ಆ ರಾತ್ರಿ ಇಡೀ ಗುಡ್ಡವೇ ಕುಸಿದುಬಿತ್ತು.
ರಾತ್ರಿ ಸುಮಾರು 11 ಗಂಟೆಯ ಸಮಯ. ಆ ಸಮಯದಲ್ಲಿ ಅನಿತಾ ಬಕಾಡೆ ನಿದ್ರಿಸುತ್ತಿದ್ದರು ಹಾಗೂ ಅವರ 17 ಜನರ ಅವಿಭಕ್ತ ಕುಟುಂಬದ ಪ್ರತಿಯೊಬ್ಬರೂ ಹತ್ತಿರದಲ್ಲೇ ಇರುವ 4-5 ಮನೆಗಳಲ್ಲಿ ಮಲಗಿದ್ದರು. ಅವರು ಹೇಳುತ್ತಾರೆ, “ಜೋರಾದ ಸದ್ದು ನಿದ್ರೆಯಲ್ಲಿದ್ದ ನಮ್ಮನ್ನು ಎಚ್ಚರಿಸಿತು, ಎಚ್ಚರವಾಗುತ್ತಿದ್ದಂತೆಯೇ ಏನಾಗುತ್ತಿದೆ ಎನ್ನುವುದು ನಮ್ಮ ಅರಿವಿಗೆ ಬಂತು. ಗಾಢ ಕತ್ತಲಲ್ಲಿ ಅಲ್ಲಿ ಇಲ್ಲಿ ಓಡತೊಡಗಿದೆವು. ಸ್ವಲ್ಪ ಸಮಯದಲ್ಲೇ ನಮ್ಮ ಮನೆಯ ಅಕ್ಕಪಕ್ಕದ ಮನೆಗಳೆಲ್ಲ ಕುಸಿದು ಬಿದ್ದವು.
ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಪಟಾನ್ ತಾಲ್ಲೂಕಿನ ಸಹ್ಯಾದ್ರಿ ಪರ್ವತ ಶ್ರೇಣಿಯ ನಡುವೆ ಇರುವ ಮಿರ್ಗಾಂವ್ ಎಂಬ ಹಳ್ಳಿಗೆ ಅಪ್ಪಳಿಸಿದ ಭೂಕುಸಿತದಿಂದ ಅನಿತಾ ಅವರ ಮನೆ ಪಾರಾಗಿದೆ. ಆದರೆ ಅವರು ಈ ವರ್ಷದ ಜುಲೈ 22ರ ರಾತ್ರಿ ತಮ್ಮ ಜಂಟಿ ಕೃಷಿ ಕುಟುಂಬದ 11 ಸದಸ್ಯರನ್ನು ಕಳೆದುಕೊಂಡರು. ಅವರಲ್ಲಿ ಕಿರಿಯವನು ಏಳು ವರ್ಷದ ಯುವರಾಜ್, ಸೋದರಳಿಯ, ಹಿರಿಯವರು 80 ವರ್ಷದ ಯಶೋದಾ ಬಕಾಡೆ, ಅನಿತಾರ ದೂರದ ಸಂಬಂಧಿ.
ಮರುದಿನ ಬೆಳಗ್ಗೆಯೇ ವಿಪತ್ತು ರಕ್ಷಣಾ ತಂಡ ಅಲ್ಲಿಗೆ ತಲುಪಿದ್ದು, ಮಧ್ಯಾಹ್ನದ ವೇಳೆಗೆ ಗ್ರಾಮದ ಅನಿತಾ ಹಾಗೂ ಇತರರನ್ನು ಸುಮಾರು 6 ಕಿ.ಮೀ ದೂರದಲ್ಲಿನ ಕೊಯ್ನಾನಗರ ಗ್ರಾಮದಲ್ಲಿರುವ ಜಿಲ್ಲಾ ಪರಿಷತ್ ಶಾಲೆಗೆ ಸ್ಥಳಾಂತರಿಸಲಾಯಿತು. ಮಿರ್ಗಾಂವ್ ಬೃಹತ್ ಕೊಯ್ನಾ ಅಣೆಕಟ್ಟು ಮತ್ತು ಜಲವಿದ್ಯುತ್ ಸ್ಥಾವರದಿಂದ ಸುಮಾರು 5 ಕಿಲೋಮೀಟರ್ ದೂರದಲ್ಲಿದೆ.










