ಕಳೆದ ಮೂರು ವರ್ಷಗಳಲ್ಲಿ ನೀವು ಎಷ್ಟು ಆಸ್ಪತ್ರೆಯಲ್ಲಿ ತೋರಿಸಿಕೊಂಡಿದ್ದೀರಿ?
ಈ ಪ್ರಶ್ನೆಯನ್ನು ಕೇಳುತ್ತಿದ್ದ ಹಾಗೆ ಸುಶೀಲಾ ದೇವಿ ಮತ್ತು ಅವರ ಪತಿ ಮನೋಜ್ ಕುಮಾರ್ ಅವರ ಮುಖದಲ್ಲಿ ನಿರಾಶೆ ಮತ್ತು ಆಯಾಸದ ಮೋಡ ಕವಿಯುತ್ತದೆ. ಜೂನ್ 2017ರಲ್ಲಿ ಬಂಡಿಕುಯಿ ನಗರದ ಮಧುರ್ ಆಸ್ಪತ್ರೆಯಲ್ಲಿ ಸುಶೀಲಾರಿಗೆ ಮೊದಲ ಬಾರಿಗೆ ಸಂತಾನ ಹರಣ ಚಿಕಿತ್ಸೆ ನಡೆಸಿದ ನಂತರ ಅವರಿಬ್ಬರಿಗೂ (ಅವರ ಹೆಸರುಗಳನ್ನು ಇಲ್ಲಿ ಬದಲಾಯಿಸಲಾಗಿದೆ) ತಾವು ಅಲೆದ ಆಸ್ಪತ್ರೆಗಳು ಎಷ್ಟೆನ್ನುವುದು, ಪಡೆದ ಚಿಕಿತ್ಸೆಗಳು ಯಾವುವು ಯಾವುದೆನ್ನುವದು ನೆನಪಿಲ್ಲ.
ಮದುವೆಯಾದ 10 ವರ್ಷಗಳಲ್ಲಿ ಮೂರು ಹೆಣ್ಣು ಮಕ್ಕಳ ನಂತರ ಒಬ್ಬ ಮಗ ನಾಲ್ಕನೇ ಮಗುವಾಗಿ ಜನಿಸಿದನು, ತಮ್ಮ ಮಗನ ಜನನದ ಒಂದು ವರ್ಷದ ನಂತರ, ದಂಪತಿಗಳು ತಮ್ಮ ಕುಟುಂಬ ಮತ್ತು ಜೀವನವನ್ನು ಉತ್ತಮವಾಗಿ ನಿರ್ವಹಿಸುವ ಆಶಯದೊಂದಿಗೆ 27 ವರ್ಷದ ಸುಶೀಲಾರಿಗೆ ಟ್ಯೂಬಲ್ ಲಿಗೇಷನ್ (ಸಂತಾನ ಶಕ್ತಿ ಹರಣ ಚಿಕಿತ್ಸೆ) ನಿರ್ಧರಿಸಿದರು. ರಾಜಸ್ಥಾನದ ದೌಸಾ ತಹಸಿಲ್ನಲ್ಲಿರುವ ಅವರ ಹಳ್ಳಿ ಧನಿ ಜಮಾ, ಧನಿ ಜಮಾದಿಂದ ಕೇವಲ ಮೂರು ಕಿಲೋಮೀಟರ್ ದೂರದಲ್ಲಿರುವ ಕುಂಡಲ್ ಗ್ರಾಮದಲ್ಲಿ ಸರ್ಕಾರಿ ಸಾರ್ವಜನಿಕ ಆರೋಗ್ಯ ಕೇಂದ್ರ (ಪಿಎಚ್ಸಿ) ಇದ್ದರೂ ತಮ್ಮ ಹಳ್ಳಿಯಿಂದ 20 ಕಿಲೋಮೀಟರ್ ದೂರದಲ್ಲಿರುವ ಬಂಡಿಕುಯಿಯ ಖಾಸಗಿ ಆಸ್ಪತ್ರೆಯನ್ನೇ ಅವರು ಚಿಕಿತ್ಸೆಗಾಗಿ ಆದ್ಯತೆಯಾಗಿ ಆಯ್ದುಕೊಂಡರು.
