ಗುಡಪುರಿ ಬಾಲರಾಜು, ತಮ್ಮ ಆಟೋರಿಕ್ಷಾದ ಹಿಂದಿನ ಸೀಟನ್ನು ತೆಗೆದು, ಸುಮಾರು 600 ಕೆ.ಜಿ. ಕಲ್ಲಂಗಡಿ ಹಣ್ಣನ್ನು ತುಂಬಿಸಿದರು. ತಮ್ಮ ಸ್ವಂತ ಹಳ್ಳಿಯಾದ ವೆಂಪಹದ್ನಿಂದ ಸುಮಾರು 30 ಕಿ. ಮೀ. ದೂರದ ವೆಲ್ಲಿದಂಡುಪಡು ಪಾಳ್ಯದ ಕೊಪ್ಪೊಲೆ ಹಳ್ಳಿಯ ರೈತನೊಬ್ಬನಿಂದ ಇದೀಗ ಅವರು ಈ ಹಣ್ಣನ್ನು ಖರೀದಿಸಿದ್ದಾರೆ.
ನಲ್ಗೊಂಡ ಜಿಲ್ಲೆಯ ನಿಡಮನುರ್ ಮಂಡಲ್ನ ಅನೇಕ ಹಳ್ಳಿಗಳಲ್ಲಿ ತಮ್ಮ ವಾಹನವನ್ನು ಚಲಾಯಿಸುತ್ತಾ, 1ರಿಂದ 3 ಕೆ.ಜಿ. ತೂಕದ ಕೆಲವು ಹಣ್ಣುಗಳನ್ನು ತಲಾ 10 ರೂ.ಗಳಿಗೆ ಅವರು ಮಾರುತ್ತಾರೆ. ಹಣ್ಣುಗಳ ಮಾರಾಟವಿಲ್ಲದಾಗ, ವಾಹನದಲ್ಲಿ, ಪ್ರಯಾಣಿಕರನ್ನು ಕರೆದೊಯ್ಯುವ ಅವರಿಗೆ ಅಂದು ಮಾರಾಟವು ದುಸ್ಸಾಹಸವೆನಿಸತೊಡಗಿತು. ಹಳ್ಳಿಗರಿಗೆ ಇವರು ಹಳ್ಳಿಗೆ ಬರುವುದು ಬೇಡವಾಗಿತ್ತು. “ಕೆಲವರು ಇದನ್ನು ಕೊರೊನಾ ಕಾಯ (ಕಾಯಿ) ಎಂದು ಕರೆಯುತ್ತಿದ್ದು, ಇಲ್ಲಿಗೆ ಬರಬೇಡಿ. ಹಣ್ಣುಗಳೊಂದಿಗೆ ವೈರಸ್ ಕೂಡ ತರುತ್ತೀರಿ” ಎನ್ನುತ್ತಿದ್ದರೆಂಬುದಾಗಿ 29ರ ವಯಸ್ಸಿನ ಬಾಲರಾಜು ನಮಗೆ ತಿಳಿಸಿದರು.
ಮಾರ್ಚ್ 23ರ ನಂತರ, ತೆಲಂಗಾಣದಲ್ಲಿ ಕೋವಿಡ್-19 ಲಾಕ್ಡೌನ್ ಆರಂಭಗೊಂಡ ತರುವಾಯ, ಹಣ್ಣುಗಳ ಮಾರಾಟದಿಂದ ಇವರ ದಿನಂಪ್ರತಿ ಸಂಪಾದನೆ ಕೇವಲ 600 ರೂ.ಗಳು. ಲಾಕ್ಡೌನ್ಗಿಂತ ಮೊದಲು, ಹಣ್ಣಿನ ಕಟಾವಿನ ಸಮಯದ ಕೆಲವು ವಾರಗಳಲ್ಲಿ ಇವರು, ದಿನಂಪ್ರತಿ ಸುಮಾರು 1,500 ರೂ.ಗಳನ್ನು ಗಳಿಸುತ್ತಿದ್ದರು. ಸಾಮಾನ್ಯವಾಗಿ ಇಲ್ಲಿ, ಜನವರಿ ತಿಂಗಳ ಆರಂಭದಲ್ಲಿ ಕಲ್ಲಂಗಡಿ ಕೃಷಿಯು ಆರಂಭಗೊಂಡು, ಎರಡು ತಿಂಗಳ ತರುವಾಯ ಅದರ ಫಸಲನ್ನು ಪಡೆಯಲಾಗುತ್ತದೆ.
ಮಾರಾಟದಲ್ಲಿನ ಇಳಿಕೆ ಹಾಗೂ ಜನರ ಟೀಕೆಗಳಿಂದಾಗಿ, ಏಪ್ರಿಲ್ 1ರಂದು ಕೊಂಡು ತಂದ ಕಲ್ಲಂಗಡಿ ಹಣ್ಣುಗಳ ಮಾರಾಟವನ್ನು ನಿರ್ವಹಿಸಿದ ನಂತರ, ಹೊರಗೆ ಹೋಗಲು ಇಚ್ಛಿಸಲಿಲ್ಲವೆಂಬುದಾಗಿ ಬಾಲರಾಜು ತಿಳಿಸಿದರು. ಇವರಂತೆಯೇ, ಕಲ್ಲಂಗಡಿ ಹಣ್ಣಿನ ಕೃಷಿ ಹಾಗೂ ಮಾರಾಟದಲ್ಲಿ ತೊಡಗಿದ ಅನೇಕ ರೈತರು, ಕೂಲಿಕಾರರು ಮತ್ತು ವ್ಯಾಪಾರಿಗಳು ಕೋವಿಡ್-19 ಸಂಕಷ್ಟದಿಂದಾಗಿ ತೊಂದರೆಗೀಡಾಗಿದ್ದಾರೆ.
ಹಣ್ಣುಗಳನ್ನು ಕಿತ್ತು, ಟ್ರಕ್ಗಳಿಗೆ ತುಂಬುವ ಕೂಲಿಕಾರರಲ್ಲಿ ಬಹುತೇಕರು ಮಹಿಳೆಯರಾಗಿದ್ದು, ದಿನಗೂಲಿಯನ್ನು ಅವಲಂಬಿಸಿದ್ದಾರೆ. 10 ಟನ್ಗಳ ಟ್ರಕ್ಗೆ ಸರಕನ್ನು ತುಂಬಿಸುವ 7-8 ಮಹಿಳೆಯರು, 4 ಸಾವಿರ ರೂ.ಗಳ ತತ್ಸಂಬಂಧಿತ ಸಂಪಾದನೆಯನ್ನು ಸಮನಾಗಿ ಹಂಚಿಕೊಳ್ಳುತ್ತಾರೆ. ಬಹುಪಾಲು ದಿನಗಳಲ್ಲಿ, ಒಂದು ಗುಂಪು, ಎರಡು ಟ್ರಕ್ಗಳ ಸರಕನ್ನು, ಕೆಲವೊಮ್ಮೆ ಮೂರು ಟ್ರಕ್ಗಳನ್ನು ತುಂಬಿಸುತ್ತದೆ. ಆದಾಗ್ಯೂ, ಲಾಕ್ಡೌನ್ ನಂತರದಲ್ಲಿ, ತೆಲಂಗಾಣದ ನಗರಗಳಿಗೆ ಹಣ್ಣನ್ನು ಸಾಗಿಸುವ ಟ್ರಕ್ಗಳ ಸಂಖ್ಯೆ ಕುಸಿದಿರುವ ಕಾರಣ, ಇವರ ಕೂಲಿಯೂ ಕಡಿಮೆಯಾಗಿದೆ.










