“ಎಸ್ಡಿಎಮ್ [ಸಬ್ ಡಿವಿಜನಲ್ ಮ್ಯಾಜಿಸ್ಟ್ರೇಟ್] ಇಲ್ಲಿಗೆ ಜೂನ್ ತಿಂಗಳಿನಲ್ಲಿ ಬಂದು, ʼನೀವು ಇಲ್ಲಿಂದ ಹೊರಡುವಂತೆ ಸೂಚಿಸಿ ನೋಟಿಸ್ ನೀಡುತ್ತಿದ್ದೇವೆ” ಎಂದರು.
ಗಾಧ್ರಾ ಗ್ರಾಮದ ನಿವಾಸಿ ಬಾಬುಲಾಲ್ ಆದಿವಾಸಿ ಊರಿನ ಬಾಗಿಲಿನಲ್ಲಿರುವ ಆಲದ ಮರವೊಂದನ್ನು ತೋರಿಸಿದರು. ಅದು ಸಮುದಾಯಕ್ಕೆ ಸಂಬಂಧಿಸಿದ ವಿಷಯಗಳಿಗೆ ಜನರು ಒಗ್ಗೂಡುವ ಜಾಗ. ಈಗ ಅದೇ ಜಾಗ ಅವರ ಊರಿನ ಜನರ ಭವಿಷ್ಯವನ್ನು ಬದಲಾಯಿಸಿದ ದಿನಕ್ಕೆ ಸಾಕ್ಷಿಯೂ ಆಗಿದೆ.
ಮಧ್ಯಪ್ರದೇಶದ ಪನ್ನಾ ಟೈಗರ್ ರಿಸರ್ವ್ (ಪಿಟಿಆರ್) ಮತ್ತು ಸುತ್ತಮುತ್ತಲಿನ 22 ಗ್ರಾಮಗಳ ಸಾವಿರಾರು ನಿವಾಸಿಗಳಿಗೆ ಅಣೆಕಟ್ಟು ಮತ್ತು ನದಿ ಜೋಡಣೆ ಯೋಜನೆಯೊಂದರ ಸಲುವಾಗಿ ತಮ್ಮ ಮನೆಗಳು ಮತ್ತು ಭೂಮಿಯನ್ನು ತೊರೆಯುವಂತೆ ಆದೇಶ ನೀಡಲಾಗಿದೆ. ಈ ಯೋಜನೆಗೆ 2017ರಲ್ಲೇ ಪರಿಸರ ಸಂಬಂಧಿ ವಿಷಯಕ್ಕೆ ಸಂಬಂಧಿಸಿದ ಅಂತಿಮ ಅನುಮತಿಗಳು ದೊರಕಿದ್ದವು. ಮತ್ತು ಈಗಾಗಲೇ ಈ ರಾಷ್ಟ್ರೀಯ ಉದ್ಯಾನದಲ್ಲಿ ಮರಗಳನ್ನು ಕಡಿಯಲು ಆರಂಭಿಸಲಾಗಿದೆ. ಅದೇ ಸಮಯಕ್ಕೆ ತಕ್ಷಣವೇ ಇಲ್ಲಿಂದ ಹೊರಬೀಳಬೇಕಾದ ಅನಿವಾರ್ಯತೆಗೂ ಇಲ್ಲಿನ ಜನರು ಒಳಗಾಗಿದ್ದಾರೆ.
ಕೆನ್ ಮತ್ತು ಬೆತ್ವಾ ನದಿಗಳನ್ನು 218 ಕಿಲೋಮೀಟರ್ ಉದ್ದದ ಕಾಲುವೆಯೊಂದಿಗೆ ಸಂಪರ್ಕಿಸುವ 44,605 ಕೋಟಿ ರೂ.ಗಳ ಯೋಜನೆ (ಹಂತ 1) ಈ ಯೋಜನೆಯು ಎರಡು ದಶಕಗಳಿಂದ ಬಾಕಿಯಿತ್ತು.
ಆದರೆ ಈ ಯೋಜನೆ ವ್ಯಾಪಕ ವಿಮರ್ಶೆಗಳಿಗೆ ಪಕ್ಕಾಗಿದೆ. “ಈ ಯೋಜನೆಗೊಂದು ಸಮರ್ಥನೆಯೇ ಇಲ್ಲ. ಜಲವಿಜ್ಞಾನದ ಪ್ರಕಾರವಾಗಿಯೂ ಇಲ್ಲ. ಮೊದಲಿಗೆ ಕೆನ್ ನದಿಯಲ್ಲಿ ಹೆಚ್ಚುವರಿ ನೀರಿಲ್ಲ. ಈ ಕುರಿತು ಯಾವುದೇ ವಿಶ್ವಾಸಾರ್ಹ ಮೌಲ್ಯಮಾಪನ ಅಥವಾ ವಸ್ತುನಿಷ್ಠ ಅಧ್ಯಯನವನ್ನೂ ಮಾಡಲಾಗಿಲ್ಲ. ಕೇವಲ ಪೂರ್ವನಿರ್ಧರಿತ ತೀರ್ಮಾನಗಳ ಮೇಲೆ ಈ ಯೋಜನೆ ನಿಂತಿದೆ” ಎಂದು 35 ವರ್ಷಗಳಿಂದ ನೀರಾವರಿ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ವಿಜ್ಞಾನಿ ಹಿಮಾಂಶು ಠಕ್ಕರ್ ಹೇಳುತ್ತಾರೆ.
ಠಕ್ಕರ್ ಅವರು ಸೌತ್ ಏಷಿಯಾ ನೆಟ್ವರ್ಕ್ ಆನ್ ಡ್ಯಾಮ್ಸ್ ಎಂಡ್ ಪೀಪಲ್ (ಎಸ್ಎಎನ್ಡಿಆರ್ಪಿ) ಸಂಸ್ಥೆಯ ಸಂಯೋಜಕರು. ಅವರು 2004ರಲ್ಲಿ ಜಲಸಂಪನ್ಮೂಲ ಸಚಿವಾಲಯವು (ಪ್ರಸ್ತುತ ಜಲಶಕ್ತಿ) ನದಿಗಳ ಜೋಡಣೆಗೆ ಸಂಬಂಧಿಸಿದಂತೆ ರಚಿಸಿದ್ದ ತಜ್ಞರ ಸಮಿತಿಯ ಸದಸ್ಯರಾಗಿದ್ದರು. "ನದಿ ಜೋಡಣೆಯು ಅರಣ್ಯ, ನದಿ, ಜೀವವೈವಿಧ್ಯತೆಯ ಮೇಲೆ ಭಾರಿ ಪರಿಸರ ಮತ್ತು ಸಾಮಾಜಿಕ ಪರಿಣಾಮಗಳನ್ನು ಬೀರುತ್ತದೆ ಮತ್ತು ಇಲ್ಲಿನ ಮತ್ತು ಬುಂದೇಲಖಂಡ್ ಮತ್ತು ಅದರಾಚೆಗಿನ ಜನರನ್ನು ಬಡತನಕ್ಕೆ ತಳ್ಳುತ್ತದೆ" ಎಂದು ಅವರು ಹೇಳುತ್ತಾರೆ.





























