ಅಜೀಮ್ ಶೇಖ್ ಜೂನ್ 2023ರ ಮಧ್ಯದಲ್ಲಿ, ಔರಂಗಾಬಾದ್ ನಗರದಲ್ಲಿರುವ ವಿಭಾಗೀಯ ಆಯುಕ್ತರ ಕಚೇರಿಯ ಮುಂದೆ ಐದು ದಿನಗಳ ಕಾಲ ಉಪವಾಸ ಸತ್ಯಾಗ್ರಹ ನಡೆಸಿದರು.
ಬಿಸಿಲಿನ ತಾಪದ ನಡುವೆಯೂ 26 ವರ್ಷದ ಅಜೀಮ್ ಅಂದು ನೀರು ಬಿಟ್ಟರೆ ಬೇರೇನನ್ನೂ ಸೇವಿಸಲಿಲ್ಲ. ಮುಷ್ಕರದ ಅಂತ್ಯದ ವೇಳೆಗೆ ಅವರಿಗೆ ದಣಿದು ದೌರ್ಬಲ್ಯದಿಂದಾಗಿ ತಲೆ ತಿರುಗುತ್ತಿತ್ತು. ನೇರವಾಗಿ ನಡೆಯಲು ಕೂಡ ಕಷ್ಟಪಡುತ್ತಿದ್ದರು.
ಹಾಗಿದ್ದರೆ ಅವರ ಬೇಡಿಕೆ ಏನಾಗಿತ್ತು? ಅವರು ಪೊಲೀಸರಿಗೆ ದೂರು ನೀಡಲು ಬಯಸಿದ್ದರು. ಆದರೆ ಔರಂಗಾಬಾದ್ ನಗರದಿಂದ ಸುಮಾರು 80 ಕಿಲೋಮೀಟರ್ ದೂರದಲ್ಲಿರುವ ಜಲ್ನಾ ಜಿಲ್ಲೆಯ ಅವರ ಗ್ರಾಮದ ಬಳಿಯ ಸ್ಥಳೀಯ ಪೊಲೀಸ್ ಠಾಣೆ ದೂರು ದಾಖಲಿಕೊಂಡಿರಲಿಲ್ಲ.
ಕಳೆದ ವರ್ಷ, 19 ಮೇ 2023ರಂದು, ಮರಾಠ ಸಮುದಾಯಕ್ಕೆ ಸೇರಿದ ಸೋನಾವಣೆ ಕುಟುಂಬದ ಸದಸ್ಯರು ರಾತ್ರಿ 11 ಗಂಟೆಗೆ ಅಜೀಂ ಅವರ ಮನೆಗೆ ನುಗ್ಗಿ ಅವರ ಕುಟುಂಬದ ಮೇಲೆ ದೊಣ್ಣೆ ಮತ್ತು ಕಲ್ಲುಗಳಿಂದ ದಾಳಿ ಮಾಡಿದರು. ಈ ವೇಳೆ ಅವರ ಸಹೋದರ ಹಾಗೂ ಪೋಷಕರು ಗಾಯಗೊಂಡಿದ್ದಾರೆ. ಅವರು ಪರಿಗೆ ಹೇಳಿದಂತೆ, “ನನ್ನ ವಯಸ್ಸಾದ ತಾಯಿಯನ್ನು ಆಸ್ಪತ್ರೆಗೆ ಸೇರಿಸಬೇಕಾಗಿತ್ತು. ಈ ದಾಳಿಯನ್ನು ಕ್ರೌರ್ಯದಿಂದ ನಡೆಸಲಾಗಿದೆ. ಮನೆಯಲ್ಲಿದ್ದ 1.5 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ಹಾಗೂ ನಗದು ದೋಚಿದ್ದಾರೆ.”
ಹಲ್ಲೆ ನಡೆಸಿದ ಗುಂಪಿನ ಭಾಗವಾಗಿದ್ದರು ಎಂದು ಅಜೀಮ್ ಆರೋಪಿಸಿರುವ ನಿತಿನ್ ಸೋನಾವಾಣೆಯನ್ನು ಈ ವರದಿಗಾರ ಸಂಪರ್ಕಿಸಿದರು. ಈ ವಿಷಯದ ಬಗ್ಗೆ ಪ್ರತಿಕ್ರಿಯಿಸಲು ಸೋನಾವಾನೆ ನಿರಾಕರಿಸಿದ ಮತ್ತು "ಘಟನೆಯ ಬಗ್ಗೆ ನನಗೆ ಏನೂ ತಿಳಿದಿಲ್ಲ" ಎಂದು ಹೇಳಿದನು.
ಅಜೀಮ್ ಅವರ ಮನೆ ಮಧ್ಯ ಮಹಾರಾಷ್ಟ್ರದ ಭೋಕರ್ದಾನ್ ತಾಲ್ಲೂಕಿನ ಪಾಲಸ್ಖೇಡಾ ಮುರ್ತಾದ್ ಎಂಬ ಹಳ್ಳಿಯಿಂದ ಸುಮಾರು ಎರಡು ಕಿಲೋಮೀಟರ್ ದೂರದಲ್ಲಿರುವ ಎಂಟು ಎಕರೆ ಕೃಷಿ ಭೂಮಿಯ ನಡುವೆ ಇದೆ.
"ರಾತ್ರಿಯಲ್ಲಿ ನಿರ್ಜನವಾಗಿದ್ದು ಶಾಂತವಾಗಿರುತ್ತದೆ. ಹೀಗಾಗಿ ಸಹಾಯಕ್ಕಾಗಿ ಯಾರನ್ನಾದರೂ ಕರೆಯುವುದಕ್ಕೂ ಸಾಧ್ಯವಾಗಲಿಲ್ಲ."







