳು ಕಣ್ಮನಗಳನ್ನು ತಣಿಸುತ್ತವೆ. ಈ ಗ್ರಾಮದ ಗೋಡೆಗಳು ತಮ್ಮದೇ ಆದ ಇತಿಹಾಸವನ್ನು ವಿವರಿಸುವಂತೆ ತೋರುತ್ತವೆ, ಆಲಿವ್ ಹಸಿರು ಬಣ್ಣದಲ್ಲಿ ಅಜಯ್ ಅವರ ಚಿತ್ರವನ್ನು ಒಳಗೊಂಡ ಹೋರ್ಡಿಂಗ್ಗಳು ಎಲ್ಲೆಡೆ ಕಾಣುತ್ತವೆ. ಈ ಚಿತ್ರಗಳು ಒಂದಲ್ಲ ಒಂದು ಬಗೆಯಲ್ಲಿ ಹುತಾತ್ಮ ಭಗತ್ ಸಿಂಗ್ ಅವರನ್ನು ನೆನಪಿಗೆ ತರುತ್ತವೆ. ಭಗತ್ ಸಿಂಗ್ ಸಹ ತೊಂಬತ್ತು ವರ್ಷಗಳ ಹಿಂದೆ ತಮ್ಮ ಕ್ರಾಂತಿಕಾರಿ ಸಂಗಾತಿಗಳೊಂದಿಗೆ ಗಲ್ಲಗಂಬಕ್ಕೆ ಕೊರಳು ಒಡ್ಡಿದವರು. ಆದರೆ ನಂತರದ ಆಡಳಿಗಳು ಅವರನ್ನು ಅಧಿಕೃತವಾಗಿ ಹುತಾತ್ಮನೆಂದು ಗುರುತಿಸಿಲ್ಲ.
ಊರಿನಲ್ಲಿದ್ದ ಒಂದು ಹೋರ್ಡಿಂಗ್ ಈ ಘೋಷಣೆಯನ್ನು ಹೊಂದಿತ್ತು:
ನವ್ ಜವಾನ್ ಜದ್ ಉಟದೇ ನೇ
ತಾನ್ ನಿಜಾಮ್ ಬದಲ್ ಜಾಂದೇ ನೇ
ಭಗತ್ ಸಿಂಗ್ ಆಜ್ ವಿ ಪೈದಾ ಹುಂದೇ ನೇ
ಬಸ್ ನಾಮ್ ಬದಲ್ ಜಾಂದೇ ನೇ
[ಯುವ ಜನರು ಎದ್ದು ನಿಂತ ದಿನವೇ
ಅರಸೊತ್ತಿಗೆಗಳು ಉರುಳಿ ಬೀಳುತ್ತವೆ
ಭಗತ್ ಸಿಂಗ್ ಇಲ್ಲಿ ಪ್ರತಿ ದಿನ ಜನಿಸುತ್ತಾರೆ
ಜನರು ಅವರನ್ನು ಬೇರೆ ಬೇರೆ ಹೆಸರಿನಿಂದ ಗುರುತಿಸುತ್ತಾರೆ]













