ನಾನು ಜಾಮ್ ನಗರ ಜಿಲ್ಲೆಯ ಲಾಲ್ಪುರ್ ತಾಲ್ಲೂಕಿನ ಸಿಂಗಚ್ ಗ್ರಾಮದ ರಾಬರಿ ಕುಟುಂಬದಿಂದ ಬಂದವಳು. ಬರವಣಿಗೆ ನನ್ನ ಪಾಲಿಗೆ ಹೊಸದು, ಇದು ಕೊರೊನಾ ಸಮಯದಲ್ಲಿ ನಾನು ರೂಢಿಸಿಕೊಂಡ ಆಸಕ್ತಿ. ಗ್ರಾಮೀಣ ಸಮುದಾಯಗಳೊಂದಿಗೆ ಕೆಲಸ ಮಾಡುವ ಸರ್ಕಾರೇತರ ಸಂಸ್ಥೆಯೊಂದಿಗೆ ಸಮುದಾಯ ಸಂಘಟಕಿಯಾಗಿ ನಾನು ಕೆಲಸ ಮಾಡುತ್ತೇನೆ. ನಾನು ದರೂಶಿಕ್ಷಣದ ಮೂಲಕ ಗುಜರಾತಿ ವಿಷಯದಲ್ಲಿ ಪದವಿಯನ್ನು ಓದುತ್ತಿದ್ದೇನೆ. ಕಳೆದ 9 ತಿಂಗಳಿನಿಂದ ನನ್ನ ಸಮುದಾಯದ ಜನರಲ್ಲಿ ಶಿಕ್ಷಣದ ಬಗ್ಗೆ ಜಾಗೃತಿ ಮತ್ತು ಆಸಕ್ತಿಯನ್ನು ಬೆಳೆಸಲು ಪ್ರಯತ್ನಿಸುತ್ತಿದ್ದೆ. ಮುಂದುವರಿಯಬಹುದೇ ಎಂದು ನನಗೆ ಖಚಿತವಿಲ್ಲ. ನನ್ನ ಸಮುದಾಯದಲ್ಲಿ ಮಹಿಳೆಯರಲ್ಲಿ ಶಿಕ್ಷಣದ ಮಟ್ಟವು ಆತಂಕಕಾರಿಯಾಗಿ ಕಡಿಮೆಯಿದೆ. ನೀವು ಇಲ್ಲಿ ಕೆಲವೇ ಕೆಲವು ವಿದ್ಯಾವಂತ ಮಹಿಳೆಯರನ್ನು ಕಾಣಬಹುದು.
ನಾವು ಮೂಲತಃ, ಚರಣ್, ಭರ್ವಾಡ್, ಅಹಿರ್ ಮುಂತಾದ ಇತರ ಸಮುದಾಯಗಳೊಂದಿಗೆ ಕುರಿ ಸಾಕಾಣಿಕೆಯಲ್ಲಿ ತೊಡಗಿರುವ ಗ್ರಾಮೀಣ ಸಮುದಾಯಗಳಾಗಿದ್ದೆವು. ನಮ್ಮಲ್ಲಿ ಅನೇಕರು ಈಗ ನಮ್ಮ ಸಾಂಪ್ರದಾಯಿಕ ಉದ್ಯೋಗಗಳನ್ನು ತ್ಯಜಿಸಿದ್ದಾರೆ ಮತ್ತು ದೊಡ್ಡ ಕಂಪನಿಗಳಲ್ಲಿ ಅಥವಾ ಹೊಲಗಳಲ್ಲಿ ದಿನಗೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಕಾರ್ಖಾನೆಗಳು ಮತ್ತು ಹೊಲಗಳಲ್ಲಿ ಕಾರ್ಮಿಕರಾಗಿ ದುಡಿಯುವ ಮಹಿಳೆಯರಿದ್ದಾರೆ. ಸಮಾಜವು ಈ ಮಹಿಳೆಯರನ್ನು ಮತ್ತು ಅವರ ಕೆಲಸವನ್ನು ಸ್ವೀಕರಿಸುತ್ತದೆ, ಆದರೆ ನನ್ನಂತೆ ಏಕಾಂಗಿಯಾಗಿ ಕೆಲಸ ಮಾಡುವವರಿಗೆ ಸಾಮಾಜಿಕ ಅನುಮೋದನೆಯನ್ನು ಪಡೆಯಲು ಕಷ್ಟವಾಗುತ್ತದೆ.