“[ಸರ್ಕಾರಿ] ಆರೋಗ್ಯ ಕೇಂದ್ರಗಳಲ್ಲಿ ಸಂತಾನ ಶಕ್ತಿ ಹರಣ ಶಿಬಿರಗಳು ಹೆಚ್ಚಾಗಿ ಚಳಿಗಾಲದ ತಿಂಗಳುಗಳಲ್ಲಿ ನಡೆಯುತ್ತವೆ. ಆ ಸಮಯದಲ್ಲಿ ಗಾಯವು ವೇಗವಾಗಿ ಗುಣವಾಗುವುದರಿಂದ ಮಹಿಳೆಯರು ಚಳಿಯ ತಿಂಗಳುಗಳಲ್ಲಿ ಸಂತಾನ ಶಕ್ತಿ ಹರಣ ಚಿಕಿತ್ಸೆಗೆ ಒಳಗಾಗಲು ಬಯಸುತ್ತಾರೆ. ಬೇಸಿಗೆಯ ತಿಂಗಳುಗಳಲ್ಲಿ ಅವರು ಶಸ್ತ್ರಚಿಕಿತ್ಸೆ ಬಯಸಿದರೆ, ನಾವು ಅವರನ್ನು ದೌಸಾ ಮತ್ತು ಬಂಡಿಕುಯಿಯಲ್ಲಿನ ಖಾಸಗಿ ಆಸ್ಪತ್ರೆಗಳಿಗೆ ಕರೆದೊಯ್ಯುತ್ತೇವೆ ”ಎಂದು ಮಾನ್ಯತೆ ಪಡೆದ ಸಾಮಾಜಿಕ ಆರೋಗ್ಯ ಕಾರ್ಯಕರ್ತೆ (ಆಶಾ) 31 ವರ್ಷದ ಸುನೀತಾ ದೇವಿ ಹೇಳುತ್ತಾರೆ. ಅವರು ಈ ದಂಪತಿಗಳೊಂದಿಗೆ 25 ಹಾಸಿಗೆಗಳ ಸಾಮಾನ್ಯ ಆಸ್ಪತ್ರೆಯಾದ ಮಧುರ್ ಆಸ್ಪತ್ರೆಗೆ ಹೋದರು. ಆಸ್ಪತ್ರೆಯನ್ನು ರಾಜ್ಯ ಕುಟುಂಬ ಕಲ್ಯಾಣ ಯೋಜನೆಯಡಿ ನೋಂದಾಯಿಸಲಾಗಿರುವುದರಿಂದ ಇಲ್ಲಿ ಸಂತಾನ ಶಕ್ತಿ ಹರಣ ಚಿಕಿತ್ಸೆಗಾಗಿ ಸುಶೀಲಾರಿಂದ ಯಾವುದೇ ಹಣವನ್ನು ಪಡೆಯಲಿಲ್ಲ. ಬದಲಾಗಿ, ಅವರಿಗೆ 1,400 ರೂ.ಗಳ ಪ್ರೋತ್ಸಾಹ ಧನವನ್ನು ನೀಡಲಾಯಿತು.
ಶಸ್ತ್ರಚಿಕಿತ್ಸೆಯ ಕೆಲವು ದಿನಗಳ ನಂತರ, ಸುಶೀಲಾ ಮುಟ್ಟಾದರು, ಮತ್ತು ಅದರೊಂದಿಗೆ ಅವರ ಮುಂದಿನ ಮೂರು ವರ್ಷಗಳ ಕಾಲದ ಬಳಲಿಕೆ ಮತ್ತು ಕಡು ಯಾತನೆಯ ನೋವಿನಿಂದ ಕೂಡಿದ ದಿನಗಳೂ ಪ್ರಾರಂಭವಾದವು.
“ಮೊದಮೊದಲು ನೋವು ಪ್ರಾರಂಭವಾದಾಗ, ನಾನು ಅವಳಿಗೆ ಮನೆಯಲ್ಲಿಯೇ ನೋವು ನಿವಾರಕಗಳನ್ನು ನೀಡಿದೆ. ಇದು ಒಂದಿಷ್ಟು ಆರಾಮ ನೀಡಿತು. ಆದರೆ ಪ್ರತಿ ತಿಂಗಳೂ ಮುಟ್ಟಾದಾಗ ಅವಳು ನೋವಿನಿಂದ ಅಳುತ್ತಿದ್ದಳು ”ಎಂದು 29 ವರ್ಷದ ಮನೋಜ್ ಹೇಳುತ್ತಾರೆ.
"ನೋವು ಹೆಚ್ಚುತ್ತಲೇ ಇತ್ತು ಮತ್ತು ಅತಿಯಾದ ರಕ್ತಸ್ರಾವದಿಂದಾಗಿ ನನಗೆ ವಾಕರಿಕೆ ಬರಲಾರಂಭಿಸಿತು. ನಾನು ಯಾವಾಗಲೂ ದುರ್ಬಲಳಾಗಿರುತ್ತಿದ್ದೆ ”ಎಂದು 8ನೇ ತರಗತಿಯವರೆಗೆ ಓದಿರುವ ಗೃಹಿಣಿ ಸುಶೀಲಾ ಹೇಳುತ್ತಾರೆ.
ಇದು ಮೂರು ತಿಂಗಳ ಕಾಲ ಹೀಗೆ ಮುಂದುವರಿದಾಗ, ಗಂಡ ಮತ್ತು ಹೆಂಡತಿ ಹಿಂಜರಿಕೆಯಿಂದಲೇ ಕುಂಡಲ್ನ ಪಿಎಚ್ಸಿಗೆ ಹೋದರು.







